ಮೈಸೂರು: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಮಾತುಗಳನ್ನಾಡಿ ದೇಶಕ್ಕೆ ಕೆಟ್ಟ ಸಂದೇಶ ನೀಡುತ್ತಿರುವ ಸಮಾಜಘಾತುಕನಾಗಿದ್ದು, ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಗಡಿಪಾರು ಮಾಡುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷದ ಮುಖಂಡರು ಉದ್ರಿಕ್ತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾದಿ, ಬೀದಿಯಲ್ಲಿ ಕೂತು ಸಂವಿಧಾನದ ಬಗ್ಗೆ ಮಾತನಾಡುವ ಇವರಿಗೆ ನೈತಿಕತೆಯಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶವ್ಯಕ್ತಪಡಿಸಿದರು.
ಸಂವಿಧಾನದ ಸವಲತ್ತು ಪಡೆದು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಸಂವಿಧಾನಕ್ಕೆ ಧಕ್ಕೆಯಾಗುವಂತೆ ಮಾತನಾಡುತ್ತಿದ್ದಾರೆ. ಸಂವಿಧಾನ ಸರಿಯಾಗಿ ಇದೆ. ಆಡಳಿತ ನಡೆಸುವ ಮನುವಾದಿಗಳು ಸರಿಯಿಲ್ಲ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸಾಹಿತಿಗಳಿಗೆ ತಂದೆ-ತಾಯಿ ಯಾರು ಎಂದು ಪ್ರಶ್ನಿಸಿರುವ ಅನಂತ್ಕುಮಾರ್ ಹೆಗಡೆ ಅವರು ತಮ್ಮ ತಂದೆ ತಾಯಿ ಯಾರು ಎಂದು ತಿಳಿದುಕೊಳ್ಳಲಿ. ಈ ದೇಶದ ಮೂಲ ನಿವಾಸಿಗಳು ಯಾರು? ವಲಸೆ ಬಂದವರು ಯಾರು? ಎಂದು ನೋಡಿಕೊಳ್ಳಲಿ. ಡಿಎನ್ಎ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಟೀಕಿಸಿದರು.
ಸುದ್ದಿಗೊಷ್ಠಿಯಲ್ಲಿ ಜೈಭೀಮ್ ಸ್ಪೋಟ್ಸ್ ಕ್ಲಬ್ ಸಂಚಾಲಕ ಮಧುಸೂದನ್, ರಾಜು ಉಪಸ್ಥಿತರಿದ್ದರು.