ಆ್ಯಪ್ನಗರ

ಪಾರ್ಕಿಂಗ್‌ ಅಭಿಯಾನಕ್ಕೆ ಶ್ಲಾಘನೆ ಸಮಸ್ಯೆ ಪರಿಹಾರಕ್ಕೆ ಸಲಹೆ-ಸೂಚನೆ

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಕುರಿತು ವಿಜಯ ಕರ್ನಾಟಕದಲ್ಲಿ ಪ್ರಕಟವಾದ 'ಮೊದಲು ಪಾರ್ಕಿಂಗ್‌ ಕೊಡಿ ಬಳಿಕ ದಂಡ ವಿಧಿಸಿ' ಅಭಿಯಾನದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Vijaya Karnataka 27 Jun 2019, 5:00 am
ಮೈಸೂರು: ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಕುರಿತು ವಿಜಯ ಕರ್ನಾಟಕದಲ್ಲಿ ಪ್ರಕಟವಾದ 'ಮೊದಲು ಪಾರ್ಕಿಂಗ್‌ ಕೊಡಿ ಬಳಿಕ ದಂಡ ವಿಧಿಸಿ' ಅಭಿಯಾನದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Vijaya Karnataka Web parking campaign
ಪಾರ್ಕಿಂಗ್‌ ಅಭಿಯಾನಕ್ಕೆ ಶ್ಲಾಘನೆ ಸಮಸ್ಯೆ ಪರಿಹಾರಕ್ಕೆ ಸಲಹೆ-ಸೂಚನೆ


ಸಾಕಷ್ಟು ಮಂದಿ ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಹಲವು ಸಲಹೆಗಳನ್ನೂ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯಾದ ನಗರ ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು, ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳು ನೀಡುವ ಸಲಹೆಗಳನ್ನು ಪರಿಗಣಿಸಿದರೆ ನಗರದ ಪಾರ್ಕಿಂಗ್‌ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬುದು ಎಲ್ಲರ ಅಭಿಮತ.

ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್‌ ದಂಧೆ ಕುರಿತು ಬೆಳಕು ಚೆಲ್ಲಿದ ವರದಿ ಬಗ್ಗೆ ಟ್ವಿಟರ್‌ನಲ್ಲಿ 3,000ಕ್ಕೂ ಹೆಚ್ಚು ಅಭಿಪ್ರಾಯಗಳು ವ್ಯಕ್ತವಾಗಿವೆ. ಗಾಂಧಿ ವೃತ್ತ, ಮಾರುಕಟ್ಟೆ ಸುತ್ತಲ ರಸ್ತೆಗಳು, ದೇವರಾಜ ಅರಸು ರಸ್ತೆ, ಇಟ್ಟಿಗೆಗೂಡು, ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿರುವ ಪಾರ್ಕಿಂಗ್‌ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಪ್ರಕಟವಾಯಿತು.

ಇದಲ್ಲದೆ ನಂಜರಾಜ ಬಹದ್ದೂರ್‌ ಛತ್ರ, ಪುರಭವನ, ರೇಸ್‌ ಕೋರ್ಸ್‌ ಆವರಣ, ದೇವರಾಜ ಅರಸು ರಸ್ತೆಯ ಹಿಂಭಾಗ ಸೇರಿದಂತೆ ನಗರದ ಹೃದಯ ಭಾಗದ ಹಲವೆಡೆ ಪಾರ್ಕಿಂಗ್‌ ಜಾಗಕ್ಕೆ ಅವಕಾಶವಿದ್ದು, ಅವುಗಳನ್ನು ಪಾಲಿಕೆ ಬಳಸಿಕೊಳ್ಳಬೇಕೆಂಬ ಸಲಹೆಗಳನ್ನು ಸೇರಿದಂತೆ ಒಟ್ಟು 12 ವಿಶೇಷ ವರದಿಗಳು ಪ್ರಕಟವಾಗಿವೆ. ಈ ಕುರಿತು ಸಾರ್ವಜನಿಕರು, ಪರಿಣಿತರು, ಹಿರಿಯ ನಾಗರಿಕರು ತಮ್ಮದೇ ಅಭಿಪ್ರಾಯ ಮತ್ತು ಸಲಹೆ ನೀಡಿದ್ದಾರೆ.

ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಪರಿಹಾರ

ಮೈಸೂರು ನಗರದ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳ ಎಲ್ಲಾ ಬಸ್‌ಗಳ ಸಂಚಾರದಿಂದ ದಟ್ಟಣೆ ಹೆಚ್ಚಾಗಿ ಪಾರ್ಕಿಂಗ್‌ ಸಮಸ್ಯೆ ದೊಡ್ಡದಾಗಿದೆ. ಇದಕ್ಕೆ ನಗರದ ನಾಲ್ಕು ಕಡೆ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣವೇ ಪರಿಹಾರವಾಗಿದೆ. ಇದರಿಂದ ಗ್ರಾಮಾಂತರ ಬಸ್‌ ನಿಲ್ದಾಣದ ಮೇಲೆ ಒತ್ತಡ ಕಡಿಮೆಯಾಗಲಿದೆ. ಇದರೊಂದಿಗೆ ನಗರ ವ್ಯಾಪ್ತಿಯಲ್ಲಿ ಬಸ್‌ ಸಂಚಾರ ಕಡಿಮೆಯಾಗಲಿದೆ. ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ ನಗರದೊಳಗೆ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸುವುದರೊಂದಿಗೆ ರಿಂಗ್‌ ರಸ್ತೆಯಲ್ಲಿ ಬಸ್‌ ಸಂಚಾರ ಮಾಡಿದರೆ ನಗರದೊಳಗೆ ವಾಹನ ಸಂಚಾರ ಕಡಿಮೆಯಾಗಲಿದೆ.

-ರಮೇಶ್‌ ಕಿಕ್ಕೆರಿ, ಬೋಗಾದಿ.

ಅಧಿಕಾರಸ್ಥರ ಕಣ್ಣು ತೆರೆಸಲಿ

ಪಾರ್ಕಿಂಗ್‌ ಜನರ ಅನುಕೂಲಕ್ಕಾಗಿ ಅಲ್ಲ, ಅದೊಂದು ದಂಧೆಯಾಗಿ ಮಾರ್ಪಾಡಾಗಿದೆ. ವಿಜಯ ಕರ್ನಾಟಕ ಪತ್ರಿಕೆ ವರದಿ ಅಧಿಕಾರಸ್ಥರ ಕಣ್ಣು ತೆರೆಸಲಿ. ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ದೂರವಾಗಲಿ.

-ರಾಕೇಶ್‌ ಭಟ್‌, ದೇವರಾಜ ಅರಸು ರಸ್ತೆ

ಪಾರ್ಕಿಂಗ್‌ ದಂಧೆ ಕೊನೆಯಾಗಲಿ

ಪಾರ್ಕಿಂಗ್‌ ಎಂದರೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ ಇತರರಿಗೆ ಕಿರಿಕಿರಿ ಮಾಡುವ ಬದಲು, ನಿರ್ದಿಷ್ಟ ಸ್ಥಳದಲ್ಲಿ ಇಂತಿಷ್ಟು ಶುಲ್ಕ ನೀಡಿ ವಾಹನ ನಿಲ್ಲಿಸುವ ಮೂಲಕ ಜವಾಬ್ಧಾರಿಯಿಂದ ವರ್ತಿಸುವುದು ಎಂದರ್ಥ. ಆದರೆ ಇತ್ತೀಚಿನ ದಿನಗಳಲ್ಲಿ ಪಾರ್ಕಿಂಗ್‌ ದಂಧೆಯಾಗಿದ್ದು ಅದಕ್ಕೆ ರೌಡಿಸಂ ಜತೆಯಾಗಿದೆ. ಈ ಕೆಟ್ಟ ಸನ್ನಿವೇಶವನ್ನು ದೂರವಾಗಿಸಿ.

-ರಾಜೇಶ್‌ (ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು)

ಎಲ್ಲೆಲ್ಲಿ ದಟ್ಟಣೆ: ಸಮೀಕ್ಷೆ ನಡೆಸಿ

ಮೊದಲಿಗೆ ನಗರದಲ್ಲಿ ಪಾರ್ಕಿಂಗ್‌ ಅವಶ್ಯಕತೆ ಎಲ್ಲೆಲ್ಲಿ ಇದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಎಲ್ಲೆಲ್ಲಿ ಹೆಚ್ಚು ಮಂದಿ ವಾಹನ ನಿಲುಗಡೆ ಮಾಡುತ್ತಾರೆ, ಎಲ್ಲಿ ಪಾರ್ಕಿಂಗ್‌ ಸಮಸ್ಯೆ ಇದೆ. ಅದರಿಂದ ಸಂಚಾರಕ್ಕೆ, ಪಾದಚಾರಿಗಳಿಗೆ ಯಾವ ರೀತಿ ಸಮಸ್ಯೆಯಾಗುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕು. ದೇವರಾಜ ಅರಸು ರಸ್ತೆಯಲ್ಲಿ ನಿಗದಿತ ಅವಧಿಗೆ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಮುಖ್ಯವಾಗಿ ಜನರು ಸರಕಾರಿ ಬಸ್‌ ಸೇರಿದಂತೆ ಇನ್ನಿತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದಲೂ ಪಾರ್ಕಿಂಗ್‌ ಮೇಲಿನ ಒತ್ತಡ ತಪ್ಪುತ್ತದೆ.

-ಭಾಮಿ ವಿ.ಶೆಣೈ, ಮೈಸೂರು ಗ್ರಾಹಕ ಪರಿಷತ್‌.

ನಿಯಮಗಳು ಅನ್ವಯವಾಗಲಿ

ಪಾರ್ಕಿಂಗ್‌ ಟಿಕೆಟ್‌ ದರಕ್ಕೂ ಜಿಎಸ್‌ಟಿ ಅನ್ವಯವಾಗುತ್ತದೆ. ಆದರೆ, ಮೈಸೂರಿನಲ್ಲಿ ಎಲ್ಲೂ ಪಾರ್ಕಿಂಗ್‌ ಟಿಕೆಟ್‌ ಮೇಲೆ ಜಿಎಸ್‌ಟಿ ದರ ನಮೂದಿಸುತ್ತಿಲ್ಲ. ಅಲ್ಲದೆ ಕೆಲವೆಡೆ ಪಾರ್ಕಿಂಗ್‌ ದರವನ್ನೆ ನಮೂದಿಸುವುದಿಲ್ಲ. ಇದರಿಂದಾಗಿ ಪಾರ್ಕಿಂಗ್‌ ಗುತ್ತಿಗೆದಾರ ತನಿಗಿಷ್ಟ ಬಂದಷ್ಟು ಆದಾಯ ತೋರಿಸಬಹುದು. ಅಂತೆಯೆ ಆದಾಯ ತೆರಿಗೆಯನ್ನು ವಂಚಿಸಿದಂತಾಗುತ್ತದೆ. ಹೀಗಾಗಿ ಪಾರ್ಕಿಂಗ್‌ ಟಿಕೆಟಿಂಗ್‌ ವ್ಯವಸ್ಥೆ ಅಧಿಕೃತವಾಗಿ ನಿಯಮಗಳಿಗೆ ಅನ್ವಯವಾಗಿರಬೇಕು.

-ರಾಮಚಂದ್ರ, ನಿವೃತ್ತ ಬ್ಯಾಂಕ್‌ ನೌಕರ,

ದರ ಕಡಿತವಾಗಲಿ

ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್‌ ದರವನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ನಗರದಿಂದ ಬೆಂಗಳೂರು ಮಾರ್ಗದ ನಾನಾ ಊರುಗಳಿಗೆ ಕೆಲಸಕ್ಕೆ ಹೋಗುವವರು ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್‌ ರಸ್ತೆ, ಕೆ.ಆರ್‌.ಆಸ್ಪತ್ರೆ ರಸ್ತೆಗಳಲ್ಲಿ ದಿನವಿಡೀ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್‌ ಸಮಸ್ಯೆಯಾಗುತ್ತಿದೆ.

-ನಿಂಗೇಗೌಡ, ವ್ಯಾಪಾರಿ, ಶಾರದಾದೇವಿ ನಗರ.

ನಿಲ್ದಾಣಕ್ಕೆ ಸೆಲ್ಲಾರ್‌ ಬಳಕೆಯಾಗಲಿ

ನಗರ ಪಾಲಿಕೆ ದೊಡ್ಡ ಕಟ್ಟಡಗಳ ಸೆಲ್ಲಾರ್‌ಗಳನ್ನು ಪಾರ್ಕಿಂಗ್‌ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕೆಂದು ಸೂಚನೆ ನೀಡಿದ್ದರೂ ಆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಪಾಲಿಕೆ ಇಂತಹ ಕಟ್ಟಡಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

-ಭಾಗ್ಯ, ನಿವೃತ್ತ ನೌಕರರು, ಶಿವರಾತ್ರೀಶ್ವರ ನಗರ.

ಗೊಂದಲ ನಿವಾರಿಸಿ

ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವಲ್ಲಿ ಈ ಹಿಂದೆ ಗೊಂದಲವಾಗಿತ್ತು. ಈಗಾಗಲೇ ಅದನ್ನು ಸರಿಪಡಿಸಿ ಪ್ರವಾಸಿಗರ ಅನುಕೂಲತೆಯ ದೃಷ್ಟಿಯಿಂದ ವಸ್ತು ಪ್ರದರ್ಶನ ಆವರಣದ ಮೈದಾನದಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಈಗ ಎಲ್ಲವೂ ವ್ಯವಸ್ಥಿತವಾಗಿರುವುದರಿಂದ ಇಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಮುಂದುವರಿದರೆ ಉತ್ತಮವಾಗಲಿದೆ.

-ಎಂ.ಎಸ್‌. ಹರಿಕೃಷ್ಣ, ಇಂದಿರಾ ನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ