ಆ್ಯಪ್ನಗರ

ಹಣ ದುರುಪಯೋಗ: ಮಾಜಿ ಮೇಯರ್‌ಗೆ ಶಿಕ್ಷೆ

ಕಕ್ಷಿದಾರರ ಹಣ ದುರುಪಯೋಗ ಸಂಬಂಧ ಮಾಜಿ ಮೇಯರ್‌ಗೆ ಶಿಕ್ಷೆಗೆ ವಿಧಿಸಿ ಆದೇಶ ಹೊರಡಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿ ಹಿಡಿದಿದೆ.

Vijaya Karnataka 28 Oct 2018, 5:00 am
ಮೈಸೂರು : ಕಕ್ಷಿದಾರರ ಹಣ ದುರುಪಯೋಗ ಸಂಬಂಧ ಮಾಜಿ ಮೇಯರ್‌ಗೆ ಶಿಕ್ಷೆಗೆ ವಿಧಿಸಿ ಆದೇಶ ಹೊರಡಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿ ಹಿಡಿದಿದೆ.
Vijaya Karnataka Web money abuse the former mayor was sentenced
ಹಣ ದುರುಪಯೋಗ: ಮಾಜಿ ಮೇಯರ್‌ಗೆ ಶಿಕ್ಷೆ


ಮಾಜಿ ಮೇಯರ್‌ ಹಾಗೂ ವಕೀಲ ಆರ್‌.ಜಿ.ನರಸಿಂಹ ಅಯ್ಯಂಗಾರ್‌ ಅವರು ಮೈಸೂರಿನ ಮೊದಲನೇ ಸಿಜೆಎಂ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯ ಕುಮಾರ್‌ ಎಂ.ಆನಂದ ಶೆಟ್ಟಿ ಅವರು ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

ಆದೇಶದ ಹಿನ್ನೆಲೆಯಲ್ಲಿ ನರಸಿಂಹ ಅಯ್ಯಂಗಾರ್‌ ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ 10 ಸಾವಿರ ರೂ. ದಂಡ ಎಂದು ನೀಡಲಾಗಿದ್ದ ಆದೇಶ ಜಾರಿಯಾಗುವ ಸಾಧ್ಯತೆ ಇದೆ.

ಮೈಸೂರಿನ ನಿವಾಸಿಯಾದ ಎಂ.ಬಿ. ಪಾರ್ವತಿ ಬಿದ್ದಪ್ಪ ಅವರ ಪರವಾಗಿ 1993ರಲ್ಲಿ ಅಲಹಾಬಾದ್‌ ಬ್ಯಾಂಕ್‌ ವಿರುದ್ಧ ಮೈಸೂರು ಗ್ರಾಹಕರ ನ್ಯಾಯಾಲಯದಲ್ಲಿ ನರಸಿಂಹ ಅಯ್ಯಂಗಾರ್‌ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ 2006ರಲ್ಲಿ ದೂರುದಾರರಾದ ಪಾರ್ವತಿ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯ, ಅವರ ಹೆಸರಿನಲ್ಲಿ 83,000 ಮತ್ತು 500 ರೂ.ಗಳ ಚೆಕ್‌ಗಳನ್ನು ನ್ಯಾಯಾಲಯಕ್ಕೆ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್‌, ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಕೊನೆಗೆ ಹಳೆಯ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. ಬಳಿಕ ಬ್ಯಾಂಕಿನವರೇ ಹಣ ನೀಡಲು ಬಂದಿದ್ದರು. ಆದರೆ, ಕಡಿಮೆ ಹಣ ನೀಡುತ್ತಿದ್ದುದರಿಂದ ಪಾರ್ವತಿ ಅವರು ಹಣ ಪಡೆಯದೆ ಮತ್ತೊಬ್ಬ ವಕೀಲ ಮೇದಪ್ಪ ಅವರ ಮೂಲಕ ಹಣ ವಸೂಲಿಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಬ್ಯಾಂಕಿನಿಂದ ಹಣ ವಸೂಲಿಯಾಗಿದೆ ಎಂಬ ವಿಷಯ ವಕೀಲರ ಮೂಲಕ ತಿಳಿಯಿತು. ಗ್ರಾಹಕರ ವೇದಿಕೆಯಲ್ಲಿ ತೀರ್ಮಾನವಾದಂತೆ ಹಣವನ್ನು ಚೆಕ್‌ ಮೂಲಕ ನೀಡಲಾಗಿದ್ದು, ಅದನ್ನು ನರಸಿಂಹ ಅಯ್ಯಂಗಾರ್‌ ಅವರ ಕಿರಿಯ ವಕೀಲ ಚಿದಂಬರಂ ಪಡೆದು, ನರಸಿಂಹ ಅಯ್ಯಂಗಾರ್‌ ಅವರಿಗೆ ನೀಡಿದ್ದರು. ಹಣದ ಚೆಕ್‌ಅನ್ನು ನರಸಿಂಹ ಅಯ್ಯಂಗಾರ್‌ ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು. ವಿಷಯ ತಿಳಿದ ಪಾರ್ವತಿ ಅವರು ನನ್ನ ಸಹಿಯನ್ನು ನಕಲು ಮಾಡಿ, ನರಸಿಂಹ ಅಯ್ಯಂಗಾರ್‌ ಅವರ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ನ್ಯಾಯಾಲಯದಲ್ಲಿ 2008ರಲ್ಲಿ ಖಾಸಗಿ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ನ್ಯಾಯಾಧೀಶರು, ಪ್ರಕರಣದ ತನಿಖೆ ನಡೆಸುವಂತೆ ಕೆ.ಆರ್‌.ಠಾಣೆ ಪೊಲೀಸರಿಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ಸಹಿಯ ಬಗ್ಗೆ ಫೋರೆನ್ಸಿಕ್‌ ಸೈನ್ಸ್‌ ಲ್ಯಾಬೋರೇಟರಿ ವರದಿ ಆಧರಿಸಿ ವಕೀಲ ನರಸಿಂಹ ಅಯ್ಯಂಗಾರ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನರಸಿಂಹ ಅಯ್ಯಂಗಾರ್‌ ಅವರೇ ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪ ಸಾಬೀತಾಗದೇ ಕೇವಲ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಅಂಶ ವಿಚಾರಣೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್‌ ಅವರು, ಒಂದು ವರ್ಷ ಶಿಕ್ಷೆ, 10 ಸಾವಿರ ರೂ. ದಂಡ ಮತ್ತು ಪಾರ್ವತಿ ಅವರಿಗೆ 84 ಸಾವಿರ ರೂ. ಪರಿಹಾರವನ್ನು ನೀಡಬೇಕು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದರು. ಈ ಆದೇಶ ಪ್ರಶ್ನಿಸಿ ಮಾಜಿ ಮೇಯರ್‌ ನರಸಿಂಹ ಅಯ್ಯಂಗಾರ್‌ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ