ಆ್ಯಪ್ನಗರ

ಕೆರೆ ಸಂರಕ್ಷಣೆ: ಹೋರಾಟಗಾರನ ಕೈ ಹಿಡಿದ ಕಾನೂನು

ಕಳೆದ ಎರಡು ದಶಕದಿಂದ ತಮ್ಮೂರಿನ ಕೆರೆ ಸಂರಕ್ಷಣೆ ಬಗ್ಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಹಿರಿಯ ಜೀವಕ್ಕೆ ಈಗ ಕಾನೂನಿನ ನೆರವು ಸಿಕ್ಕಿದೆ.

Vijaya Karnataka 31 May 2019, 5:00 am
ಹರೀಶ್‌ ಎಲ್‌.ತಲಕಾಡು ಮೈಸೂರು
Vijaya Karnataka Web lake protection
ಕೆರೆ ಸಂರಕ್ಷಣೆ: ಹೋರಾಟಗಾರನ ಕೈ ಹಿಡಿದ ಕಾನೂನು


ಕಳೆದ ಎರಡು ದಶಕದಿಂದ ತಮ್ಮೂರಿನ ಕೆರೆ ಸಂರಕ್ಷಣೆ ಬಗ್ಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಹಿರಿಯ ಜೀವಕ್ಕೆ ಈಗ ಕಾನೂನಿನ ನೆರವು ಸಿಕ್ಕಿದೆ.

ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿದ್ದ, ಲೆಕ್ಕವಿಲ್ಲದಷ್ಟು ದೂರು ನೀಡಿದ್ದ ಹೋರಾಟಗಾರನ ಹೋರಾಟಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮನ್ನಣೆ ನೀಡಿದೆ.

ಹೋರಾಟಗಾರ ನೀಡಿದ ದೂರಿನ ಅನ್ವಯ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಲು ಅಗತ್ಯ ನೇಮಕ ಮಾಡಿಕೊಡುವ ಮೂಲಕ ಉಚಿತ ಕಾನೂನು ನೆರವು ನೀಡಲು ಮುಂದಾಗಿದೆ.

ಮೈಸೂರು ತಾಲೂಕು ಜಯಪುರ ಹೋಬಳಿಯ ಮದ್ದೂರು ಮತ್ತು ಚುಂಚರಾಯನ ಹುಂಡಿ ಗ್ರಾಮಗಳ ನಡುವೆ ಒತ್ತುವರಿಯಾಗಿರುವ ವಡವನ ಕಟ್ಟೆ ಕೆರೆ ಸಂರಕ್ಷಣೆಗೆ 62 ವರ್ಷದ ಭಾಸ್ಕರ್‌ ಶರ್ಮಾ ಹೋರಾಟ ನಡೆಸುತ್ತಿದ್ದು, ಈಗ ಕಾನೂನು ನೆರವು ಸಿಕ್ಕಿದ್ದು ಆತ್ಮ ವಿಶ್ವಾಸ ವೃದ್ಧಿಸಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಹಂಚಾಟೆ ಅವರಿಗೆ ತಮ್ಮೂರಿನ ಕೆರೆ ಒತ್ತುವರಿ ತೆರವು ಬಗ್ಗೆ ತಾವು ಮಾಡುತ್ತಿರುವ ಹೋರಾಟದ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಒತ್ತುವರಿ ತೆರವಿಗೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಶರ್ಮಾ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರದ ರಾಜ್ಯ ಸದಸ್ಯ ಕಾರ್ಯದರ್ಶಿ ಸಂಜೀವ್‌ ಕುಮಾರ ಹಂಚಾಟೆ, ಜಿಲ್ಲಾ ಸದಸ್ಯ ಕಾರ್ಯದರ್ಶಿ ದೇವಮಾನೆ ಅವರಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ವಕೀಲರ ನೇಮಕ ಮಾಡಿಕೊಡುವ ಮೂಲಕ ಕಾನೂನು ನೆರವು ನೀಡುವಂತೆ ಸೂಚನೆ ನೀಡಿದರು.

ಮೈಸೂರು ತಾಲೂಕು ಮತ್ತು ಎಚ್‌.ಡಿ.ಕೋಟೆ ತಾಲೂಕು ಮಧ್ಯೆ 1963ರಲ್ಲಿ ವಡುವನ ಕಟ್ಟೆ ನಿರ್ಮಾಣಗೊಂಡಿತ್ತು. 1972ರಲ್ಲಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯ ಸರಕಾರ ಗೆಜೆಟೆಡ್‌ ನೋಟಿಫಿಕೇಶನ್‌ ಹೊರಡಿಸಿತು. ಅಂದಿನಿಂದಲೂ ಈ ಭಾಗದ ಕೃಷಿ ಚಟುವಟಿಕೆಗೆ ಈ ಕೆರೆ ಆಧಾರವಾಗಿದೆ. 147.2 ಎಕರೆ ವ್ಯಾಪ್ತಿಯಲ್ಲಿರುವ ಕೆರೆಯಲ್ಲಿ 60 ಎಕರೆ ಪ್ರದೇಶ ಒತ್ತುವರಿಯಾಗಿದೆ.

ಬತ್ತಿದ ಕೆರೆ:
ಕೆರೆ ಮಳೆ ನೀರು ಹರಿದು ಬರುತ್ತಿದ್ದ ರಾಜ ಕಾಲುವೆ ಮುಚ್ಚಿ ಹೋಗಿದ್ದು, ದೇವರಾಜ ಅರಸು ನಾಲೆಯಿಂದ ನೀರು ಪೂರೈಕೆಗೆ ಕಾಲುವೆ ನಿರ್ಮಿಸಿದ್ದರೂ, ನಾಲೆ ನೀರು ಕೆರೆಗೆ ತಲುಪುತ್ತಿಲ್ಲ. ಅಲ್ಲದೇ ಕೆರೆಯಿಂದ 2.5 ಕಿ.ಮೀ.ದೂರದಲ್ಲಿ ಕಬಿನಿ ನದಿ ಹರಿಯುತ್ತಿದ್ದು, ಏತ ನೀರಾವರಿ ಮೂಲಕ ಕೆರೆ ನೀರು ತುಂಬಿಸುವ ಯೋಜನೆಗೂ ಗ್ರಹಣ ಹಿಡಿದಿದೆ. ಪರಿಣಾಮ ಇದೇ ಮೊದಲ ಬಾರಿಗೆ ಕೆರೆ ಬತ್ತಿ ಹೋಗಿದೆ.

ಈ ಭಾಗದ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಕೃಷಿ ಚಟುವಟಿಕೆ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಚುಂಚರಾಯನಹುಂಡಿ ನಿವಾಸಿ ಸಿ.ಎಂ.ಮಂಜು.

ಕೆರೆ ಒತ್ತುವರಿ: ನಮ್ಮೂರಿನ ಕೆರೆ ಒತ್ತುವರಿಯಾಗಿರುವ ಬಗ್ಗೆ ಬೇಸರಗೊಂಡಿದ್ದ ಭಾಸ್ಕರ್‌ ಶರ್ಮಾ, ಕೆರೆ ಒತ್ತುವರಿ ತೆರವಿಗೆ 20 ವರ್ಷಗಳಿಂದ ಸಕ್ರಿಯವಾಗಿ ಹೋರಾಟ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ, ಕೆರೆ ಸಂರಕ್ಷಣಾ ಪ್ರಾಧಿಕಾರ, ಜಲ ಸಂಪನ್ಮೂಲ ಸಂಘಟನೆ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಕಚೇರಿಗಳಿಗೂ ಅಲೆದಾಟ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಳಿಸುವ ಭರವಸೆ ನೀಡಿದ್ದಾರೆಯೇ ಹೊರತು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಭಾಸ್ಕರ್‌ ಶರ್ಮಾ.


ನಮ್ಮೂರಿನ ಕೆರೆ ಒತ್ತುವರಿ ಸಂಬಂದ ಎಲ್ಲಾ ಅಧಿಕಾರಿಗಳಿಗೂ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೆಲ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಿದರೆ ಹೊರತು ಯಾವುದೇ ಕ್ರಮ ವಹಿಸಲಿಲ್ಲ. ಈಗ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡುವ ಮೂಲಕ ಕೆರೆ ಒತ್ತುವರಿಗೆ ಕಾನೂನಿನ ಮೂಲಕ ಹೋರಾಟ ನಡೆಸುತ್ತೇನೆ.

-ಭಾಸ್ಕರ್‌ ಶರ್ಮಾ, ಹೋರಾಟಗಾರ.

ಮೈಸೂರು ತಾಲೂಕಿನ ವಡವನಕಟ್ಟೆ ಕೆರೆ ಒತ್ತುವರಿಯಾಗಿರುವ ಬಗ್ಗೆ ಭಾಸ್ಕರ್‌ ಶರ್ಮಾ ಅವರು ಪ್ರಾಧಿಕಾರಕ್ಕೆ ದೂರು ನೀಡಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೂಲಕ ಅವರಿಗೆ ಪ್ರಾಧಿಕಾರದಿಂದ ಅಗತ್ಯ ಕಾನೂನು ನೆರವು ನೀಡಲಾಗುವುದು. ಕೆರೆ ಮತ್ತು ಸರೋವರ ಸಂರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಿದ್ದು, ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿದೆ.

-ಬಿ.ಪಿ.ದೇವಮಾನೆ, ಸದಸ್ಯ ಕಾರ್ಯದರ್ಶಿ, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ