ಆ್ಯಪ್ನಗರ

ಗ್ರಾಹಕರ ಮನೆ ಬಾಗಿಲಲ್ಲೇ ತೆರಿಗೆ ಸಂಗ್ರಹಕ್ಕೆ ಮುಂದಾದ ಮೈಸೂರು ಪಾಲಿಕೆ

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ವಿಫಲವಾಗಿರುವ ಮೈಸೂರು ನಗರ ಪಾಲಿಕೆ ಹೊಸ ಉಪಾಯ ಕಂಡು ಹಿಡಿದಿದ್ದು, ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಕಂದಾಯ ವಸೂಲಿ ಮಾಡಲು ಯೋಜನೆ ರೂಪಿಸಿದೆ.

Vijaya Karnataka Web 23 Sep 2020, 11:04 am
ಹರೀಶ ಎಲ್‌.ತಲಕಾಡು
Vijaya Karnataka Web tax


ಮೈಸೂರು: ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ವಿಫಲವಾಗಿರುವ ಮೈಸೂರು ನಗರ ಪಾಲಿಕೆ ಹೊಸ ಮಾರ್ಗೋಪಾಯ ಕಂಡುಕೊಂಡಿದೆ. ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಕಂದಾಯ ವಸೂಲಿ ಮಾಡಲು ಮೊದಲ ಬಾರಿಗೆ ಯೋಜನೆ ರೂಪಿಸಿದೆ.

ಖಾಸಗಿ ಸಂಘ-ಸಂಸ್ಥೆಗಳು ಮತ್ತು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೆರವಿನಿಂದ ಆಯಾ ಪ್ರದೇಶದಲ್ಲಿಯೇ ತೆರಿಗೆ ವಸೂಲಿಗೆ ಕಂದಾಯ ಅದಾಲತ್‌ ನಡೆಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಮೈಸೂರು ನಗರ ಪಾಲಿಕೆಯ ವಲಯ ಕಚೇರಿ ಮೂರರ ವ್ಯಾಪ್ತಿಯಲ್ಲಿ ಈ ಆನ್‌ಲೈನ್‌ ಕಂದಾಯ ಅದಾಲತ್‌ ನಡೆಸಲು ನಿರ್ಧರಿಸಿದೆ. ಬಳಿಕ ಉಳಿದ ವಲಯ ಕಚೇರಿಗಳಿಗೂ ವಿಸ್ತರಿಸುವ ಮೂಲಕ ನಗರದಲ್ಲಿ ಶೇ. 100ರಷ್ಟು ಕಂದಾಯ ವಸೂಲಿ ಮಾಡುವ ಗುರಿ ಹೊಂದಿದೆ. ವಲಯ ಕಚೇರಿ ಮೂರರ ವ್ಯಾಪ್ತಿಯಲ್ಲಿನ ರಾಮಕೃಷ್ಣ ನಗರ ಐ ಬ್ಲಾಕ್‌, ಜಿ ಆ್ಯಂಡ್‌ಎಚ್‌ ಬ್ಲಾಕ್‌, ದಟ್ಟಗಳ್ಳಿಯಲ್ಲಿ ಸ್ಪೋರ್ಟ್ಸ್ ಕ್ಲಬ್‌, ಶಾರಾದಾದೇವಿ ಮಹಿಳಾ ಸಂಘ, ಆರೋಗ್ಯ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಭಾಗಿತ್ವದಲ್ಲಿ ಸಮುದಾಯ ಭವನ, ದೇವಸ್ಥಾನ ಆವರಣದಲ್ಲಿಪಾಲಿಕೆ ಆನ್‌ಲೈನ್‌ ಕಂದಾಯ ಅದಾಲತ್‌ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

ಸಿದ್ಧತೆ ಹೇಗೆ?:
ಸಂಘ- ಸಂಸ್ಥೆಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ತಮ್ಮ ಬಡಾವಣೆ ವ್ಯಾಪ್ತಿಯಲ್ಲಿತೆರಿಗೆ ಪಾವತಿಸದ ಸಾರ್ವಜನಿಕರ ಪಟ್ಟಿಯನ್ನು ಪಾಲಿಕೆ ಅಧಿಕಾರಿಗಳು ನೀಡಲಿದ್ದು, ಸಂಘ-ಸಂಸ್ಥೆಗಳ ಸದಸ್ಯರು, ತಂಡ ರಚಿಸಿಕೊಂಡು ಪ್ರತಿಯೊಬ್ಬರ ಮನೆಗೂ ತೆರಳಿ, ಬಾಕಿ ಇರುವ ತೆರಿಗೆ ಪಾವತಿ ಮಾಡುವುದರ ಬಗ್ಗೆ ಗ್ರಾಹಕರ ಮನವೊಲಿಸುವುದರೊಂದಿಗೆ ಆನ್‌ಲೈನ್‌ ಕಂದಾಯ ಅದಾಲತ್‌ ಬಗ್ಗೆ ಮಾಹಿತಿ ನೀಡಿ ಅಂದು ತೆರಿಗೆ ಪಾವತಿಸುವಂತೆ ಮನವಿ ಮಾಡುವರು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಾಲಿಕೆಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹ ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿಗೆ ಸರಕಾರ ನೀಡಿದ್ದ ಕಾಲಾವಾಶವನ್ನು ವಿಸ್ತರಣೆ ಮಾಡಿತ್ತು. ಕರಪತ್ರ ಮತ್ತು ಪೋಸ್ಟರ್‌ಗಳ ಪ್ರಚಾರ ಮಾಡುತ್ತಿರುವುದರ ನಡುವೆ ಮನೆ ಮನೆಗೂ ತೆರಳಿ ಕಸ ಸಂಗ್ರಹಿಸುವ ಕಸ ವಿಲೇವಾರಿ ವಾಹನಗಳನ್ನು ಸಹ ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ವಲಯ ವ್ಯಾಪ್ತಿ 3ರಲ್ಲಿ ಕಸ ಸಂಗ್ರಹಿಸುವ 12 ವಾಹನಗಳಲ್ಲಿ ಇರುವ ಧ್ವನಿವರ್ಧಕ ಬಳಸಿಕೊಂಡು ಅಕ್ಟೋಬರ್‌ ಅಂತ್ಯದೊಳಗೆ ತೆರಿಗೆ ಪಾವತಿಸುವಂತೆ ಮನವಿ ಮಾಡಲಾಗುತ್ತಿದೆ ಎನ್ನುತ್ತಾರೆ ಸಹಾಯಕ ಆಯುಕ್ತ ಸತ್ಯಮೂರ್ತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ