ಆ್ಯಪ್ನಗರ

ವಿಶ್ವನಾಥ್‌ ಸ್ವಾಭಿಮಾನವಿಲ್ಲದ ವ್ಯಕ್ತಿ: ಸಿಎಂ ವಾಗ್ದಾಳಿ

ಜೆಡಿಎಸ್‌ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಒಬ್ಬ ಸ್ವಾಭಿಮಾನವಿಲ್ಲದ ವ್ಯಕ್ತಿ. ಇಂತವರು ಎಂಎಲ್‌ಎ ಆಗಲೂ ಅರ್ಹರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Vijaya Karnataka 9 May 2018, 5:00 am

ಹುಣಸೂರು: ಜೆಡಿಎಸ್‌ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಒಬ್ಬ ಸ್ವಾಭಿಮಾನವಿಲ್ಲದ ವ್ಯಕ್ತಿ. ಇಂತವರು ಎಂಎಲ್‌ಎ ಆಗಲೂ ಅರ್ಹರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ತಾಲೂಕಿನ ಕೊಯಮುತ್ತೂರು ಕಾಲನಿಯಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌ ಪರ ಪ್ರಚಾರದ ಬೃಹತ್‌ ಸಭೆಯಲ್ಲಿ ಮಾತನಾಡಿದ ಅವರು, ''ಈ ವಿಶ್ವನಾಥ್‌ ಸುಳ್ಳನ್ನೇ ಸತ್ಯ ಮಾಡುವ ಜಾಯಮಾನದ ವ್ಯಕ್ತಿ. ಸಂಜೆ ಆರುಗಂಟೆಯಾದ ನಂತರ ಯಾರ ಕೈಗೂ ಸಿಗದವರು. ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿಯನ್ನು ಬಾಯಿಗೆ ಬಂದಂತೆ ಬೈದು ಮತ್ತವರ ಪಕ್ಷ ದ ಅಭ್ಯರ್ಥಿಯಾಗಿರುವುದು ನಾಚಿಕೆಗೇಡುತನ, ಮಂತ್ರಿಯಾಗಿ, ಸಂಸದನಾಗಿ ದೂರದ ಸಕಲೇಶಪುರದ ವ್ಯಕ್ತಿ ಎದುರು ಸೋತಿರುವ ವ್ಯಕ್ತಿಗೆ ಸ್ವಾಭಿಮಾನವೆಂಬುದೇ ಇಲ್ಲ,'' ಎಂದು ಜರಿದರು.

''ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಮಂಜುನಾಥ್‌ ಅವರನ್ನು ಗೆಲ್ಲಿಸಿದರೆ, ನನ್ನನ್ನು ಗೆಲ್ಲಿಸಿದಂತೆ, ನಾನು ಸಿಎಂ ಆಗುತ್ತೇನೆ,''ಎಂದ ಅವರು, ''ಜೆಡಿಎಸ್‌ ಪಕ್ಷ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ವಿಶ್ವನಾಥ್‌ ಮಂತ್ರಿ, ಸಂಸದರಾಗಿದ್ದಾಗ ಏನೇನೂ ಕೆಲಸ ಮಾಡಲಿಲ್ಲ, ಯಾವ ಮುಖ ಹೊತ್ತುಕೊಂಡು ವೋಟು ಕೇಳ್ತಿದ್ದಾರೆಂದು,'' ಪ್ರಶ್ನಿಸಿದರು.

''ಈ ಮಂಜುನಾಥ್‌ ಎಲ್ಲ ಜಾತಿಗೆ ಸೇರಿದ ವ್ಯಕ್ತಿ, ನನ್ನ ಮೇಲೆ ಒತ್ತಡ ಹಾಕಿ ಕೊಯಮುತ್ತೂರು ಕಾಲನಿ ಸೊಸೈಟಿ ಜಮೀನಿಗೆ ಸಾಗುವಳಿ ಕೊಡಿಸಿದ್ದಾರೆ. ಅಪಾರ ಕೆಲಸ ಮಾಡಿದ್ದು ಬೆಂಬಲಿಸಿ, ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ. ಗೇಯುವ ಮಂಜುನಾಥನಿಗೆ ನಿಮ್ಮ ಆಶೀರ್ವಾದವಿರಲಿ,''ಎಂದು ಹೇಳಿದರು.

Vijaya Karnataka Web hunasuru jds candidate h vishvanath cm siddaramaiah
ವಿಶ್ವನಾಥ್‌ ಸ್ವಾಭಿಮಾನವಿಲ್ಲದ ವ್ಯಕ್ತಿ: ಸಿಎಂ ವಾಗ್ದಾಳಿ


-----------------

ಅನಿಲ್‌ಗೆ ಜೆಡಿಎಸ್‌ ಟಿಕೆಟ್‌ ತಪ್ಪಿಸಿದ ವಿಶ್ವನಾಥ್‌: ಆರೋಪ

''ನಾಯಕ ಸಮುದಾಯ ನಾಯಕರಾಗಿದ್ದ ಚಿಕ್ಕಮಾದು ನಿಧನ ನಂತರ ಅವರ ಮಗ ಅನಿಲ್‌ ಚಿಕ್ಕಮಾದುಗೆ ಟಿಕೆಟ್‌ ಕೊಡಿಸುವ ಬದಲು, ಚಿಕ್ಕಣ್ಣರನ್ನು ದೇವೇಗೌಡರು- ಕುಮಾರಸ್ವಾಮಿ ಬಳಿ ಕರೆದೊಯ್ದು ಟಿಕೆಟ್‌ ಕೊಡಿಸಿದ ಆಸಾಮಿ ಈ ವಿಶ್ವನಾಥ್‌,'' ಎಂದು ಸಿದ್ದರಾಮಯ್ಯ ಆರೋಪಿಸಿದರು.

''ಟಿಕೆಟ್‌ ವಂಚಿತ ಅನಿಲ್‌ ಚಿಕ್ಕಮಾದು ಅನ್ನು ನಾವು ಕರೆದು ಎಚ್‌.ಡಿ.ಕೋಟೆಯಲ್ಲಿ ಅಭ್ಯರ್ಥಿ ಮಾಡಿದ್ದೇವೆ. ತಮ್ಮ ಅಧಿಕಾರವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದು, ಹಲವಾರು ಭಾಗ್ಯಗಳನ್ನು ಕಲ್ಪಿಸಿದ್ದೇನೆ. ಸಾಲ ಮನ್ನಾ ಮಾಡಿದ್ದೇವೆ, ಸೂರ್ಯ ಚಂದ್ರರಿರುವಷ್ಟೇ ಕಾಂಗ್ರೆಸ್‌ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ,''ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕಾರ‍್ಯಕ್ರಮದಲ್ಲಿ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಕುರಿಮರಿ- ಕಂಬಳಿ ಹೊದಿಸಿ ಸನ್ಮಾನಿಸಿದರು.

ಶಾಸಕ, ಪಕ್ಷದ ಅಭ್ಯರ್ಥಿ ಮಂಜುನಾಥ್‌, ಮೈಸೂರು ಜಿಲ್ಲಾ ವೀಕ್ಷ ಕ ರಾಘವನ್‌, ಚುನಾವಣಾ ಉಸ್ತುವಾರಿ ಡಾ.ತಿಮ್ಮಯ್ಯ, ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್‌, ಜಿ.ಪಂ.ಸದಸ್ಯರಾದ ಪುಷ್ಪ್ಪಾ ಅಮರ್‌ನಾಥ್‌, ಸಾವಿತ್ರಿ ಮಂಜು, ಮಾಜಿ ಸದಸ್ಯೆ ಶಿವಗಾಮಿ, ಸಿ.ಟಿ.ರಾಜಣ್ಣ, ಮಂಜು, ತಾ.ಪಂ.ಅಧ್ಯಕ್ಷೆ ಪದ್ಮಮ್ಮ, ಹಂದನಹಳ್ಳಿ ಸೋಮಶೇಖರ್‌,ಸಾಹುಕಾರ್‌ ರಾಮಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ