ಆ್ಯಪ್ನಗರ

ಮೈಸೂರು: ಚಾಮುಂಡೇಶ್ವರಿಗೆ ಕುಂಭಾಭಿಷೇಕ

ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಭಾನುವಾರ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರಗೊಂಡ ಗೋಪುರದ ಕಳಸಾರೋಹಣದ ವಿವಿಧ ಧಾರ್ಮಿಕ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

Vijaya Karnataka 25 Jun 2018, 5:00 am
ಮೈಸೂರು: ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಭಾನುವಾರ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರಗೊಂಡ ಗೋಪುರದ ಕಳಸಾರೋಹಣದ ವಿವಿಧ ಧಾರ್ಮಿಕ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web mysore chamundeshwari
ಮೈಸೂರು: ಚಾಮುಂಡೇಶ್ವರಿಗೆ ಕುಂಭಾಭಿಷೇಕ


ಕುಂಭಾಭಿಷೇಕ ಕಣ್ತುಂಬಿಕೊಳ್ಳಲು ಚಾಮುಂಡಿ ಬೆಟ್ಟಕ್ಕೆ ಜನಸ್ತೋಮ ಹರಿದು ಬಂದಿತ್ತು. ಜೂ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ಕುಂಭಾಭಿಷೇಕ ನಡೆಯುತ್ತಿದ್ದು, ಭಾನುವಾರ ರಜಾ ದಿನ ಹಿನ್ನೆಲೆ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಾನುವಾರ ಬೆಳಗ್ಗೆ 8ಕ್ಕೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಯಾಗಶಾಲಾ ಪ್ರವೇಶ ನಡೆಯಿತು. ನಂತರ ಗಣಪತಿ ಪೂಜೆ, ಪುಣ್ಯಾಹ, ಬಿಂಬ ಶುದ್ಧಿ, ನೇತ್ರೋನ್ಮಿಲನ ರಕ್ಷಾ ಬಂಧನ, ಜಲಾಧಿವಾಸ ನೆರವೇರಿಸಿ ಕಳಸ ಸ್ಥಾಪನೆ ಮಾಡಲಾಯಿತು. ನಂತರ ಅಗ್ನಿ ಪ್ರತಿಷ್ಠೆ, ಜಪ, ಪಾರಾಯಣ, ಹೋಮಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಸಂಜೆ ಕಳಸ ಪೂಜೆ, ಹೋಮ, ಶಯ್ಯಾದಿವಾಸ, ಅಷ್ಟಾವಧಾನ ಸೇವೆ, ಸ್ಪರ್ಶ ಹೋಮ, ರತ್ನಾನ್ಯಾಸ ನಡೆಯಿತು.

ಜೀರ್ಣೋದ್ಧಾರ ಕುಂಭಾಭಿಷೇಕ: ಜೂ.25ರ ಬೆಳಗ್ಗೆ 9.55ಕ್ಕೆ ರಾಜಗೋಪುರ ಹಾಗೂ ವಿಮಾನ ಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕ ಜರುಗಲಿದೆ. ಮುಂಜಾನೆಯಿಂದಲೇ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿವಿಧ ಪೂಜಾಕೈಂಕರ್ಯಗಳು ನಡೆಯಲಿದೆ. ಪ್ರಾತಃಕಾಲದಲ್ಲಿ ಜೀವನ್ಯಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲ ಹೋಮ ಮಾಡಿ ಕಳಸಾರ್ಚನೆ, ನಾಡಿ ಸಂಧಾನ, ಕಲಾತತ್ವ ಹೋಮ, ಪೂರ್ಣಾಹುತಿ, ದಶ ದಾನ ಕುಂಭೋದ್ವಾಸನೆ, ಕುಂಭಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಲಾಗುತ್ತದೆ. ನಂತರ ಆಚಾರ್ಯಾದಿ ಋುತ್ವಿಕ್‌ ಪೂಜೆ, ಯಾಗ ಫಲ ಸ್ವೀಕಾರ ಮಾಡಿ ಪ್ರಸಾದ ವಿನಿಯೋಗಿಸಲಾಗುತ್ತದೆ. ಬೆ. 9.55ರಿಂದ 10.10ರವರೆಗೆ ಸಲ್ಲುವ ಸಿಂಹ ಲಗ್ನದಲ್ಲಿ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜ ಸ್ತಂಭಗಳ ಜೀರ್ಣೋದ್ಧಾರ, ಕುಂಭಾಭಿಷೇಕ ನೆರವೇರಲಿದೆ.

ಚಾಮುಂಡೇಶ್ವರಿ ದೇವಿಯ ದೇವಾಲಯದ ಗೋಪುರದಲ್ಲಿರುವ ವಿಗ್ರಹಗಳು ದುರಸ್ತಿಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಗೋಪುರದಲ್ಲಿದ್ದ ವಿಗ್ರಹಗಳ ದುರಸ್ತಿ ಕಾಮಗಾರಿ ಹಾಗೂ ವಿವಿಧೆಡೆ ಬಿರುಕು ಬಿಟ್ಟಿದ್ದ ಗೋಪುರದ ಗೋಡೆಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿತ್ತು. ತಮಿಳುನಾಡು ಮೂಲದ ಸುಮಾರು 70 ಮಂದಿ ಕಾರ್ಮಿಕರು ಗೋಪುರ ಹಾಗೂ ವಿಗ್ರಹದ ದುರಸ್ತಿ ಮಾಡುವ ಕಾರ್ಯವನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕಳೆದ ತಿಂಗಳು ಪೂರ್ಣಗೊಂಡಿದ್ದರಿಂದ ಜೀರ್ಣೋದ್ಧಾರವಾದ ಗೋಪುರದ ಕಳಸಾರೋಹಣ ಕಾರ್ಯಕ್ರಮ ಜೂ.23ರಿಂದ ಆರಂಭವಾಗಿದ್ದು, ಜೂ.25ಕ್ಕೆ ಸಮಾಪ್ತಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ