ಆ್ಯಪ್ನಗರ

ಭಿಕ್ಷೆ ಬೇಡುತ್ತಿದ್ದ ದೇಗುಲಕ್ಕೆ 2.5 ಲಕ್ಷ ರೂ. ದಾನ ನೀಡಿದ ಭಿಕ್ಷುಕಿ

ಯಾರ ಮೇಲೂ ಅವಲಂಬಿತರಾಗಲು ಇಷ್ಟಪಡದ ಈಕೆ ದೇವಸ್ಥಾನದ ಮುಂದೆ ಕೂತು, ಭಿಕ್ಷೆಯಿಂದ ಬಂದ ಹಣದಲ್ಲಿ 2.5 ಲಕ್ಷ ರೂ.ಗಳನ್ನು ದೇವಸ್ಥಾನದ ಅಭಿವೃದ್ಧಿಗೆಂದು ದಾನ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Vijaya Karnataka Web 21 Nov 2017, 11:29 am
ಮೈಸೂರು: ಎಲ್ಲರ ಮನೆ ಕೆಲಸ ಮಾಡಿಕೊಂಡು ದುಡಿಯುತ್ತಿದ್ದ ಈ ಮಹಿಳೆ ಕೈ ಸೋತಾಗ ಆರಿಸಿಕೊಂಡಿದ್ದು ಭಿಕ್ಷಾಟನೆಯನ್ನು. ಯಾರ ಮೇಲೂ ಅವಲಂಬಿತರಾಗಲು ಇಷ್ಟಪಡದ ಈಕೆ ದೇವಸ್ಥಾನದ ಮುಂದೆ ಕೂತು, ಭಿಕ್ಷೆಯಿಂದ ಬಂದ ಹಣದಲ್ಲಿ 2.5 ಲಕ್ಷ ರೂ.ಗಳನ್ನು ದೇವಸ್ಥಾನದ ಅಭಿವೃದ್ಧಿಗೆಂದು ದಾನ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Vijaya Karnataka Web mysuru woman donates rs 2 5 lakh to temple where she begs
ಭಿಕ್ಷೆ ಬೇಡುತ್ತಿದ್ದ ದೇಗುಲಕ್ಕೆ 2.5 ಲಕ್ಷ ರೂ. ದಾನ ನೀಡಿದ ಭಿಕ್ಷುಕಿ


ತಮ್ಮ ಬಳಿಯೇ ಹಣ ಇಟ್ಟುಕೊಳ್ಳುವುದು ಒಳ್ಳೆಯದಲ್ಲವೆಂದು, ಎಲ್ಲವನ್ನೂ ಕರುಣಿಸಿದ ದೇವರಿಗೆ ಉಳಿತಾಯದ ಹಣವನ್ನು ದೇವರಿಗೇ ಅರ್ಪಿಸಿ, ನಿರಾಳವಾಗಿದ್ದಾರೆ.

85 ವರ್ಷದ ಸೀತಾಲಕ್ಷ್ಮಿ ಇಂಥ ಮಹತ್ಕಾರ್ಯಕ್ಕೆ ಮುಂದಾದ ಮಹಿಳೆ. ಮೈಸೂರಿನ ಒಂಟಿಕೊಪ್ಪಲುವಿನ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳೆದೊಂದು ದಶಕದಿಂದಲೂ ಇವರು ಭಿಕ್ಷೆ ಬೇಡುತ್ತಿದ್ದರು. ಬಂದ ಹಣವನ್ನು ಬ್ಯಾಂಕಿಗೂ ಹಾಕುತ್ತಿದ್ದರು. ಇದೀಗ ಇವರ ಕಾರ್ಯಕ್ಕೆ ಅತೀವ ಶ್ಲಾಘನೆ ವ್ಯಕ್ತವಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಈಕೆಯ ಕಾಲೆಗೆರಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಅಲ್ಲದೇ ದೇಗುಲದ ಟ್ರಸ್ಟ್ ಸನ್ಮಾನಿಸಿ, ಈ ಅಜ್ಜಿಯನ್ನು ಗೌರವಿಸಿದೆ.

ಕಳೆದ ಗಣೇಶ ಹಬ್ಬಕ್ಕೆ 30 ಸಾವಿರ ರೂ. ದಾನ ಮಾಡಿದ ಈ ಅಜ್ಜಿ ಈಗ ದೇವಸ್ಥಾನಕ್ಕೆ 2 ಲಕ್ಷ ರೂ. ದಾನ ಮಾಡಿದ್ದಾರೆ. ಎಲ್ಲವೂ ಸೇರಿ ಒಟ್ಟು 2.5 ಲಕ್ಷ ರೂ. ದಾನ ಮಾಡಿದಂತಾಗಿದೆ. ಹನುಮ ಜಯಂತಿಯಂದು ಪ್ರಸಾದ ವಿನಿಯೋಗಕ್ಕೆ ತಮ್ಮ ಹಣವನ್ನು ಬಳಸಿಕೊಳ್ಳಬೇಕೆಂಬುವುದು ಈ ಅಜ್ಜಿಯ ಆಶಯ.

ಯಾರ ಮೇಲೂ ಭಿಕ್ಷೆಗಾಗಿ ಒತ್ತಡ ಹೇರದ ಈ ಅಜ್ಜಿಗೆ, ದೇವಸ್ಥಾನಕ್ಕೆ ಬರುವ ಭಕ್ತರು ಮನಃಪೂರ್ವಕವಾಗಿ ಭಿಕ್ಷೆ ಹಾಕುತ್ತಾರೆ. ಕೆಲವರಂತೂ 100 ರೂ. ಕೊಟ್ಟಿದ್ದೂ ಇದೆ. ಸುತ್ತಮುತ್ತಲಿನ ಜನರು ಆಕೆಯ ಆರೋಗ್ಯ ಕಡೆ ಗಮನಹರಿಸುತ್ತಾರೆ.

ಸುಮಾರು 30 ವರ್ಷಗಳಿಂದಲೂ ಬಲ್ಲ ನೆರೆಹೊರೆಯವರಿಗೆ ಈ ಅಜ್ಜಿಯ ಬಗ್ಗೆ ಹೆಮ್ಮೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ