ಆ್ಯಪ್ನಗರ

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ: ವಾಯುವಿಹಾರಿಗಳೊಂದಿಗೆ ಸಚಿವ ಚರ್ಚೆ

ನಗರದ ಕುಕ್ಕರಳ್ಳಿ ಕೆರೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಗುರುವಾರ ಭೇಟಿ ನೀಡಿ, ವಾಯು ವಿಹಾರಿಗಳು ಹಾಗೂ ಪರಿಸರ ತಜ್ಞರ ಜತೆ ಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.

Vijaya Karnataka 23 Nov 2018, 5:00 am
ಮೈಸೂರು: ನಗರದ ಕುಕ್ಕರಳ್ಳಿ ಕೆರೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಗುರುವಾರ ಭೇಟಿ ನೀಡಿ, ವಾಯು ವಿಹಾರಿಗಳು ಹಾಗೂ ಪರಿಸರ ತಜ್ಞರ ಜತೆ ಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
Vijaya Karnataka Web kukkarahalli lake
ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ: ವಾಯುವಿಹಾರಿಗಳೊಂದಿಗೆ ಸಚಿವ ಚರ್ಚೆ


ಕುಕ್ಕರಹಳ್ಳಿ ಕೆರೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ‍್ಯಗಳನ್ನು ವೀಕ್ಷಿಸಿದರು. ಕೆರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಪರಿಸರ ಹಾಗೂ ವಾಯುವಿಹಾರಿಗಳ ಸ್ನೇಹಿಯಾಗಿ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆಯೂ ಮಾತುಕತೆ ನಡೆಸಿದರು.

ಈ ವೇಳೆ ಸಚಿವರೊಂದಿಗೆ ಮಾತನಾಡಿದ ಸಾರ್ವಜನಿಕರು, ಕುಕ್ಕರಹಳ್ಳಿ ಕೆರೆಯಲ್ಲಿ ವಿಶೇಷವಾಗಿ ಪಕ್ಷಿಗಳಿಗೆ ಐಲ್ಯಾಂಡ್‌ ನಿರ್ಮಾಣ, ನ್ಯೂಸ್‌ ಪೇಪರ್‌ ಗ್ಯಾಲರಿ, ಜಿಮ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೇ, ನಿಂತುಹೋಗಿರುವ ಬೋಟಿಂಗ್‌ ವ್ಯವಸ್ಥೆಯನ್ನು ಪುನರಾರಂಭಿಸುವ ಜತೆಗೆ ಪಡುವಾರಹಳ್ಳಿ ಬಡಾವಣೆಯಿಂದ ಕೆರೆಗೆ ಹರಿದುಬರುವ ಕೊಳಚೆ ನೀರು ಸೇರ್ಪಡೆ ಆಗದಂತೆ ತಡೆಯಲು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಕುಕ್ಕರಹಳ್ಳಿ ಕೆರೆಯು ಮಿನಿ ಪಕ್ಷಿಧಾಮದಂತಿದ್ದು, ಇಲ್ಲಿ ವಾಸಿಸುವ ಹಾಗೂ ಕಾಲ ಕಾಲಕ್ಕೆ ವಲಸೆ ಬರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

ಸಹಜ ಸೌಂದರ್ಯ ಮುಖ್ಯ: ಪೂರ್ಣಗೊಂಡ ಅಭಿವೃದ್ಧಿ ಯೋಜನೆಗಳ ಪೈಕಿ ಮಕ್ಕಳ ಉದ್ಯಾನ, ಯೋಗ ಪ್ಲಾಟ್‌ ಫಾರ್ಮ್‌ಗಳು, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕಮಾನು ಗೇಚ್‌, ಕುವೆಂಪು ವನ ಸುಧಾರಣೆ, ಸಿಮೆಂಟು ಪಂಪಿಂಗ್‌ ಘಟಕ, ಪಾರ್ಕಿಂಗ್‌ ಪ್ರದೇಶಗಳು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಪರಿಶೀಲಿಸಿದರು. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಶೀಘ್ರ ನೀರಿನ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಕಾಂಕ್ರೀಟ್‌ ಶೆಲ್ಟರ್‌ ನಿರ್ಮಾಣದ ಬಗ್ಗೆ ಕೇಳಿಬಂದ ಸಲಹೆಯನ್ನು ಒಪ್ಪದೆ ಕೆರೆಯನ್ನು ಸಹಜವಾಗಿ ಇಡಲಾಗುವುದು ಎಂದು ಹೇಳಿದರು. ವಾಯು ವಿಹಾರಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಯಾವ ರೀತಿಯಲ್ಲಿ ಅನುಕೂಲ ಮಾಡಿಕೊಡಬೇಕೆನ್ನುವ ಕುರಿತು ಚರ್ಚಿಸಲಾಯಿತು.

ಜಿಮ್‌ ಪಾರ್ಕ್‌ ನಿರ್ಮಿಸಿ: ಕುಕ್ಕರಹಳ್ಳಿಯ ಎರಡು ಗೇಟ್‌ ಬಳಿ ಜಿಮ್‌ ನಿರ್ಮಿಸಿ ಎಂದು ಸಚಿವ ಸಾ.ರಾ.ಮಹೇಶ್‌ ಸಲಹೆ ನೀಡಿದರು. ಅಲ್ಲದೆ, ಕೆರೆ ಅಭಿವೃದ್ಧಿಗೆ ಏನೇನು ಮಾಡಬಹುದು ಎಂದು ರಿಪೋರ್ಟ್‌ ಅನ್ನು ನೀಡುವಂತೆ ಕೆರೆ ಸಂರಕ್ಷಣಾ ಸಮಿತಿಗೆ ಸೂಚಿಸಿದರು. ಈ ಸಮಿತಿ ಮೃಗಾಲಯದ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ. ಅಲ್ಲಿಂದ ವರದಿ ನೀಡಬೇಕು. ಅಲ್ಲದೆ, ವಾಕಿಂಗ್‌ ಪಾಥ್‌ಗೆ ಗ್ರಾವೆಲ್‌ ಹಾಕಬೇಕು. ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು. ಹಸಿರು ಮತ್ತು ನೀರಿನ ಜಾಗವನ್ನು ಉಲ್ಲಂಘಿಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಎಲ್‌ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ… ಜಿ.ಶಂಕರ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಪಿ.ಜರ್ನಾದನ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ