Please enable javascript.Nandini Ghee Adulteration,ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಆರೋಪಿಗಳನ್ನು ಮಟ್ಟ ಹಾಕುತ್ತೇವೆ ಎಂದ ಮೈಮುಲ್‌ ಅಧ್ಯಕ್ಷ - mysore nandini ghee adulteration saimul assures strong action against culprits - Vijay Karnataka

ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಆರೋಪಿಗಳನ್ನು ಮಟ್ಟ ಹಾಕುತ್ತೇವೆ ಎಂದ ಮೈಮುಲ್‌ ಅಧ್ಯಕ್ಷ

Vijaya Karnataka Web 17 Dec 2021, 9:14 pm
Embed
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸಾಕಷ್ಟು ಸದ್ದು ಮಾಡಿದ ನಕಲಿ ನಂದಿನಿ ತುಪ್ಪ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಮೈಮುಲ್ ಎಚ್ಚೆತ್ತಿದೆ .ಮೈಸೂರಿನ ಹೊರ ವಲಯದಲ್ಲಿ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕೆ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಮೇಲೆ ಎಫ್ಐಆರ್ ದಾಖಲಾಗಿದೆ.

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಮುಲ್ ಅಧ್ಯಕ್ಷ ಪ್ರಸನ್ನ, ಈ ಬಗ್ಗೆ ನೇರವಾಗಿ ಎಸ್ಪಿಗೆ ದೂರು ನೀಡಿದ್ದೇವೆ. ಪ್ರಕರಣ ಸಂಬಂಧ ಮುರುಗೇಶ್, ಅಶ್ವಿನಿ, ಸಂತೋಷ್, ಕುಮಾರ್ ಎಂಬುವವರ ಮೇಲೆ ಎಫ್ಐಆರ್ ಆಗಿದೆ. ನಾನೂ ಕೂಡಾ ಸ್ಥಳ ಪರಿಶೀಲನೆ ಮಾಡಿ ಬಂದಿದ್ದೇನೆ. ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೇ ಭಾಗಿಯಾದ್ರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ರೆ ಸೇವೆಯಿಂದಲೇ ವಜಾ ಮಾಡುತ್ತೇವೆ. ಜೈಲಿಗೂ ಕಳುಹಿಸುತ್ತೇವೆ. ಅನೇಕ ದಿನಗಳಿಂದ ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಮಾಡಲಾಗ್ತಿತ್ತು ಅಂತ ಗೊತ್ತಾಗಿದೆ. ಗುರುವಾರ ಅಲ್ಲಿಗೂ ನಾವು ಭೇಟಿ ನೀಡಿ, ನಕಲಿ ತುಪ್ಪ ತಯಾರಿಕೆ ಘಟಕವನ್ನ ಸೀಜ್ ಮಾಡಿಸಿದ್ದೇವೆ ಎಂದರು.

ಇದೇ ಮೊದಲು ಈ ಇಂತಹ ಕಲಬೆರಕೆ ಜಾಲ ಕಂಡು ಬಂದಿರೋದು. ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಿದ್ದೇವೆ. ಗೋದಾಮಿನಲ್ಲಿ ಸಿಕ್ಕಂತಹ ಎಲ್ಲಾ ನಕಲಿ ವಸ್ತುಗಳನ್ನ ಸೀಜ್ ಮಾಡುವಂತಹ ಕೆಲಸವಾಗಿದೆ. ಫುಡ್ ಡಿಪಾರ್ಟ್ಮೆಂಟ್ಗೂ ಮಾದರಿಯನ್ನ ಕಲುಹಿಸಲಾಗಿದೆ. ಮೇಲ್ನೋಟಕ್ಕೆ ಡಾಲ್ಡಾ, ಪಾಮ್ ಆಯಿಲ್ ನಂತಹ ಪ್ರಾಡಕ್ಟ್ ಬಳಸಿದ್ದಾರೆ. ಎಲ್ಲೆಲ್ಲಿ ಸಪ್ಲೈ ಆಗ್ತಿತ್ತು, ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನುವುದರ ತನಿಖೆಯಾಗುತ್ತದೆ. ಯಾರೇ ಪ್ರಭಾವಿಗಳಿದ್ರೂ ಬಿಡಲ್ಲ, ಜೈಲಿಗೆ ಕಳುಹಿಸುತ್ತೇವೆ ಎಂದರು.

ಇಂತಹ ಅಕ್ರಮಗಳನ್ನ ತಡೆಯಲು ವಿಜುಲಿಯನ್ಸ್ ಟೀಂ ಚುರುಕುಗೊಳಿಸುತ್ತೇವೆ. ಪ್ರತಿ ವಾರಕ್ಕೊಮ್ಮೆ ಎಲ್ಲಾ ಪಾರ್ಲರ್ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಲು ಬಗ್ಗೆ ಪ್ರತಿ ವಾರ ಉತ್ಪನ್ನಗಳನ್ನ ಲ್ಯಾಬ್ ಗೆ ತಂದು ಪರಿಶೀಲಿಸುತ್ತೇವೆ. ಕೂಲಂಕಶವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ರೈತರು, ಗ್ರಾಹಕರು ಮೈಮುಲ್ ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನ ಮೈಮುಲ್ ಕಾಪಾಡಿಕೊಳ್ಳಲಿದೆ ಎಂದರು.