ಆ್ಯಪ್ನಗರ

​ ಮಸೀದಿ ಜಮೀನು ಹರಾಜು:ಎರಡು ಗುಂಪುಗಳ ಘರ್ಷಣೆ

ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿನ ಮಸೀದಿಯೊಂದರ ಜಮೀನು ಹರಾಜಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 6 ಪುರುಷರು, ಒಬ್ಬ ಮಹಿಳೆ ಗಾಯಗೊಂಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.

ವಿಕ ಸುದ್ದಿಲೋಕ 22 Apr 2017, 8:30 am
ಪಿರಿಯಾಪಟ್ಟಣ: ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿನ ಮಸೀದಿಯೊಂದರ ಜಮೀನು ಹರಾಜಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 6 ಪುರುಷರು, ಒಬ್ಬ ಮಹಿಳೆ ಗಾಯಗೊಂಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.
Vijaya Karnataka Web mosque land auction conflict of two groups
​ ಮಸೀದಿ ಜಮೀನು ಹರಾಜು:ಎರಡು ಗುಂಪುಗಳ ಘರ್ಷಣೆ


ತಾಲೂಕಿನ ಕಂಪಲಾಪುರ ಕಿತ್ತೂರು ರಸ್ತೆಯ ಮಾರ್ಗ ದಲ್ಲಿ ಬರುವ ಅರೇನಹಳ್ಳಿಯಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಸೀದಿಯ 4 ಎಕರೆ ಜಾಗವನ್ನು ಹರಾಜು ಮಾಡಲು ಶುಕ್ರವಾರ ಸಭೆ ಕರೆಯಲಾಗಿತ್ತು. ಸಭೆ ಕರೆದಿದ್ದನ್ನು ಆಕ್ಷೇಪಿಸಿ ಮತ್ತು ಮಸೀದಿಯಲ್ಲಿ ಇರುವ ವಿವಾಹ ನೋಂದಣಿ ಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಸೈಯದ್ ಅನ್ಸರ್ ಮತ್ತು ಕಮಿಟಿ ಸದಸ್ಯರಾದ ಸೈಯದ್ ಇಬಾರ್, ಸೈಯದ್ ಅಲಿಪಾಷ, ಜಾಫರ್ ಮುಂತಾದವರ ನಡುವೆ ಗಲಾಟೆ ಆರಂಭವಾಗಿದೆ. ಇದು ವಿಕೋಪಕ್ಕೆ ಹೋಗಿದ್ದು, ಕಲ್ಲು ಮತ್ತು ಸೋಡಾ ಬಾಟಲಿಗಳ ತೂರಾಟ ನಡೆಸಿದ್ದರಿಂದ ಹಲವರು ಗಾಯ ಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅನ್ವರ್‌ಪಾಷ, ಅಫಸಲ್ ಪಾಷ, ಅಲೀಮಪಾಷ, ಮಹಮದ್‌ರಫಿ, ಸೈಯದ್ ಸಾಯಿದ್, ಸದ್ದಾಂಪಾಷ ಮತ್ತು ತಸಿಕಿನ್‌ಬಾನು ಗಾಯಾಳುಗಳು. ಅನ್ವರ್‌ಪಾಷ, ಅಫಸಲ್‌ಪಾಷ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಲಾಟೆಯಲ್ಲಿ 2 ಬೈಕ್‌ಗಳು ಜಖಂಗೊಂಡಿವೆ. ಸೋಡಾ ಬಾಟಲಿಗಳು ಮಸೀದಿ ಮತ್ತು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದು, ಹಲವು ಮನೆಗಳು ಶೀಟ್‌ಗಳು ಒಡೆದಿವೆ. ಹುಣಸೂರಿನ ಕೆಲವರು ಗಲಾಟೆಗಾಗಿ ಆಗಮಿಸಿದ್ದರು ಎಂಬುದು ತಿಳಿದು ಬಂದಿದೆ. ಯಾರೂ ದೂರು ನೀಡಿಲ್ಲ. ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಇಲ್ಲದಿದ್ದರೆ ಸ್ವಯಂ ದೂರು ದಾಖಲಿಸುವುದಾಗಿ ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಎನ್.ಸಿದ್ದಯ್ಯ ತಿಳಿಸಿದ್ದಾರೆ.

ಪಿಎಸ್‌ಐಗಳಾದ ಚೇನತ್, ಚಿಕ್ಕಸ್ವಾಮಿ ನೇತೃತ್ವದಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಉಪ ತಹಸೀಲ್ದಾರ್ ಸಣ್ಣರಾಮಪ್ಪ, ಆರ್‌ಐ ರಮೇಶ್, ವಿಎ ಮೂರ್ತಿ ಮತ್ತಿತರರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ