ಆ್ಯಪ್ನಗರ

International Yoga Day: ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ: ಯೋಗದಿಂದ ವಿಶ್ವ ಶಾಂತಿಯ ಆಶಯ

'ಇಡೀ ವಿಶ್ವವೇ ನಮ್ಮ ದೇಹ ಹಾಗೂ ಮನಸ್ಸಿನಿಂದ ಆರಂಭವಾಗುತ್ತದೆ. ಇಡೀ ಜಗತ್ತು ಶುರುವಾಗೋದೇ ನಮ್ಮಿಂದ. ಯೋಗಾಭ್ಯಾಸದ ಮೂಲಕ ಎಲ್ಲವೂ ನಮ್ಮೊಳಗೇ ಇದೆ ಎಂಬ ಪ್ರಜ್ಞೆ ಮೂಡುತ್ತದೆ. ನಮ್ಮೊಳಗೇ ಜಾಗೃತಿ ಮೂಡಿಸುತ್ತದೆ. ಯೋಗಾಭ್ಯಾಸದಿಂದ ಕೋಟ್ಯಂತರ ಜನರು ಆಂತರಿಕ ಶಾಂತಿ ಪಡೆಯಬಹುದಾಗಿದ್ದು, ಈ ಮೂಲಕ ಜಾಗತಿಕ ಶಾಂತಿಯ ವಾತಾವರಣ ಮೂಡುತ್ತದೆ. ಯೋಗಾಭ್ಯಾಸವು ದೇಶ ದೇಶಗಳ ಸಂಪರ್ಕ ಕೊಂಡಿಯಾಗಿದೆ. ಯೋಗವು ನಮ್ಮೆಲ್ಲರ ಸಮಸ್ಯೆಗಳ ಪರಿಹಾರ ಮಾಡುವ ಶಕ್ತಿಯಾಗಿದೆ' - ಪ್ರಧಾನ ಮಂತ್ರಿ ನರೇಂದ್ರ ಮೋದಿ

Authored byದಿಲೀಪ್ ಡಿ. ಆರ್. | ANI 21 Jun 2022, 10:19 am

ಹೈಲೈಟ್ಸ್‌:

  • ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಆಧ್ಯಾತ್ಮಿಕ ರಾಜಧಾನಿ
  • ಯೋಗವನ್ನ ಕೊಡುಗೆಯಾಗಿ ನೀಡಿದ ನಗರ ಮೈಸೂರು
  • ಮೈಸೂರಿನ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗಾಭ್ಯಾಸವನ್ನು ಪೋಷಿಸಿಕೊಂಡು ಬಂದಿದ್ದಾರೆ: ಪ್ರಧಾನಿ ಮೋದಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಅರಮನೆ ಮೈದಾನದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳ ಜೊತೆಗೆ ಯೋಗಾಭ್ಯಾಸ ಮಾಡಿದರು. ಯೋಗಾಭ್ಯಾಸ ಮಾಡಲು ಅನುಕೂಲವಾಗುವಂತೆ ಬಿಳಿ ಬಣ್ಣದ ಶರ್ಟ್‌, ಪೈಜಾಮಾ ಧರಿಸಿ ಆಗಮಿಸಿದ್ದ ಪ್ರಧಾನಿ ಮೋದಿ, ಸಾವಿರಾರು ಜನರ ನಡುವೆ ಕುಳಿತು ಯೋಗದ ವಿವಿಧ ಭಂಗಿಗಳನ್ನು ಅಭ್ಯಾಸ ಮಾಡಿದರು. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಧಾನಿ ಮೋದಿ ಅವರ ಜೊತೆಗೆ ಯೋಗಾಭ್ಯಾಸ ಮಾಡಿದರು.

ಯೋಗಾಭ್ಯಾಸಕ್ಕೂ ಮುನ್ನ ಯೋಗ ಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲರಿಗೂ 8ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭ ಕೋರಿದರು. ಇಂದು ವಿಶ್ವದ ಎಲ್ಲೆಡೆ ಭಾರತದ ಯೋಗ ಪರಂಪರೆ ತಲುಪಿದೆ ಎಂದ ಪ್ರಧಾನಿ ಮೋದಿ, ಯೋಗಾಭ್ಯಾಸದಿಂದ ಶಾಂತಿ ಲಭಿಸುತ್ತದೆ ಎಂದು ತಿಳಿಸಿದರು. ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಯೋಗದಿಂದ ಶಾಂತಿ ಲಭಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.


ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗಾಯೋಗ: ಅರಮನೆ ಆವರಣದಲ್ಲಿ ಕೊನೆ ಕ್ಷಣದ ತಯಾರಿ..
ಇಡೀ ವಿಶ್ವವೇ ನಮ್ಮ ದೇಹ ಹಾಗೂ ಮನಸ್ಸಿನಿಂದ ಆರಂಭವಾಗುತ್ತದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಇಡೀ ಜಗತ್ತು ಶುರುವಾಗೋದೇ ನಮ್ಮಿಂದ ಎಂದರು. ಯೋಗಾಭ್ಯಾಸದ ಮೂಲಕ ಎಲ್ಲವೂ ನಮ್ಮೊಳಗೇ ಇದೆ ಎಂಬ ಪ್ರಜ್ಞೆ ಮೂಡುತ್ತದೆ. ನಮ್ಮೊಳಗೇ ಜಾಗೃತಿ ಮೂಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.


ಯೋಗಾಭ್ಯಾಸದಿಂದ ಕೋಟ್ಯಂತರ ಜನರು ಆಂತರಿಕ ಶಾಂತಿ ಪಡೆಯಬಹುದಾಗಿದ್ದು, ಈ ಮೂಲಕ ಜಾಗತಿಕ ಶಾಂತಿಯ ವಾತಾವರಣ ಮೂಡುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಯೋಗಾಭ್ಯಾಸವು ದೇಶ ದೇಶಗಳ ಸಂಪರ್ಕ ಕೊಂಡಿಯಾಗಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ಯೋಗವು ನಮ್ಮೆಲ್ಲರ ಸಮಸ್ಯೆಗಳ ಪರಿಹಾರ ಮಾಡುವ ಶಕ್ತಿಯಾಗಿದೆ ಎಂದರು.


ಮೈಸೂರಿಗೆ ತನ್ನದೇ ಆದ ಹೆಗ್ಗಳಿಕೆ ಇದೆ ಎಂದು ಸಾಂಸ್ಕೃತಿಕ ನಗರಿಯಲ್ಲಿ ಹಾಡಿ ಹೊಗಳಿದ ಪ್ರಧಾನಿ ಮೋದಿ, ಮೈಸೂರಿನ ಸಾಂಸ್ಕೃತಿಕ, ಐತಿಹಾಸಿಕ ಪ್ರಾಮುಖ್ಯತೆಯನ್ನು ವರ್ಣಿಸಿದರು.

ಸಾಂಸ್ಕೃತಿಕ ನಗರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ: ಮೈಸೂರು ಶೈಲಿಯ ಆಹಾರ
ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಆಧ್ಯಾತ್ಮಿಕ ರಾಜಧಾನಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಯೋಗವನ್ನ ಕೊಡುಗೆಯಾಗಿ ನೀಡಿದ ನಗರ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಯೋಗ ಭೂಮಿಯಾದ ಮೈಸೂರಿನ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗಾಭ್ಯಾಸವನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದು ಹೊಗಳಿದರು. ಯೋಗ ದಿನಾಚರಣೆಯ ಈ ಸುದಿನದಂದು ಮೈಸೂರಿಗೆ ಪ್ರಣಾಮಗಳು ಎಂದು ಪ್ರಧಾನಿ ಮೋದಿ ಹೇಳಿದರು.


ಇದಕ್ಕೂ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಯಿ, ವಿಶ್ವ ಯೋಗ ದಿನಾಚರಣೆ ಆರಂಭಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ಅಪಾರ ಎಂದರು. ಯೋಗದಿಂದ ಮನಸ್ಸು ಹಾಗೂ ದೇಹ ಒಂದಾಗುತ್ತೆ ಎಂದು ಅವರು ತಿಳಿಸಿದರು. ಮೈಸೂರಿನ ಅರಮನೆ ಮೈದಾನದ ಬಳಿ ಸೇರಿದ್ದ ಸಾವಿರಾರು ಜನರು ಪ್ರಧಾನಿ ಮೋದಿ ಅವರ ಜೊತೆಗೆ ಯೋಗಾಭ್ಯಾಸ ಮಾಡಿ 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಾರ್ಥಕಗೊಳಿಸಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ