ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿ ಡಿ.ರಂದೀಪ್ ಶುಕ್ರವಾರದಿಂದ ಮತ್ತೆ ಮುಂದುವರಿದಿದ್ದಾರೆ.
ರಂದೀಪ್ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರಕಾರ ವರ್ಗಾಯಿಸಿ ಅಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಬೆಂಗಳೂರಿನಲ್ಲಿ ಉದ್ಯೋಗ ಮತ್ತು ತರಬೇತಿ ಆಯುಕ್ತರನ್ನಾಗಿ ನಿಯೋಜಿಸಿತ್ತು. ರೋಹಿಣಿ ಸಿಂಧೂರಿ ತಮ್ಮ ವರ್ಗಾವಣೆ ಆದೇಶವನ್ನು ಸಿಎಟಿಯಲ್ಲಿ ಪ್ರಶ್ನಿಸಿದರು. ರಾಜ್ಯ ಸರಕಾರವು ರೋಹಿಣಿ ಸಿಂಧೂರಿ ಅವರನ್ನು ಮಾ.13 ರವರೆಗೆ ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾಯಿಸುವುದಿಲ್ಲ ಎಂದು ಸಿಎಟಿಯಲ್ಲಿ ಗುರುವಾರ ಮುಚ್ಚಳಿಕೆ ಬರೆದುಕೊಟ್ಟಿದೆ. ಹೀಗಾಗಿ, ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿದಿದ್ದಾರೆ.
ಈ ಹಿನ್ನೆಲೆಯಲ್ಲಿ ರಂದೀಪ್ ಅವರು ಡಿಪಿಎಆರ್ಗೆ ಪತ್ರ ಬರೆದು ತಾವು ಮುಂದೆ ವಹಿಸಬೇಕಾದ ಕ್ರಮದ ಬಗ್ಗೆ ನಿರ್ದೇಶನ ನೀಡುವಂತೆ ಕೋರಿದ್ದರು. ರಂದೀಪ್ ಶುಕ್ರವಾರ ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮೈಸೂರು ಜಿಲ್ಲಾಧಿಕಾರಿಯಾಗಿ ತಾವು ಮತ್ತೆ ಮುಂದುವರಿದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದೇನೆ. ರಾಜ್ಯ ಸರಕಾರದಿಂದ ಮುಂದಿನ ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ರಂದೀಪ್ ತಿಳಿಸಿದ್ದಾರೆ.