ಹರೀಶ್ ಎಲ್.ತಲಕಾಡು ಮೈಸೂರು
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಎಲ್ಲಾ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದು, ಶಿಕ್ಷಕರು ಸಂಭ್ರಮದಿಂದ ಸ್ವಾಗತ ಮಾಡುತ್ತಿದ್ದಾರೆ. ಆದರೆ ಇಂದಿಗೂ ನೂರಾರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಗ್ರಾಮೀಣ ಪ್ರದೇಶಕ್ಕಿಂತ ಮೈಸೂರು ನಗರದಲ್ಲೇ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯ 314 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, 2017ರ ಡಿಸೆಂಬರ್ 5ರಿಂದ 18ರವರೆಗೆ ಸರ್ವ ಶಿಕ್ಷಣ ಅಭಿಯಾನ ನಡೆಸಿದ ಸಮೀಕ್ಷಾ ಕಾರ್ಯದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಳೆದ ವರ್ಷ 248 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಬಾಲಕರ ಸಂಖ್ಯೆಯೇ ಹೆಚ್ಚಾಗಿದೆ. 21 ಮಕ್ಕಳು ಶಾಲೆಗೆ ದಾಖಲೆಯನ್ನೇ ಪಡೆದಿಲ್ಲ.
ಶಾಲೆಯಿಂದ ವಂಚಿತರಾದ ಮಕ್ಕಳಲ್ಲಿ 182 ಬಾಲಕರು, 132 ಬಾಲಕಿಯರಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ 1 ರಿಂದ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಕಡ್ಡಾಯ ಶಿಕ್ಷಣ ಕಾಯಿದೆ ಇದ್ದರೂ ಪ್ರತಿವರ್ಷ ಈ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಶಿಕ್ಷಣ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಅಲ್ಪಸಂಖ್ಯಾತ ಮತ್ತು ಬಡ ವರ್ಗದವರೇ ಹೆಚ್ಚಾಗಿರುವ ಮೈಸೂರು ನಗರದ ಉತ್ತರ ಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಬಾಲಕಾರ್ಮಿಕರಾಗಿದ್ದಾರೆ.
ಇನ್ನು ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಕಾರ್ಮಿಕರು ಕೊಡಗಿನ ಕಾಫಿ ತೋಟಗಳಿಗೆ ವಲಸೆ ಹೋಗುತ್ತಾರೆ. ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ಎಚ್.ಡಿ.ಕೋಟೆ, ಹುಣಸೂರು, ಮೈಸೂರು ಉತ್ತರ, ನಂಜನಗೂಡು ಶಿಕ್ಷಣ ವಿಭಾಗಗಳಲ್ಲಿ ಹೆಚ್ಚಿನ ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ಬುಡಕಟ್ಟು ಸಮುದಾಯದವರು ಹೆಚ್ಚು ಇರುವ ಈ ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ. ಕೆಲ ಪೋಷಕರು ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಾರೆ. ಇನ್ನು ಕಾರ್ಮಿಕರು ವಲಸೆ ಹೋದ ಸ್ಥಳಗಳಲ್ಲಿ ಶಾಲೆಗಳು ಇರುವುದಿಲ್ಲ. ಆದ್ದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅಂತಹ ಮಕ್ಕಳ ಮನವೊಲಿಸಿ ಮತ್ತೆ ಶಾಲೆಗೆ ದಾಖಲಿಸುವ ಪ್ರಯತ್ನ ಮಾಡಲಾಗುತ್ತಿದೆ.
-ಎಸ್.ಪಿ.ನಾಗರಾಜ್, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ, ಸರ್ವ ಶಿಕ್ಷಣ ಅಭಿಯಾನ
ಶಾಲೆ ಬಿಟ್ಟ ಮಕ್ಕಳ ಮಾಹಿತಿ
* ಎಚ್.ಡಿ. ಕೋಟೆ- 44
* ಹುಣಸೂರು-40
* ಕೆ.ಆರ್.ನಗರ-24
* ಮೈಸೂರು ಗ್ರಾಮಾಂತರ-31
* ಮೈಸೂರು ಉತ್ತರ-50
* ಮೈಸೂರು ದಕ್ಷಿಣ-18
*ಪಿರಿಯಾಪಟ್ಟಣ-24
* ನರಸೀಪುರ-15
* ನಂಜಗೂಡು-47