ಆ್ಯಪ್ನಗರ

ಮತ್ತೆ ಮಳೆ: ರೈತರಲ್ಲಿಆತಂಕ

ಪ್ರವಾಹ ಪರಿಸ್ಥಿತಿಯಿಂದ ಈಗತಾನೆ ಚೇತರಿಸಿಕೊಳ್ಳುವಾಗಲೇ ಕಾವೇರಿ ಕಣಿವೆಯಲ್ಲಿಮತ್ತೆ ಮಳೆ ಪ್ರಾರಂಭವಾಗಿ ತಲಕಾಡು ಜನತೆಗೆ ಪ್ರವಾಹ ಭೀತಿ ಎದುರಾಗಿದೆ.

Vijaya Karnataka 10 Sep 2019, 5:00 am
ಮಣೀಶ್‌ಗೌಡ ತಲಕಾಡು
Vijaya Karnataka Web 09NYSMANI02_45


ಪ್ರವಾಹ ಪರಿಸ್ಥಿತಿಯಿಂದ ಈಗತಾನೆ ಚೇತರಿಸಿಕೊಳ್ಳುವಾಗಲೇ ಕಾವೇರಿ ಕಣಿವೆಯಲ್ಲಿಮತ್ತೆ ಮಳೆ ಪ್ರಾರಂಭವಾಗಿ ತಲಕಾಡು ಜನತೆಗೆ ಪ್ರವಾಹ ಭೀತಿ ಎದುರಾಗಿದೆ.

ತಿಂಗಳ ಹಿಂದೆ ಕೊಡಗು ಹಾಗೂ ಕೇರಳದದಲ್ಲಿಸುರಿದ ಭಾರಿ ಮಳೆಗೆ ರಾಜ್ಯದ ಬಹುತೇಕ ಜಲಾಶಯಗಳೆಲ್ಲಭರ್ತಿಯಾಗಿ ಹೊರ ಹರಿವು ಬಿಟ್ಟ ಸಮಯದಲ್ಲಿದ್ವೀಪದಂತಾಗಿದ್ದ ತಲಕಾಡು ಈ ಪ್ರವಾಹದಿಂದ ತತ್ತರಿಸಿತ್ತು. ಹೋಬಳಿಯ 15ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಜಮೀನಿಗೆ ನೀರು ನುಗ್ಗಿತು. ಆ ಸಮಯ ಕೆಲವು ಕಡೆ ಮಾತ್ರ ರೈತರು ಬೆಳೆ ಬೆಳೆದಿದ್ದರು. ಮಾಧವ ಮಂತ್ರಿ ಹಾಗೂ ರಾಮಸ್ವಾಮಿ ನಾಲೆಗಳಲ್ಲಿಈಗಾಗಲೇ ನೀರು ಬಿಟ್ಟಿರುವುದರಿಂದ ಈ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿತೊಡಗಿ ತಮ್ಮ ಗದ್ದೆಗಳಿಗೆ ನಾಟಿ ಮಾಡಿದ್ದಾರೆ. ಮತ್ತೆ ನದಿಯಲ್ಲಿನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿ ಪಾತ್ರದಲ್ಲಿರುವ ಗದ್ದೆಗಳಿಗೆ ನೀರು ನುಗ್ಗಿದೆ. ಮತ್ತೆ ನೀರು ಹೆಚ್ಚಾದರೆ ಬಹುತೇಕ ನಾಟಿ ಮಾಡಿದ ಜಮೀನುಗಳಿಗೆ ನುಗ್ಗುವುದು ಖಚಿತ. ಇದರಿಂದ ನದಿ ಪಾತ್ರದ ರೈತರ ಎದೆಯಲ್ಲಿಆತಂಕ ಶುರುವಾಗಿದೆ.

ಮತ್ತೆ ಗೂಡು ಬಿಡುವ ಆತಂಕ: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿನೀರನ್ನು ಹೊರ ಬಿಟ್ಟರೆ ತಲಕಾಡು ಭಾಗದಲ್ಲಿಮೊದಲು ಮುಳುಗಡೆಯಾಗುವ ಗ್ರಾಮವೆಂದರೆ ನದಿ ಪಕ್ಕದ ತಡಿ ಮಾಲಂಗಿ. ಗ್ರಾಮ ಈ ಹಿಂದೆ ಬಂದಿದ್ದ ಪ್ರವಾಹಕ್ಕೆ ಗ್ರಾಮದ ಅನೇಕ ಮನೆಗಳಗೆ ನೀರು ನುಗ್ಗಿದ ಪರಿಣಾಮ ಇಲ್ಲಿನ ಸ್ಥಳೀಯರು ವಾರಗಳ ಕಾಲ ತಮ್ಮ ಮನೆಗಳನ್ನು ಬಿಟ್ಟು ಗ್ರಾಮದ ಶಾಲೆಯಲ್ಲಿತೆರೆದಿದ್ದ ಗಂಜಿ ಕೇಂದ್ರದಲ್ಲಿಆಶ್ರಯ ಪಡೆದಿದ್ದರು. ಪ್ರವಾಹ ಕಡಿಮೆಯಾದ ನಂತರ ಮತ್ತೆ ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಆದರೆ ತಮ್ಮ ಮನೆಗಳಿಗೆ ಹೋಗಿ ಮನೆಗಳು ಹಾಗೂ ತಮ್ಮ ಆಸ್ತಿ ಪಾಸ್ತಿಗಳಿಗೆ ಹಾನಿ ಆಗಿದೆಯೋ ಇಲ್ಲವೋ ಎಂದು ನೋಡಿಕೊಳ್ಳುವ ಮೊದಲೇ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಮತ್ತೆ ಪ್ರವಾಹ ಹೆಚ್ಚಾದರೆ ಮನೆಗಳನ್ನು ಬಿಡಬೇಕಾಗುತ್ತದೆ ಎಂದು ತಿಳಿಸಿ ಹೋಗಿದ್ದು, ಮತ್ತೆ ಮನೆ ಬಿಡುವ ಪರಿಸ್ಥಿತಿ ತಡಿಮಾಲಂಗಿ ಗ್ರಾಮದ ಜನತೆಗೆ ಎದುರಾಗಿದೆ.

ನಿಸರ್ಗಧಾಮಕ್ಕೂ ಪ್ರವೇಶ ನಿರ್ಬಂಧ: ಸಾಲು ಸಾಲು ರಜೆಗಳು ಬಂದರೆ ತಲಕಾಡಿನ ನಿಸರ್ಗಧಾಮದ ಒಳಗೆ ಕಾಲಿಡಲೂ ಜಾಗವಿಲ್ಲದ ರೀತಿಯಲ್ಲಿಪ್ರವಾಸಿಗರು ಆಗಮಿಸುತ್ತಾರೆ. ಆದರೆ ನಿಸರ್ಗಧಾಮದ ಒಳಗೆ ಹರಿಯುವ ಕಾವೇರಿ ನದಿಯ ನೀರಿನ ಪ್ರಮಾಣಕ್ಕೆ ಸಂಪೂರ್ಣ ಮುಳುಗಡೆಯಾಗಿದ್ದರಿಂದ ಪ್ರವಾಸಿಗರಿಗೆ ಇರಲಿ ಇಲ್ಲಿನ ಸ್ಥಳೀಯರಿಗೂ ನಿಸರ್ಗಧಾಮದ ಒಳಗೆಡೆ ತೆರಳಲು ನಿರ್ಬಂಧ ಹೇರಲಾಗಿತ್ತು. ಈ ವೇಳೆಯಲ್ಲಿತಲಕಾಡಿಗೆ ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ಮನೆ ಕಡೆ ತೆರಳಬೇಕಾಯಿತು. ಈಗ ಸುಮಾರು 80ರಿಂದ ಒಂದು ಲಕ್ಷದ ಒಳಗೆ ನೀರು ಬರುತ್ತಿದ್ದು, ಪ್ರವಾಸಿಗರಿಗೆ ನಿಸರ್ಗಧಾಮದ ಒಳಗೆ ಪ್ರವೇಶವಿರುತ್ತದೆ. ಆದರೆ ನೀರಿನ ಪ್ರಮಾಣ ಒಂದು ಲಕ್ಷಕ್ಕೂ ಹೆಚ್ಚಾದರೆ ಭದ್ರತೆ ದೃಷ್ಟಿಯಿಂದ ನಿರ್ಬಂಧ ಅನಿವಾರ್ಯ.

ನದಿಗೆ ಹೊರ ಹರಿವಿನ ಪ್ರಮಾಣದ ಮಾಹಿತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗ ಬರುತ್ತಿರುವ ನೀರಿನಿಂದ ಯಾವುದೇ ತೊಂದರೆ ಇಲ್ಲ. ನೀರಿನ ಮಟ್ಟ ಲಕ್ಷಕ್ಕೂ ಹೆಚ್ಚಾದರೆ ಸ್ವಲ್ಪ ತೊಂದರೆ ಎದುರಾಗುತ್ತದೆ. ತಡಿ ಮಾಲಂಗಿ ಗ್ರಾಮಕ್ಕೆ ಈಗಾಗಲೇ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದ್ದೇನೆ.

-ನಾಗಪ್ರಾಂಶತ್‌, ತಹಸೀಲ್ದಾರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ