ಆ್ಯಪ್ನಗರ

ಎಸ್‌ಪಿಬಿ ಗಾಯನ ಮಳೆಯಲ್ಲಿ ಮಿಂದೆದ್ದರು

ಮಳೆಯನ್ನೂ ಲೆಕ್ಕಿಸಿದೆ ಗಾನಮಾಧುರ್ಯಕ್ಕೆ ಮನಸೋತ ಸಂಗೀತ ಪ್ರೇಮಿಗಳು

Vijaya Karnataka 16 Oct 2018, 9:53 am
ಮೈಸೂರು:ಆಗಸದಲ್ಲಿ ಮೋಡಗಳು ಮಡುಗಟ್ಟಿ ಮಳೆ ಸುರಿಸಿದರೂ ನೆರೆದಿದ್ದ ಕಲಾರಸಿಕರು ಕದಲದೇ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಸುಧೆಯಲ್ಲಿ ಮಿಂದೆದ್ದರು.
Vijaya Karnataka Web SPB


ದಸರಾ ಮಹೋತ್ಸವದ ಪ್ರಯುಕ್ತ ಅರಮನೆ ಆವರಣದ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.

ಮಳೆಯ ನಡುವೆ ಪೊಲೀಸ್‌ ಬ್ಯಾಂಡ್‌, ನೃತ್ಯ ರೂಪಕಗಳು ಮುಗಿಯಿತು. ನಂತರ ಎಸ್‌ಪಿಬಿ ಅವರ ಗಾಯನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ದೊಡ್ಡ ಛತ್ರಿಗಳನ್ನು ವೇದಿಕೆಯ ಮೇಲೆ ಅಳವಡಿಸಲಾಯಿತು. ಬಳಿಕ ವೇದಿಕೆ ಏರಿದ ಎಸ್‌ಪಿಬಿ 'ಎಲ್ಲರಿಗೂ ನಮಸ್ಕಾರ' ಎಂದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸಿದರು. ''ಮಳೆಯ ನಡುವೆಯೂ ನಮಗಾಗಿ ಕಾದು ನಿಂತಿರುವ ನಿಮ್ಮೆಲ್ಲರಿಗೂ ಕೃತಜ್ಞತೆಗಳು,'' ಎಂದು ಹೇಳಿದರು.

ವಿಷ್ಣುವರ್ಧನ್‌ ಅಭಿನಯದ 'ಮಳೆಯ ಮಾರುತ' ಸಿನಿಮಾದ 'ಶಾರದೇ, ದಯ ತೋರಿದೇ ನಿನ್ನ ಕರುಣೆಯ ಕಡಲಲ್ಲಿ...', 'ಇದೇ ನಾಡು, ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ....'ಹಾಡುಗಳನ್ನು ಹಾಡುಗಳನ್ನು ಸುಮಧುರವಾಗಿ ಹಾಡಿ ಪೇಕ್ಷಕರ ಮನ ರಂಜಿಸಿದರು. ಗಾಯಕಿ ಎಂ.ಡಿ.ಪಲ್ಲವಿ ಅವರೂ ಹಲವು ಗೀತೆಗಳನ್ನು ಹಾಡಿದರು.

ಇದಕ್ಕೂ ಮೊದಲು ಮೈಸೂರಿನ ನಿಮಿಷಾಂಭ ನೃತ್ಯ ಶಾಲೆಯ ಶ್ರೀಧರ ಜೈನ್‌ ಮತ್ತು ತಂಡದವರು ಕುವೆಂಪು ರಚನೆಯ 'ಬಾರಿಸು ಕನ್ನಡ ಡಿಂಡಿಂಮವ' ಹಾಗೂ 'ಶ್ರಾವಣ ಬಂತೂ ಕಾಡಿಗೆ, ಬಂತೂ ನಾಡಿಗೆ...'ಹಾಡಿಗೆ ಮಳೆಯಲ್ಲಿಯೇ ಕುಣಿದರಲ್ಲದೇ, ಕೊನೆಯದಾಗಿ 'ವಂದೇ ಮಾತರಂ' ಗೀತೆಯ ಮೂಲಕ ದೇಶಪ್ರೇಮದ ಸಂದೇಶ ಸಾರಿದರು.

ಕುರ್ಚಿ,ಛತ್ರಿಗಳೇ ಆಸರೆ:
ಎಸ್‌ಪಿಬಿ ಅವರ ಹಾಡನ್ನು ಕೇಳಲು ಆಗಮಿಸಿದ್ದ ಸಾವಿರಾರು ಪ್ರೇಕ್ಷಕರು ಸುರಿಯುತ್ತಿದ್ದ ಮಳೆಗೆ ಕುರ್ಚಿಗಳನ್ನೇ ಎತ್ತಿಹಿಡಿದುಕೊಂಡು ಮಳೆಯಿಂದ ರಕ್ಷಣೆ ಪಡೆಯಲು ಯತ್ನಿಸಿದರು. ಇನ್ನು ಅನೇಕರು ಛತ್ರಿಗಳ ಆಸರೆಯಲ್ಲಿ ಕಾರ‍್ಯಕ್ರಮ ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ