ಆ್ಯಪ್ನಗರ

ಖಾಸಗಿ ಸಮೀಕ್ಷೆ ಮೊರೆ ಹೋದ ಅಭ್ಯರ್ಥಿಗಳು !

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಂಗಳವಾರ ಕೊನೆಗೊಂಡಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಹಲವು ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಇನ್ನೂ ಮೂರು ದಿನ ಮಾತ್ರ ಕಾಲಾವಕಾಶವಿದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನವೇ ಕ್ಷೇತ್ರದಲ್ಲಿ ತಮ್ಮ ಪರ ಮತದಾರರಲ್ಲಿ ಯಾವ ರೀತಿ ಒಲವಿದೆ ಎಂಬುದರ ಬಗ್ಗೆ ಅರಿಯಲು ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆ ಮೊರೆ ಹೋಗಿದ್ದಾರೆ.

Vijaya Karnataka 28 Mar 2019, 5:00 am
ಹರೀಶ್‌ ಎಲ್‌.ತಲಕಾಡು ಮೈಸೂರು
Vijaya Karnataka Web lok sabha election 2019
ಖಾಸಗಿ ಸಮೀಕ್ಷೆ ಮೊರೆ ಹೋದ ಅಭ್ಯರ್ಥಿಗಳು !


ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಂಗಳವಾರ ಕೊನೆಗೊಂಡಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಹಲವು ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಇನ್ನೂ ಮೂರು ದಿನ ಮಾತ್ರ ಕಾಲಾವಕಾಶವಿದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನವೇ ಕ್ಷೇತ್ರದಲ್ಲಿ ತಮ್ಮ ಪರ ಮತದಾರರಲ್ಲಿ ಯಾವ ರೀತಿ ಒಲವಿದೆ ಎಂಬುದರ ಬಗ್ಗೆ ಅರಿಯಲು ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆ ಮೊರೆ ಹೋಗಿದ್ದಾರೆ.

ಖಾಸಗಿ ಸಂಸ್ಥೆಗಳು ನಡೆಸುವ ಈ ಸಮೀಕ್ಷೆ ಗೌಪ್ಯವಾಗಿ ಅಭ್ಯರ್ಥಿಗಳ ಕೈ ಸೇರಲಿದೆಯೇ ಹೊರತು ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದಿಲ್ಲ ಎಂಬುದೇ ವಿಶೇಷ.

ಪ್ರಮುಖ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಕಣದಲ್ಲಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮ ಪರ ಯಾವ ರೀತಿ ಅಲೆಯಿದೆ ಎಂಬುದನ್ನು ಅರಿಯಲು ತಾವೇ ಹಣ ನೀಡಿ ಸಮೀಕ್ಷೆ ನಡೆಸುತ್ತಿದ್ದು, ಪ್ರಚಾರಕ್ಕೂ ಮುನ್ನವೇ ಮತದಾರರ ಮನದಾಳವನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಸಮೀಕ್ಷೆಯಲ್ಲಿ ಯಾವ ರೀತಿ ವರದಿ ಬರಲಿದೆ ಎಂಬುದರ ಆಧಾರದ ಮೇಲೆ ತಮ್ಮ ಚುನಾವಣಾ ಪ್ರಚಾರವನ್ನು ನಡೆಸಲು ಸಿದ್ಧತೆ ನಡೆಸಲಿದ್ದಾರೆ. ಮತದಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಕಡೆ ಯಾವ ರೀತಿ ಪ್ರಚಾರ ನಡೆಸಬೇಕು ಎಂಬುದರ ಬಗ್ಗೆ ರಣತಂತ್ರಗಳನ್ನು ರೂಪಿಸಲು ಮುಂದಾಗಿದ್ದಾರೆ.

ಖಾಸಗಿ ಸಂಸ್ಥೆಗಳಿಗೆ ಹಬ್ಬ: ಪ್ರತಿ ಬಾರಿ ಲೋಕಸಭೆ, ವಿಧಾನ ಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಸಮೀಕ್ಷೆ ನಡೆಸಲು ಹಲವು ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಕೆಲ ಪ್ರತಿಷ್ಠಿತ ಸಂಸ್ಥೆಗಳನ್ನು ರಾಜಕೀಯ ನಾಯಕರೇ ಹುಡುಕಿಕೊಂಡು ಹೋದರೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಗಳು, ಅಭ್ಯರ್ಥಿಗಳ ಬಳಿ ತೆರಳಿ, ಇಂತಿಷ್ಟು ಹಣ ನೀಡಿದರೆ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ನಿಮ್ಮ ಪರವಾಗಿ ಯಾವ ರೀತಿ ಒಲವಿದೆ ಎಂಬುದರ ಬಗ್ಗೆ ವರದಿ ನೀಡುವುದಾಗಿ ಹೇಳಿ ಸಮೀಕ್ಷೆ ನಡೆಸಿ ವರದಿ ನೀಡುತ್ತಿವೆ. ಚುನಾವಣೆ ವೇಳೆ ಇಂಥ ಸಂಸ್ಥೆಗಳಿಗಂತೂ ಹಬ್ಬವಾಗಿದೆ.

ಸಮೀಕ್ಷೆ ಹೇಗೆ? ಕ್ಷೇತ್ರ ವ್ಯಾಪ್ತಿಯ ಮತದಾರರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸುವ ಸಂಸ್ಥೆಯ ಸಿಬ್ಬಂದಿ, ಚುನಾವಣಾ ಸಂಬಂಧ ಸಮೀಕ್ಷೆ ನಡೆಸುತ್ತಿದ್ದು, ಕಳೆದ ಬಾರಿ ಯಾರಿಗೆ ಮತ ನೀಡಿದ್ದಿರಿ, ಈ ಬಾರಿ ಯಾರಿಗೆ ಮತ ನೀಡಬೇಕು ಎಂಬುದರ ಬಗ್ಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳುತ್ತಾ ಮಾಹಿತಿ ಕಲೆ ಹಾಕಲಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಡೆ ಇರುವ ಜನರಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿ ಒಟ್ಟಾರೆ ಅಭಿಪ್ರಾಯವನ್ನು ಕ್ರೋಡೀರಿಸಿ, ಅಭ್ಯರ್ಥಿಗಳಿಗೆ ನೀಡುತ್ತಾರೆ.

ಸಮೀಕ್ಷೆ ನೆಪದಲ್ಲಿ ಮತದಾರರಿಗೆ ಕರೆ ಮಾಡಿ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.


ಇತ್ತಿಚೆಗೆ ಚುನಾವಣೆಗಳಲ್ಲಿ ಮಾಧ್ಯಮಗಳು ನಡೆಸುವ ಸಮೀಕ್ಷೆಗಿಂತ ಖಾಸಗಿ ಸಂಸ್ಥೆಗಳು ನಡೆಸುವ ಚುನಾವಣಾ ಸಮೀಕ್ಷೆ ಹೆಚ್ಚಾಗಿದೆ. ಇವು ಅಭ್ಯರ್ಥಿಗಳು ತಾವೇ ಹಣ ನೀಡಿ ಪಡೆಯುವ ಸಮೀಕ್ಷಾ ವರದಿಯಾಗಿದೆ. ಇಂತಹ ವರದಿಗಳು ಬಹುತೇಕ ಗ್ರೌಂಡ್‌ ರಿಪೋರ್ಟ್‌ ಆಗಿರದೇ ಕಚೇರಿಯಲ್ಲಿ ಕುಳಿತು ಸಿದ್ಧ್ದಪಡಿಸಿದ ವರದಿಯಾಗಿದ್ದು, ಬಹುತೇಕ ಅಭ್ಯರ್ಥಿಗಳ ಪರವಾಗಿರುತ್ತದೆ.

-ಪ್ರೊ.ಮುಜಾಫರ್‌ ಅಸ್ಸಾದಿ, ರಾಜ್ಯಶಾಸ್ತ್ರಜ್ಞ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ