ವಿಕ ಸುದ್ದಿಲೋಕ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಕೆಲವು ಸದಸ್ಯರ ವಿರುದ್ಧ ಸದ್ಯದಲ್ಲೇ ಆಧಾರ ಸಹಿತ ಆರೋಪಪಟ್ಟಿ ಬಿಡುಗಡೆಗೊಳಿಸಿ ರಾಜ್ಯದ ಜನತೆಯ ಮುಂದಿಡುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಅಕ್ರಮಗಳನ್ನು ಎಸಗಿದ್ದಾರೆ. ಹಾಗಾಗಿಯೆ ಅವರು ನಾನಾ ತನಿಖಾ ಸಂಸ್ಥೆಗಳಿಂದ ಕ್ಲೀನ್ ಚೀಟ್ ಪಡೆಯಲು ಇನ್ನಿಲ್ಲದ ಸಾಹಸ ನಡೆಸುತ್ತಿದ್ದಾರೆ. ಅದೆಲ್ಲವೂ ನಮಗೆ ತಿಳಿದಿದೆ. ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ನಾನಾ ಸಚಿವರ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿ ಸದ್ಯದಲ್ಲಿಯೆ ರಾಜ್ಯಾದ್ಯಂತ ಜನರಿಗೆ ತಲುಪಿಸುತ್ತೇವೆ,'' ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೈಲಿಂದ ಬಂದವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಮ್ಮ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಭವಾಗಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ನನಗೆ ಜಾಮೀನು ಸಿಗದಂತೆ ಮಾಡಿದ್ದಾರೆ. ಈ ವಿಚಾರಕ್ಕಾಗಿಯೆ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಕಡೆಗೆ ಜಾಮೀನು ನೀಡಿರುವ ವಿಚಾರವನ್ನು ಸಿದ್ದರಾಮಯ್ಯ ಮರೆತಿದ್ದಾರೆ,'' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಮಸ್ಯೆ ಬಗೆಹರಿಸಲು ಮುಂದಾಗಿದ್ದೆ: ''ಕಳಸಾ ಬಂಡೂರಿ ಸಮಸ್ಯೆ ಕಾಂಗ್ರೆಸ್ ಪ್ರೇರಿತವಾದದ್ದಾಗಿದೆ. ನಾನು ಸಮಸ್ಯೆ ಬಗೆಹರಿಸಲು ಮುಂದಾಗಿದ್ದೆ ತಪ್ಪು ಎಂದು ಭಾವಿಸಲಾಗುತ್ತಿದೆ. ಕಾಂಗ್ರೆಸ್ ಮುಖಂಡರೆ ರೈತರನ್ನು ಪ್ರೇರೇಪಿಸಿ ಬಿಜೆಪಿ ಪಕ್ಷ ದ ಕಚೇರಿ ಮುಂದೆ ಪ್ರತಿಭಟನೆ ಮಾಡಿಸಿದರು. ಆದರೆ ಈ ಪ್ರತಿಭಟನೆ ಕಾಂಗ್ರೆಸ್ ಕಚೇರಿ ಮುಂದೆ ನಡೆಯಬೇಕಿತ್ತು,'' ಎಂದರು. ''ಸಿದ್ದರಾಮಯ್ಯ ಕಡೇ ಅವಧಿಯಲ್ಲಿ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕೇವಲ 3 ತಿಂಗಳ ಜೀವಂತಿಕೆಯ ಬಜೆಟ್ ಮಂಡಿಸುವ ಬದಲು ಲೇಖಾನುದಾನಕ್ಕೆ ಅನುಮೋದನೆ ಪಡೆಯುವುದು ಒಳ್ಳೆಯದು,'' ಎಂದರು.
ಸಚಿವ ಅನಂತಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, ''ಈಗಾಗಲೆ ಅವರು ಕ್ಷಮೆ ಕೋರಿದ್ದಾರೆ. ಅಲ್ಲದೆ ಪಕ್ಷದ ವರಿಷ್ಠರೂ ಅವರಿಗೆ ತಿಳಿ ಹೇಳಿದ್ದಾರೆ,'' ಎಂದರು.
ಬಿಜೆಪಿ ಮುಖಂಡರ ಮೇಲೆ
ಹಲ್ಲೆ: ತನಿಖೆಗೆ ಒತ್ತಾಯ
ಬಿಜೆಪಿ ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ಗೋಕುಲ್ ಗೋವರ್ಧನ್ ಮೇಲೆ ಹಲ್ಲೆ ನಡೆಸಿದ ಸಬ್ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ತನಿಖೆ ಆದೇಶಿಸಬೇಕೆಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
''ಸಿದ್ದರಾಮಯ್ಯ ಪ್ರವಾಸಕ್ಕೆ ತೆರಳಿದ ಜಿಲ್ಲೆಗಳಲ್ಲೆಲ್ಲಾ ಕೋಟ್ಯಂತರ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಆದರೆ, ಈ ಕಾಮಗಾರಿಗಳಿಗೆ ಬಜೆಟ್ನಲ್ಲಿ ಅನುಮೋದನೆ ದೊರೆತಿದೆಯೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು. ಸರಕಾರದ ಖಜಾನೆ ಈಗಾಗಲೆ ದಿವಾಳಿಯಾಗಿದೆ. ಹೀಗಿರುವಾಗ ಹೊಸ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿ ಜನರನ್ನು ವಂಚಿಸುತ್ತಿದ್ದಾರೆ,'' ಎಂದು ಆರೋಪಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ, ಪ್ರಭಾರಿ ನಾಗೇಂದ್ರ, ಉಪಪ್ರಭಾರಿ ಫಣೀಶ್, ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಮುಖಂಡ ಎಸ್.ಎ.ರಾಮದಾಸ್, ರಾಜೇಂದ್ರ ಹಾಜರಿದ್ದರು.