ಆ್ಯಪ್ನಗರ

ಕುಂಭಮೇಳ: ಆಹಾರ ಸುರಕ್ಷತೆಗೆ ಕಣ್ಗಾವಲು

ಸುಳ್ವಾಡಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ಬಾರಿ ತಿರುಮಕೂಡಲಿನಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ತಪಾಸಣೆ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ.

Vijaya Karnataka 18 Feb 2019, 5:00 am
ನಾಗರಾಜ್‌ ನವೀಮನೆ ಮೈಸೂರು: ಸುಳ್ವಾಡಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ಬಾರಿ ತಿರುಮಕೂಡಲಿನಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ತಪಾಸಣೆ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ.
Vijaya Karnataka Web kumbha mela
ಕುಂಭಮೇಳ: ಆಹಾರ ಸುರಕ್ಷತೆಗೆ ಕಣ್ಗಾವಲು


ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ಸಿಕ್ಕಿದ್ದು, 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆದಕಾರಣ ಭಕ್ತರಿಗೆ ನೀಡುವ ಆಹಾರದ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆ. ಹೊರಗಿನಿಂದ ಭಕ್ತರು ವಿತರಿಸುವ ಆಹಾರವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನರಸೀಪುರದ ಜೆಎಸ್‌ಎಸ್‌, ಆದಿಚುಂಚನಗಿರಿ ಸಭಾ ಮಂಟಪ ಹಾಗೂ ಅದರ ಪಕ್ಕದಲ್ಲಿ ಪೊಲೀಸ್‌ ಸಿಬ್ಬಂದಿಗಾಗಿಯೇ ಒಂದು ಟೆಂಟ್‌ ನಿರ್ಮಿಸಲಾಗಿದೆ. ಈ ಮೂರು ಸ್ಥಳಗಳಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಿಗೆ ನಮ್ಮ ಅಧಿಕಾರಿಗಳು ವೈದ್ಯರ ಸಲಹೆ ಪಡೆದು ದಾಸೋಹಕ್ಕೆ ಉಪಯೋಗಿಸುವ ಕಚ್ಚಾ ಪದಾರ್ಥಗಳನ್ನು ತಪಾಸಣೆ ನಡೆಸುತ್ತಾರೆ. ಅಲ್ಲದೆ ಭಾರತೀಯ ಆಹಾರ ಸುರಕ್ಷ ತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾರ್ಗಸೂಚಿಯಂತೆ ಯಾವ ಪದಾರ್ಥ ಇದೆಯೋ ಅದನ್ನು ಮಾತ್ರ ಉಪಯೋಗಿಸುವಂತೆ ಸೂಚಿಸಲಾಗಿದೆ. ಶನಿವಾರ ರಾತ್ರಿ 150 ಮಂದಿ ಹಾಗೂ ಭಾನುವಾರ 1500 ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿದೆ.

''ಹೊರಗಡೆ ಭಕ್ತರು ಪ್ರಸಾದ ಹಂಚುವುದಕ್ಕೆ ಅನುಮತಿ ಇಲ್ಲ. ಜಿಲ್ಲಾಡಳಿತ ಅದಕ್ಕೆ ಕಡಿವಾಣ ಹಾಕಬೇಕು. ಆದರೂ ನಾಲ್ಕೈದು ಕಡೆ ಭಕ್ತರು ಆಹಾರ ಹಂಚುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆಹಾರ ಸುರಕ್ಷತೆ ಕ್ರಮದ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುತ್ತಿದೆ. ನೀವು ವಿತರಿಸುವ ಆಹಾರದಿಂದ ಏನಾದರೂ ಏರುಪೇರಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಬರೆಸಿಕೊಳ್ಳಲಾಗುತ್ತಿದೆ. ಅಲ್ಲದೆ, ಆಹಾರ ಸ್ಯಾಂಪಲ್‌ ಪಡೆದುಕೊಳ್ಳಲಾಗುತ್ತಿದೆ,'' ಎಂದು ಆಹಾರ ಭದ್ರತಾ ಅಧಿಕಾರಿ ಡಾ.ಚಿದಂಬರ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಕ್ರಮವೇನು?: ಮನೆಯಲ್ಲಿ ಅಡುಗೆ ಮಾಡಿಕೊಂಡು ಅದನ್ನು ಕುಂಭಮೇಳದಲ್ಲಿ ಹಂಚುವ ಭಕ್ತರಿಗೆ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ, ಟ್ರಸ್ಟ್‌ಗಳಿಂದ ಹಂಚುವವರಿಂದ ಪತ್ರ ಪಡೆದುಕೊಳ್ಳಲಾಗುತ್ತಿದೆ. ಮೂವರು ಆಹಾರ ಭದ್ರತೆ ಮತ್ತು ಸುರಕ್ಷತಾ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಧಿಕಾರಿಗಳ ತಂಡ ರಚನೆ: ಅಡುಗೆ ಸಿಬ್ಬಂದಿ ಹಾಗೂ ಬಡಿಸುವವರನ್ನು ವೈದ್ಯರು ತಪಾಸಣೆಗೆ ಒಳಪಡಿಸಿ ಅವರು ಸಂಪೂರ್ಣ ಆರೋಗ್ಯವಾಗಿದ್ದರೆ ಮಾತ್ರ ಅವಕಾಶ ಕೊಡಲಾಗುತ್ತಿದೆ. ಯಾವುದೇ ಸೋಂಕು ಕಾಯಿಲೆ ಇರಬಾರದು ಹಾಗೂ ಅಡುಗೆಗೆ ಬಳಸುವ ನೀರು, ಪಾತ್ರೆಗಳು... ಹೀಗೆ ಪ್ರತಿಯೊಂದನ್ನು ಪರಿಶೀಲನೆ ನಡೆಸಲಾಗುತ್ತಿದೆ. ತಯಾರಾದ ಅಡುಗೆ ಮಾದರಿಯನ್ನು ತಪಾಸಣೆಗೆಂದು ಸ್ವಲ್ಪ ಸಂಗ್ರಹಿಸಿ, ನಂತರ ಸ್ಥಳದಲ್ಲಿಯೇ ಆರೋಗ್ಯ ಅಧಿಕಾರಿಗಳು ಸೇವನೆ ಮಾಡಿ ಭಕ್ತರಿಗೆ ವಿತರಿಸಲು ಅನುವು ಮಾಡಿಕೊಡಲಾಗುತ್ತಿದೆ. ಭಕ್ತರಿಗೆ ಸಂಪೂರ್ಣವಾಗಿ ವಿತರಿಸುವವರೆಗೂ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಹೆಚ್ಚು ಜಾಗರೂಕತೆ ವಹಿಸುತ್ತಿದ್ದಾರೆ.


ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಭಕ್ತರು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಅಡುಗೆ ಸಾಮಾಗ್ರಿಗಳನ್ನು ವೈದ್ಯಾಧಿಕಾರಿಗಳು ಪರಿಶೀಲಿಸಿದ ನಂತರ ಬಳಸಲು ಸೂಚಿಸಲಾಗಿದೆ. ಅಡುಗೆ ಮನೆಗೂ ಸಿಸಿಟಿವಿಯನ್ನು ಅಳವಡಿಸಲಾಗಿದೆ.
-ನಾಗಪ್ರಶಾಂತ್‌, ತಹಸೀಲ್ದಾರ್‌


----
ಯಾರೇ ಖಾಸಗಿಯಾಗಿ ಪ್ರಸಾದ ಹಂಚುವವರು ತಹಸೀಲ್ದಾರ್‌ ಅನುಮತಿ ಪಡೆದುಕೊಂಡಿರಬೇಕು. ಅಲ್ಲದೆ, ಆಹಾರ ಸ್ಯಾಂಪಲ್‌ ನೀಡಬೇಕು. ಎಲ್ಲವೂ ಸರಿಯಿದ್ದರೆ ಪ್ರಸಾದ ವಿನಿಯೋಗ ಮಾಡಬಹುದು. ಸುಳ್ವಾಡಿ ಪ್ರಕರಣದಿಂದ ಎಚ್ಚೆತ್ತುಕೊಂಡು ಈ ಕ್ರಮಕೊಳ್ಳಲಾಗಿದೆ.
-ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ