ಆ್ಯಪ್ನಗರ

ಬಿಜೆಪಿ ಗಟ್ಟಿಯಾಗಬೇಕು ಎನ್ನುವುದು ಸಿದ್ದು ಸಂದೇಶ, ಕುಟುಕಿದ ಕಟೀಲ್‌

ಸಿದ್ದರಾಮಯ್ಯ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ್ದೇ ಸಿದ್ದರಾಮಯ್ಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕುಟುಕಿದರು.

Vijaya Karnataka Web 2 Jun 2020, 8:47 am
ಮೈಸೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್‌ ಬಿಡುವುದಿಲ್ಲ. ಅದಕ್ಕಾಗಿ ಬಿಜೆಪಿಯವರಿಗೆ ಗಟ್ಟಿಯಾಗಿರಿ ಎಂದು ಸಿದ್ದರಾಮಯ್ಯ ಸಂದೇಶ ಕಳುಹಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕುಟುಕಿದರು.
Vijaya Karnataka Web nalin kumar kateel
ನಳೀನ್‌ ಕುಮಾರ್‌ ಕಟೀಲ್


ನಗರದಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿದ್ದರಾಮಯ್ಯ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ್ದೇ ಸಿದ್ದರಾಮಯ್ಯ. ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿರುವುದು ನಾವು ಗಟ್ಟಿಯಾಗಿರಬೇಕು ಎನ್ನುವುದನ್ನು ಎಚ್ಚರಿಸಲು. ಇದು ಅವರ ಬುದ್ಧಿವಂತಿಕೆಯನ್ನು ತೋರಿಸುತ್ತದೆ,'' ಎಂದರು.

''ನಮ್ಮ ಸರಕಾರ ಸುಭದ್ರವಾಗಿದೆ. ನಮಗೆ ಬೇರೆ ಪಕ್ಷಗಳ ಶಾಸಕರ ಅವಶ್ಯಕತೆ ಇಲ್ಲ. ಶಾಸಕರು ಹಾಗೂ ಸಂಸದರು ಪ್ರತ್ಯೇಕ ಸಭೆಗಳನ್ನು ನಡೆಸುವುದು ಸಹಜ. ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತದೆ. ಅದನ್ನು ಭಿನ್ನಮತ ಎಂದು ಬಿಂಬಿಸುವುದು ಸರಿಯಲ್ಲ. ಅವರು ಯಾವುದಾದರೂ ಬೇಡಿಕೆ ಇಟ್ಟು, ನಾವು ಭಿನ್ನಮತರು ಎಂದು ಹೇಳಿದ್ದರೆ ಅದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ. ಸಭೆ ನಡೆಸುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ನಾನು ಇಂದು ಮೈಸೂರು ಭಾಗದ ಶಾಸಕರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಇದರಿಂದ ತಪ್ಪು ಸಂದೇಶ ಹೋಗಲು ಹೇಗೆ ಸಾಧ್ಯ? ನಮ್ಮ ಪಕ್ಷದಲ್ಲಿ ಯಾವುದೇ ಪಕ್ಷ ವಿರೋಧಿ ಕೆಲಸ ನಡೆದಿಲ್ಲ. ಶಾಸಕರು ಒಟ್ಟಿಗೆ ಸೇರಿ ಚಹ ಕುಡಿದಿದ್ದಾರೆ. ಅದಕ್ಕೆ ಬೇರೆ ರೀತಿಯ ಬಣ್ಣ ಹಚ್ಚುವುದು ಸರಿಯಲ್ಲ. ಬಿ.ಎಸ್‌. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಒಂದು ವೇಳೆ ಪಕ್ಷ ವಿರೋಧಿ ಸಭೆ ನಡೆದರೆ ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ,'' ಎಂದು ಹೇಳಿದರು.

ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌.ನಾಗೇಂದ್ರ, ಹರ್ಷವರ್ಧನ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಸ್‌.ಡಿ.ಮಹೇಂದ್ರ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ