ಆ್ಯಪ್ನಗರ

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ರಾಷ್ಟ್ರೀಯ ಯುವ ಸಂಗೀತೋತ್ಸವಕ್ಕೆ ಚಾಲನೆ

ನಾದ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ನಂಟಿದೆ. ನಾದಕ್ಕೆ ತನ್ನದೇ ಆದ ಶೈಲಿ, ಸ್ವಭಾವ ಮತ್ತು ಒಳಮನಸ್ಸು ಇದೆ ಎಂದು ಚಲನಚಿತ್ರನಿರ್ದೇಶಕ ಟಿ.ಎಸ್‌.ನಾಗಾಭರಣ ಹೇಳಿದರು.

Vijaya Karnataka 2 Nov 2018, 5:00 am
ಮೈಸೂರು: ನಾದ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ನಂಟಿದೆ. ನಾದಕ್ಕೆ ತನ್ನದೇ ಆದ ಶೈಲಿ, ಸ್ವಭಾವ ಮತ್ತು ಒಳಮನಸ್ಸು ಇದೆ ಎಂದು ಚಲನಚಿತ್ರನಿರ್ದೇಶಕ ಟಿ.ಎಸ್‌.ನಾಗಾಭರಣ ಹೇಳಿದರು.
Vijaya Karnataka Web 0111-2-1-MYSPHOTOS-2


ಸಂಸ್ಕಾರ ಭಾರತೀ ಮೈಸೂರು ಮತ್ತು ಗಣಪತಿ ಸಚ್ಚಿದಾನಂದ ಆಶ್ರಮ ಸಹಯೋಗದಲ್ಲಿ ನಗರದ ಅವದೂತ ದತ್ತ ಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಗುರುವಾರದಿಂದ ನ.4ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಯುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಂಸ್ಕೃತಿ ಬೆಳೆಯುತ್ತಾ ಹೋದಂತೆ ನಮ್ಮ ಸಮಾಜ ಆರೋಗ್ಯವಾಗಿರುತ್ತದೆ. ಹಾಗಾಗಿ ಯುವ ಸಮೂಹ ನಮ್ಮ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು. ನಾವು ಪರಿಸರದಿಂದ ದೂರಾದಷ್ಟು ಪ್ರಕೃತಿ ತನ್ನ ಒಡಲಿಗೆ ನಮ್ಮನ್ನು ಎಳೆದುಕೊಳ್ಳುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ದುರಂತವೇ ಸಾಕ್ಷಿ. ಇದು ಪ್ರಕೃತಿ ನಮಗೆ ನೀಡುತ್ತಿರುವ ಎಚ್ಚರಿಕೆಯೂ ಹೌದು ಎಂದರು.

ಎಡ -ಬಲ ಎಂಬ ಸಿದ್ದಾಂತಗಳು ಮನುಷ್ಯನನ್ನು ನೋಡುವ ಬಗೆಯನ್ನೇ ಬದಲಾಯಿಸಿವೆ. ನಾವು ಎಡ ಅಲ್ಲ, ಬಲ ಅಲ್ಲ ಮಧ್ಯಂತರರು, ಮಾನವರು ಎಂಬ ಮನೋಭಾವದಿಂದ ಬದುಕಬೇಕಿದೆ. ಕಲಾ ಪ್ರಕಾರಗಳು ಮಾತ್ರ ಯಾವುದೇ ಲಿಂಗ, ಜಾತಿ, ಧರ್ಮಗಳನ್ನು ನೋಡದೆ ತನ್ನತ್ತ ಎಳೆದುಕೊಳ್ಳುತ್ತವೆ. ಮನುಷ್ಯನು ಕೂಡ ಜಾತಿ, ಧರ್ಮಗಳ ಹೊರತಾಗಿ ಮಾನವೀಯತೆಯನ್ನು ಮುಖ್ಯವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜಮನೆತನದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಬ್ರಿಟಿಷರಿಗೆ ಕರ್ನಾಟಕದ ಶಕ್ತಿ ಬಗ್ಗೆ ಭಯವಿತ್ತು. ಹಾಗಾಗೀಯೇ ಮದ್ರಾಸ್‌ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ, ಬಾಂಬೆ ಕರ್ನಾಟಕ ಎಂದು ಪ್ರಾದೇಶಿಕವಾಗಿ ವಿಂಗಡಿಸಿದ್ದರು. ಇಂತಹ ಸಮಯದಲ್ಲಿ ಅಖಂಡ ಕರ್ನಾಟಕ ರೂಪುಗೊಳ್ಳಬೇಕು ಎಂದು ಮೊದಲು ಕರೆ ನೀಡಿದವರು ಆಲೂರು ವೆಂಕಟರಾಯರು. ಅವರ ''ಕರ್ನಾಟಕ ಗತವೈಭವ'' ಕೃತಿಯಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ಆನಂತರ ವಿವಿಧ ರೀತಿಯ ಹೋರಾಟಗಳಿಂದ ಕರ್ನಾಟಕ ರಚನೆಗೊಂಡಿದೆ. ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು ಎಂದರು.

ಮೈಸೂರು ಸಂಸ್ಕಾರ ಭಾರತೀ ವೆಬ್‌ಸೈಟ್‌ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಗೀತದ ಕುರಿತು ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಯ 24 ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಸಂಗೀತೋತ್ಸವದಲ್ಲಿ ಗಾಯಕರಾದ ಹರಿಣಿ ರಮೇಶ್‌ ಅವರಿಂದ ಕರ್ನಾಟಕ ಗಾಯನ, ರಕ್ಷಿತಾ ರಮೇಶ್‌-ವೀಣಾವಾದನ, ಮಹಾಲಕ್ಷ್ಮೀ ಶೇನಿ-ಹಿಂದೂಸ್ಥಾನಿ ಗಾಯನ, ಅಮಿತ್‌ ನಾಡಿಗ್‌ ಅವರ ಕರ್ನಾಟಕಿ ಕೊಳಲುವಾದನ, ಸಿದ್ಧಾರ್ಥ ಬೆಲ್‌ಮಣ್ಣು ಹಿಂದೂಸ್ಥಾನಿ, ರಾಮಕೃಷ್ಣ ಮೂರ್ತಿ - ಕರ್ನಾಟಕ ಗಾಯನವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆಗ್ರಾದ ಸಂಸ್ಥಾಪಕ್‌ ಸಂಘಟನಾ ಮಂತ್ರಿ ಪದ್ಮಶ್ರೀ ಶ್ರೀ ಬಾಬಾ ಯೋಗೇಂದ್ರಜೀ, ಕರ್ನಾಟಕ ಉತ್ತರದ ಸಂಸ್ಕಾರ ಭಾರತೀ ಅಧ್ಯಕ್ಷ ಕೃಷ್ಣದೇವರಾಯ, ಸಂಸ್ಕಾರ ಭಾರತೀಯ ಮುಖ್ಯ ಕಾರ್ಯದರ್ಶಿ ಅಮೀರ್‌ಚಂದ್‌, ಭಾರತ ಸರಕಾರದ ಸಾಂಸ್ಕೃತಿಕ ಕೇಂದ್ರ ದಕ್ಷಿಣ ವಲಯದ ನಿರ್ದೇಶಕ ಡಾ.ದೀಪಕ್‌ ಶಾಂತರಾಮ್‌ ಕಿರವಾಡ್ಕರ್‌, ಸಂಸದ ಪ್ರತಾಪ್‌ ಸಿಂಹ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ