ಪಿರಿಯಾಪಟ್ಟಣ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಶನಿವಾರ ವಯೋವೃದ್ಧ ದಂಪತಿ ಆತ್ಮಹತ್ಯೆ ಶರಣಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಬಿ.ಎಂ.ರಸ್ತೆಯ ಬಸ್ನಿಲ್ದಾಣದ ಬಳಿ ನಿವಾಸದಲ್ಲಿ ವಾಸವಿದ್ದ ರಾಜಗೋಪಾಲ್ (88), ಅಪರ್ಣಾ (80) ಮೃತರು. ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮಗಳನ್ನು ತುಮಕೂರಿಗೆ ಮದುವೆ ಮಾಡಲಾಗಿತ್ತು. ಹಿರಿಯ ಮಗ ಮೈಸೂರಿನಲ್ಲಿ ವಾಸವಿದ್ದು, ಮತ್ತೊಬ್ಬ ಮಗ ಬೆಂಗಳೂರಿನಲ್ಲಿ ವಾಸವಿದ್ದಾರೆ.
ದಂಪತಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಹಿರಿಯ ಮಗನ ಮನೆಗೆ ತೆರಳಲು ತಯಾರಿ ನಡೆಸಿದ್ದರು. ಆದರೆ ಶನಿವಾರ ಸಂಜೆಯ ವೇಳೆಗೆ ಜೊಳ ಕೆಡದಂತೆ ಉಪಯೋಗಿಸುವ ಕ್ರಿಮಿನಾಶಕ ಮಾತ್ರೆ ಸೇವಿಸಿದ್ದು, ಅಪರ್ಣಾ ಹಾಸಿಗೆಯ ಮೇಲೆ ಪ್ರಾಣಬಿಟ್ಟಿದ್ದರೆ, ರಾಜಗೋಪಾಲ್ ಶೌಚಾಲಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಮನೆಕೆಲಸದಾಕೆ ಮನೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಕ್ಕಳಿಗೆ ವಿಚಾರ ಮುಟ್ಟಿಸಿ, ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ದಂಪತಿಯಿದ್ದ ಮನೆ ಮಾರಾಟವಾಗಿತ್ತು. ತಾವು ಬದುಕಿ ಬಾಳಿದ ಮನೆಯಲ್ಲಿಯೇ ಸಾಯಬೇಕೆಂಬ ಅಭಿಲಾಷೆಯಿಂದ ಈ ರೀತಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.