ಆ್ಯಪ್ನಗರ

'ಪಕ್ಕೆಲುಬು' ಶಿಕ್ಷಕನ ಅಮಾನತು ಆದೇಶ ವಾಪಸ್‌ಗೆ ಸಚಿವ ಸುರೇಶ್‌ ಕುಮಾರ್‌ ಮನಸ್ಸು

'ಪಕ್ಕೆಲುಬು' ಎಂದು ಸರಿಯಾಗಿ ಉಚ್ಚರಿಸಲು ಬಾರದ ವಿದ್ಯಾರ್ಥಿಯೊಬ್ಬನ ವಿಡಿಯೋ ವೈರಲ್‌ ಆದ ಪ್ರಕರಣಕ್ಕೆ ಸಂಬಂಧಿಸಿ ಅಮಾನತು ಆದೇಶಕ್ಕೆ ಒಳಗಾಗಿದ್ದ ಶಿಕ್ಷಕ ಸಚಿವರನ್ನು ಭೇಟಿಯಾಗಿ ಅಮಾನತು ಆದೇಶ ವಾಪಸ್‌ ಪಡೆಯುವಂತೆ ವಿನಂತಿಸಿದ್ದಾರೆ. ಇದಕ್ಕೆ ಅಮಾನತು ಆದೇಶ ವಾಪಸ್‌ ಪಡೆಯೋಣ ಎಂದು ಸಚಿವರು ತಿಳಿಸಿದ್ದಾರೆ.

Vijaya Karnataka Web 10 Feb 2020, 12:32 pm
ಮೈಸೂರು: ಪಕ್ಕೆಲುಬು ಎಂಬ ಪದವನ್ನು ಸರಿಯಾಗಿ ಉಚ್ಚಾರ ಮಾಡೆಂದು ವಿದ್ಯಾರ್ಥಿಯನ್ನು ಬಲವಂತ ಪಡಿಸಿದ್ದು ಶಿಕ್ಷಕರ ಮನಸ್ಥಿತಿಯನ್ನು ಹೇಳುತ್ತದೆ. ಈ ವಿಚಾರವಾಗಿ ಅಮಾನತುಗೊಂಡ ಶಿಕ್ಷಕ ನನ್ನ ಬಳಿ ಬಂದು ಅಮಾನತು ಆದೇಶ ವಾಪಸ್‌ ತೆಗೆದುಕೊಳ್ಳುವಂತೆ ವಿನಂತಿಸಿಕೊಂಡರು. ಅಮಾನತು ವಾಪಸ್‌ ಪಡೆಯೋಣ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.
Vijaya Karnataka Web Suresh Kumar


ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್‌ ಕುಮಾರ್‌, ''ಪಕ್ಕೆಲುಬು ಉಚ್ಚಾರದ ವಿಡಿಯೋ ವೈರಲ್‌ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಆ ವಿಚಾರ ಹಾಗಿರಲಿ. ಈ ಘಟನೆ ಸದ್ದಾದ ಮೇಲೂ ಪುಳಿಯೋಗರೆ, ನಪುಂಸಕ ಎಂಬ ಪದಗಳ ಉಚ್ಚಾರದ ಬಗ್ಗೆಯೂ ಸದ್ದಾಗಿದೆ'' ಎಂದು ಬೇಸರ ವ್ಯಕ್ತ ಪಡಿಸಿದರು.

''ಕೆಲವರಿಗೆ ರಾಜ್ಯೋತ್ಸವ ಎಂದು ಹೇಳಲು ಬರುವುದಿಲ್ಲ. ಕೆಲವರಿಗೆ ಕೊರತೆಗಳು ಇರುತ್ತವೆ. ಹಾಗಂತ ಅದನ್ನು ವಿಡಿಯೋ ಮಾಡಿ ವೈರಲ್‌ ಮಾಡುವುದು ಸರಿಯಲ್ಲ. ಈಗಾಗಲೇ ಶಾಲೆಯಲ್ಲಿ ಯಾರು ಮೊಬೈಲ್‌ ಬಳಸದಂತೆ ಸೂಚಿಸಲಾಗಿದೆ. ಆಗಾಗ ದೊಡ್ಡವರಲ್ಲಿರುವ ವಿಕೃತಿ ಪ್ರಕಟವಾಗುತ್ತದೆ. ಈ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಸಚಿವರು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಯ್ಯಪ್ಪನ ವ್ರತ ಇದ್ದಂತೆ: ಸುರೇಶ್‌ ಕುಮಾರ್‌

''ಈ ಬಾರಿ ಶಾಲೆಯ ಆರಂಭದ ದಿನದಿಂದಲೇ ಪುಸ್ತಕ ಮತ್ತು ಸಮವಸ್ತ್ರ ನೀಡಲಾಗುವುದು'' ಎಂದು ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

ಇದೇ ವೇಳೆ ಖಾತೆ ಹಂಚಿಕೆ ವಿಚಾರವಾಗಿ ಸುರೇಶ್‌ ಕುಮಾರ್‌ ಮಾತನಾಡಿದರು. ''ಖಾತೆ ಹಂಚಿಕೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಈಗಾಗಲೇ ಕೆಲವರಿಗೆ ಹೆಚ್ಚುವರಿ ಖಾತೆ ನೀಡಿದ್ದಾರೆ. ಇವತ್ತು ಖಾತೆ ಹಂಚಿಕೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಹಾ ನೇಮಕವಾಗಲಿದೆ'' ಎಂದರು.

ಮೈಸೂರು ಭಾಗಕ್ಕೆ ಸಚಿವ ಸ್ಥಾನ ಸಿಗಬೇಕು. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ. ಸಹಜವಾಗಿ ಎಲ್ಲರಿಗೂ ಸಚಿವ ಸ್ಥಾನದ ಆಕಾಂಕ್ಷೆಯಿರುತ್ತದೆ. ಕೆಲವರು ಮೂರು ನಾಲ್ಕು ಬಾರಿ ಗೆದ್ದವರಿದ್ದಾರೆ. ಅವರ ಜಿಲ್ಲೆಯ ಅಭಿವೃದ್ಧಿಗಾಗಿ ಸಚಿವ ಸ್ಥಾನ ಕೇಳುವುದು ಸಹಜ ಎಂದರು.

ಮಕ್ಕಳಿಗೆ ನೀರು ಕುಡಿಸುವ ಕಸರತ್ತು, ಶಾಲೆಯಲ್ಲಿ ಮೊಳಗಲಿದೆ 'ಬಾಯಾರಿಕೆ ಬೆಲ್‌'!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ