ಆ್ಯಪ್ನಗರ

ಉದ್ಘಾಟನೆಯಾದರೂ ಮಿನಿ ವಿಧಾನಸೌಧ ಖಾಲಿ ಖಾಲಿ !

ಸರಕಾರದ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವ ಮೂಲಕ ಜನತೆಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಆದರೆ ಮೊದಲ ಅಂತಸ್ತು ಉದ್ಘಾಟನೆಯಾದರೂ ವಿವಿಧ ಇಲಾಖೆ ಕಚೇರಿಗಳು ಇಲ್ಲಿಗೆ ಬಾರದೆ ಜನತೆ ದಿನನಿತ್ಯದ ಕೆಲಸಕ್ಕೆ ಅಲೆಯುವಂತಾಗಿದೆ.

Vijaya Karnataka 24 Jul 2019, 5:00 am
ರಾಜೇಂದ್ರ ಕೃಷ್ಣರಾಜನಗರ
Vijaya Karnataka Web MYR-MYS23KRN3C


ಸರಕಾರದ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವ ಮೂಲಕ ಜನತೆಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಆದರೆ ಮೊದಲ ಅಂತಸ್ತು ಉದ್ಘಾಟನೆಯಾದರೂ ವಿವಿಧ ಇಲಾಖೆ ಕಚೇರಿಗಳು ಇಲ್ಲಿಗೆ ಬಾರದೆ ಜನತೆ ದಿನನಿತ್ಯದ ಕೆಲಸಕ್ಕೆ ಅಲೆಯುವಂತಾಗಿದೆ.

ತಾಲೂಕು ಕೇಂದ್ರದಲ್ಲಿ ಐದು ವರ್ಷಗಳ ಹಿಂದೆ ನೆಲ ಅಂತಸ್ತು ಮಾತ್ರ ನಿರ್ಮಾಣವಾಗಿ ಮೊದಲು ಅಂತಸ್ತು ಬಾಕಿ ಉಳಿದ ಕಾರಣ ಕೆಲವು ಇಲಾಖೆಗಳು ಮಾತ್ರ ಇಲ್ಲಿಗೆ ಸ್ಥಳಾಂತರ ಮಾಡಲ್ಪಟ್ಟಿತ್ತು. ಕಳೆದ ಒಂದೂವರೆ ವರ್ಷಗಳ ಹಿಂದೆ ಮೊದಲ ಅಂತಸ್ತು ನಿರ್ಮಿಸಿ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಯಾವುದೇ ಬೇರೆ ಇಲಾಖೆ ಕಚೇರಿಗಳು ಮಾತ್ರ ಇಲ್ಲಿಗೆ ವರ್ಗಾವಣೆಯಾಗದೆ ಸಾರ್ವಜನಿಕರ ಪರದಾಟ ನಿಂತಿಲ್ಲ.

ಕೊಠಡಿ ಖಾಲಿ ಖಾಲಿ: ಮೊದಲ ಅಂತಸ್ತಿನಲ್ಲಿ ಸುಮಾರು 9ಕ್ಕೂ ಹೆಚ್ಚು ಕೊಠಡಿಗಳು ಖಾಲಿ ಇದ್ದು, ಇಲ್ಲಿಗೆ ಬೇರೆ ಖಾಸಗಿ ಕಟ್ಟಡದಲ್ಲಿರುವ ಹಲವು ಇಲಾಖೆಗಳನ್ನು ಸ್ಥಳಾಂತರಿಸಬಹುದಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ. ಪರಿಣಾಮ 9 ಇಲಾಖೆಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಸುಮಾರು 1.30 ಲಕ್ಷ ಬಾಡಿಗೆ ಕಟ್ಟಲಾಗುತ್ತಿದ್ದು ವ್ಯರ್ಥವಾಗಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಕಟ್ಟಡ ಖಾಲಿ ಇದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಿಎಂಜಿಎಸ್‌ವೈ, ಕುಡಿಯುವ ನೀರು ಯೋಜನೆ ಇಲಾಖೆ, ಅಬಕಾರಿ ಇಲಾಖೆ, ರೇಷ್ಮೆ ಇಲಾಖೆ, ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಬ್‌ರಿಜಿಸ್ಟ್ರಾರ್‌, ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಕಚೇರಿಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಹಣವನ್ನು ಬಾಡಿಗೆ ರೂಪದಲ್ಲಿ ಪಾವತಿಸಲಾಗುತ್ತಿದೆ.

ಸೌಲಭ್ಯವಿಲ್ಲ: ಶೌಚಾಲಯ ಸೌಲಭ್ಯವಿಲ್ಲದ ಕೇವಲ 40*30 ಇರುವ ಕಟ್ಟಡಕ್ಕೂ 25 ಸಾವಿರ ಬಾಡಿಗೆ ನೀಡುತ್ತಿರುವುದು ಎಷ್ಟು ಸರಿ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಮಿನಿವಿಧಾನಸೌಧ ನಿರ್ಮಾಣಕ್ಕೂ ಮುನ್ನವೇ ಸರಕಾರಕ್ಕೆ ಸೇರಿದ ವಸತಿಗೃಹಗಳು ಹಾಗೂ ಕಟ್ಟಡಗಳು ಖಾಲಿ ಇದ್ದೂ ಸೂಕ್ತ ಸೌಲಭ್ಯಗಳ ನಡುವೆ ಸರಕಾರಿ ಕಟ್ಟಡಕ್ಕೆ ಹೋಗಲು ನಿರಾಕರಿಸಿದ ಅಧಿಕಾರಿಗಳು ಹೆಚ್ಚಿನ ಮೊತ್ತದ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಿಗೆ ಹೋಗಲು ದುಂಬಾಲು ಬೀಳುವುದು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಆಯಾ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಂಡು ಮಿನಿವಿಧಾನಸೌಧಕ್ಕೆ ಸರಕಾರಿ ಕಚೇರಿಗಳನ್ನು ಸ್ಥಳಾಂತರಗೊಳಿಸಿ ಸರಕಾರದ ಎಲ್ಲಾ ಇಲಾಖೆ ಕಚೇರಿಗಳನ್ನು ಒಂದೆಡೆ ತಂದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.


ಮಿನಿ ವಿಧಾನಸೌಧದ ಮೊದಲ ಅಂತಸ್ತಿನ ಕೊಠಡಿಗಳ ಉದ್ಘಾಟನೆಯಾಗಿದೆ. ಯಾವ ಯಾವ ಇಲಾಖೆಗೆ ಎಷ್ಟು ಕೊಠಡಿ ಬೇಕಾಗುತ್ತದೆ ಎಂಬುದನ್ನು ನೋಡಿಕೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರದಲ್ಲೇ ಇಲಾಖೆಗಳ ಕಚೇರಿ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು.

-ಮಂಜುಳಾ ತಹಸೀಲ್ದಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ