ಆ್ಯಪ್ನಗರ

ನೀವೇ ಪಕ್ಷಾಂತರ ಪ್ರವೀಣರು ?: ಸಿದ್ದುಗೆ ಈಶ್ವರಪ್ಪ ಟಾಂಗ್‌

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹಾರಿದ ನೀವು ಪಕ್ಷಾಂತರಿಯಲ್ಲನೇ ಎಂದು ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

Vijaya Karnataka 23 Sep 2019, 7:45 am
ಮೈಸೂರು: ಬೇರೆಯವರು ಪಕ್ಷಾಂತರಗೊಂಡರೆ ಉದ್ದುದ್ದ ಭಾಷಣ ಮಾಡುವ ನೀವೇ ಪಕ್ಷಾಂತರ ಪ್ರವೀಣರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.
Vijaya Karnataka Web Eshwarappa


ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿ ದರ್ಶನದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

''ಒಮ್ಮೆ ನೀವು ನಡೆದು ಬಂದ ಹಾದಿಯನ್ನು ನೆನಪಿಸಿಕೊಳ್ಳಿ. ನೀವು ಸಹ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಲಿಲ್ಲವೇ? ಆಗ ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸಿದ್ದಿರಿ,'' ಎಂದು ಪ್ರಶ್ನಿಸಿದರು.

''ಪ್ರಸ್ತುತ ಕಾಂಗ್ರೆಸ್‌, ಜೆಡಿಎಸ್‌ ಮುಳುಗುತ್ತಿರುವ ಹಡಗಿನಂತಾಗಿದೆ. ಉಪ ಚುನಾವಣೆಯಲ್ಲೂ ಜನರು ತಿರಸ್ಕಾರ ಮಾಡಲಿದ್ದಾರೆ,'' ಎಂದು ಟಾಂಗ್‌ ನೀಡಿದರು.

ಮೈತ್ರಿ ಗೊಂದಲ: ''ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಬೇಕು ಅಂದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೈತ್ರಿ ಬೇಡ ಅಂತಾರೆ. ಜೆಡಿಎಸ್‌ನಲ್ಲೂಇದೇ ಪರಿಸ್ಥಿತಿ ಇದೆ. ಅವರು ಮೈತ್ರಿ ಮಾಡಿಕೊಂಡರೂ ಅಷ್ಟೆ, ಮಾಡಿಕೊಳ್ಳದೆ ಇದ್ದರೂ ಅಷ್ಟೆ. ಲೋಕಸಭಾ ಚುನಾವಣೆಯಲ್ಲೇ ತಲಾ ಒಂದು ಸ್ಥಾನಕ್ಕೆ ಇಳಿದಿದ್ದಾರೆ. ಬಿಜೆಪಿಯ 25 ಸಂಸದರು ಆಯ್ಕೆಯಾದರು. ಉಪಚುನಾವಣೆಯಲ್ಲೂ ಜನ ಆ ಎರಡೂ ಪಕ್ಷಗಳನ್ನೂ ನಂಬುವುದಿಲ್ಲ,'' ಎಂದು ಅಭಿಪ್ರಾಯಪಟ್ಟರು.

ಮಧ್ಯಾಂತರ ಚುನಾವಣೆ ಬರಲಿದೆ ಎಂದು ಹೇಳಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ''ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ಯಾವ ಕಾರಣಕ್ಕೆ ಮಧ್ಯಾಂತರ ಚುನಾವಣೆ ಬರುತ್ತೆ ಎಂದು ಪ್ರಶ್ನಿಸಿದ ಅವರು, ಯಾವುದೇ ಕ್ಷಣದಲ್ಲಿಚುನಾವಣೆ ನಡೆದರೂ ಬಿಜೆಪಿಗೆ ಬಹುಮತ ನಿಶ್ಚಿತ,'' ಎಂದು ಹೇಳಿದರು.

''ಅನರ್ಹರು ಇವತ್ತಿಗಷ್ಟೆ ಅನರ್ಹರಾಗಿದ್ದು, ಸೋಮವಾರದವರೆಗೂ ಕಾದು ನೋಡಿ. ಸುಪ್ರೀಂಕೋರ್ಟ್‌ ಶಾಸಕರ ಅನರ್ಹತೆ ಬಗ್ಗೆ ಪರಾಮರ್ಶಿಸಿ ಎಂದು ತಿಳಿಸಿತ್ತು. ಆದರೆ, ಕೆ.ಆರ್‌.ರಮೇಶ್‌ ಕುಮಾರ್‌ ತಾನೇ ಸಂವಿಧಾನದ ತಜ್ಞ ಅಂತ ಅನರ್ಹತೆ ಮಾಡಿದ್ದರು. ಕೋರ್ಟ್‌ನಲ್ಲಿ ತೀರ್ಪು ಬಂದ ನಂತರ ಏನು ಗೊತ್ತಾಗಲಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ