ಆ್ಯಪ್ನಗರ

ಖಾಸಗಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ಖಾಸಗಿ ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ಒಬ್ಬ ವೈದ್ಯ ಸ್ಥಳದಿಂದ ಪರಾರಿಯಾದರೆ, ಮತ್ತೊಬ್ಬ ವೈದ್ಯರ ಪದವಿ ಪ್ರಮಾಣ ಪತ್ರದ ಕುರಿತು ಶಂಕೆ ವ್ಯಕ್ತವಾಗಿದೆ.

Vijaya Karnataka 18 Jul 2018, 5:00 am
ನಂಜನಗೂಡು : ಖಾಸಗಿ ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ಒಬ್ಬ ವೈದ್ಯ ಸ್ಥಳದಿಂದ ಪರಾರಿಯಾದರೆ, ಮತ್ತೊಬ್ಬ ವೈದ್ಯರ ಪದವಿ ಪ್ರಮಾಣ ಪತ್ರದ ಕುರಿತು ಶಂಕೆ ವ್ಯಕ್ತವಾಗಿದೆ.
Vijaya Karnataka Web officials attack on private clinic
ಖಾಸಗಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ


ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್‌.ಡಿ.ಕಲಾವತಿ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ಹುರಾ ಗ್ರಾಮದಲ್ಲಿ ಎರಡು ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತು.

ಹುರ ಗ್ರಾಮದ ಹೆಡಿಯಾಲ ಮುಖ್ಯರಸ್ತೆಯಲ್ಲಿರುವ ಕೊಟ್ಟಕಲ್‌ ಆರ್ಯ ವೈದ್ಯ ಶಾಲಾ ಕ್ಲಿನಿಕ್‌ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ ಭೇಟಿ ಕೊಡುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭ ಕ್ಲಿನಿಕ್‌ನಲ್ಲಿ ಕೆಪಿಎಂಇ ಮೂಲಕ ವೈದ್ಯರ ನೋಂದಣಿಯಾಗಿರುವ ಪ್ರಮಾಣ ಪತ್ರ ಸೇರಿದಂತೆ ವೈದ್ಯಕೀಯ ವ್ಯಾಸಂಗದ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಕ್ಲಿನಿಕ್‌ನಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಡಾ.ಕಲಾವತಿ, ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಸಂಪೂರ್ಣ ವಿವರವನ್ನು ಲಗತ್ತಿಸದಿದ್ದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.

ಇದೇ ಗ್ರಾಮದ ಸ್ನೇಹ ಕ್ಲಿನಿಕ್‌ಗೆ ಭೇಟಿ ನೀಡಿದ ವೇಳೆ ವೈದ್ಯ ಡಾ.ಮೋಹನ್‌ಕುಮಾರ್‌ ಕೆಪಿಎಂಇ ನೋಂದಣಿ ಪ್ರಮಾಣ ಪತ್ರವನ್ನು ಗೋಡೆಯಲ್ಲಿ ಅಳವಡಿಸಿದ್ದರೂ ಬಿಎಎಂಎಸ್‌ ವ್ಯಾಸಂಗ ಮಾಡಿರುವ ಯಾವುದೇ ದಾಖಲೆಗಳು ಅವರ ಬಳಿ ಲಭ್ಯವಿರಲಿಲ್ಲ. ಹೀಗಾಗಿ ವೈದ್ಯರು ಅಳವಡಿಸಿರುವ ಪ್ರಮಾಣ ಪತ್ರದ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಮೂರು ದಿನಗಳ ಒಳಗಾಗಿ ಬಿಎಎಂಎಸ್‌ ವ್ಯಾಸಂಗ ಮಾಡಿರುವ ಕುರಿತು ದಾಖಲಾತಿಯನ್ನು ಕಚೇರಿಗೆ ಸಲ್ಲಿಸುವಂತೆ ಡಾ.ಕಲಾವತಿ ಅವರು ವೈದ್ಯರಿಗೆ ಸೂಚಿಸಿದರು. ನಿಗದಿತ ಸಮಯದಲ್ಲಿ ಪ್ರಮಾಣ ಪತ್ರ ಹಾಜರುಪಡಿಸದಿದ್ದಲ್ಲಿ ಕಾನೂನು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ ಮಾತನಾಡಿ, ''ತಾಲೂಕಿನ ಗಡಿಯಂಚಿನ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರು ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹುರಾ ಗ್ರಾಮದ ಎರಡು ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ ವೇಳೆ ದೃಢೀಕೃತ ಪ್ರಮಾಣ ಪತ್ರವನ್ನು ಇಬ್ಬರೂ ವೈದ್ಯರು ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ವೈದ್ಯಕೀಯ ವ್ಯಾಸಂಗ ಪ್ರಮಾಣ ಪತ್ರದ ದಾಖಲೆಗಳನ್ನು ಕಚೇರಿಗೆ ತಲುಪಿಸಲು ಸೂಚಿಸಲಾಗಿದೆ. ನಿಗದಿತ ಕಾಲಾವಧಿಯಲ್ಲಿ ದಾಖಲೆಗಳನ್ನು ಒದಗಿಸದಿದ್ದಲ್ಲಿ ಹುಲ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

''ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್‌ ವೈದ್ಯರ ಅಸಲೀತನದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನವಿದ್ದಲ್ಲಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷ ಣವೇ ದಾಳಿ ನಡೆಸಿ ತಪಾಸಣೆ ನಡೆಸಲಾಗುವುದು,'' ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷ ಕ ಸೋಮಣ್ಣ, ಮಹಿಳಾ ಆರೋಗ್ಯ ನಿರೀಕ್ಷ ಕಿ ರಾಧಾ ದಾಳಿಯಲ್ಲಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ