ಆ್ಯಪ್ನಗರ

ಪಿರಿಯಾಪಟ್ಟಣ: ಹಲವು ಗ್ರಾಮಗಳು ಜಲಾವೃತ

ಮೈಸೂರು, ಕೊಡಗು ಸಂಪರ್ಕ ಕಲ್ಪಿಸುವ ಮುಖ್ಯ ತಾಲೂಕು ಪಿರಿಯಾಪಟ್ಟಣವಾಗಿದ್ದು ಕಾವೇರಿ ತುಂಬಿ ಸೇತುವೆ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಕಾವೇರಿ ಕಣಿವೆಯ ಸಾಕಷ್ಟು ಗ್ರಾಮಗಳು ಜಲಾವೃತಗೊಂಡಿದ್ದು, ಜನರು ನಿರಾಶ್ರಿತರಾಗಿದ್ದಾರೆ.

Vijaya Karnataka 10 Aug 2019, 5:00 am
ಪಿರಿಯಾಪಟ್ಟಣ : ಮೈಸೂರು, ಕೊಡಗು ಸಂಪರ್ಕ ಕಲ್ಪಿಸುವ ಮುಖ್ಯ ತಾಲೂಕು ಪಿರಿಯಾಪಟ್ಟಣವಾಗಿದ್ದು ಕಾವೇರಿ ತುಂಬಿ ಸೇತುವೆ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಕಾವೇರಿ ಕಣಿವೆಯ ಸಾಕಷ್ಟು ಗ್ರಾಮಗಳು ಜಲಾವೃತಗೊಂಡಿದ್ದು, ಜನರು ನಿರಾಶ್ರಿತರಾಗಿದ್ದಾರೆ.
Vijaya Karnataka Web MYR-MYS9PYP1


ಗುರುವಾರ ರಾತ್ರಿಯಿಂದ ಕಾವೇರಿ ನದಿಯಲ್ಲಿ ಹರಿವು ಹೆಚ್ಚಾಗಿದ್ದು, ಒಂದು ರಾತ್ರಿಯಲ್ಲಿ ಅನೇಕ ರಸ್ತೆಗಳು ಮುಚ್ಚಿಹೋಗಿ ಬಹಳಷ್ಟು ಮನೆಗಳಿಗೆ ನೀರು ನುಗ್ಗಿದೆ. ಗುರುವಾರ ಮಧ್ಯಾಹ್ನದಿಂದಲೆ ಮಳೆ ಹೆಚ್ಚಾಗುತ್ತಿದ್ದು, ನದಿಯ ನೀರು ಕೂಡ ಹೆಚ್ಚಾಗಿತ್ತು. ಇದಲ್ಲದೆ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಹಾರಂಗಿ ನೀರು ಅಡ್ಡಲಾಗಿ ಸೇರುವುದರಿಂದ ಹಿಮ್ಮುಖವಾಗಿ ಒತ್ತಡ ಹೆಚ್ಚಾಗಿದ್ದು ಕಾವೇರಿ ನದಿಯ ತಟದ ಗ್ರಾಮಗಳು ಜಲಾವೃತಗೊಂಡಿವೆ.

ಬಡಾವಣೆ ಜಲಾವೃತ:
ಕೊಪ್ಪಾ ಗ್ರಾಮದ ಮುಸ್ಲಿಂ ಬ್ಲಾಕ್‌ ಸಂಪೂರ್ಣ ಜಲಾವೃತಗೊಂಡರೆ ಕೊಪ್ಪಾ ಗ್ರಾಮದ ಪತ್ರಕರ್ತ ಚಂದ್ರಮೋಹನ್‌ ಮನೆ ಕೂಡ ಸಂಪೂರ್ಣ ನೀರುನುಗ್ಗಿದೆ. ಅಲ್ಲದೆ ಅನೇಕ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಅನೇಕ ಮನೆಗಳು ಕೊಪ್ಪ ಬಾಗದ ರಸ್ತೆ ಇಕ್ಕೆಲಗಳಲ್ಲಿ ಇರುವ ಅನೇಕ ಅಂಗಡಿಗಳು, ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ದೊಡ್ಡದೊಡ್ಡ ಮಹಲ್‌ಗಳ ಅರ್ಧದಷ್ಟು ನೀರು ಬಂದಿದೆ. ಗೋಲ್ಡ್‌ನ್‌ ಟೆಂಪಲ್‌ ರೋಡ್‌ನಲ್ಲಿ ಸೇತುವೆ ಮೇಲೆ ನೀರು ಹರಿದು ಎರಡು ರೆಸಾರ್ಟ್‌ಗಳು ಹಾಗೂ ಸುತ್ತಮುತ್ತಲಿನ ಹಲವಾರು ಮನೆಗಳು ಜಲಾವೃತಗೊಂಡಿವೆ.

ರಸ್ತೆ ಸಂಚಾರ ಸ್ಥಗಿತ: ತಾಲೂಕಿನ ಗಿರಗೂರು ಕೊಪ್ಪ ಸಂಪರ್ಕ ರಸ್ತೆ (ಗೋಲ್ಡ್‌ನ್‌ಟೆಂಪ್‌ರೋಡ್‌) ಸಂಪೂರ್ಣ ಜಲಾವೃತಗೊಂಡಿದ್ದು ರಸ್ತೆ ಸಂಚಾರ ಸ್ಥಗಿಗೊಳಿಸಲಾಗಿದೆ. ಗುರುವಾರವಷ್ಟೆ ಶಾಸಕ ಕೆ.ಮಹದೇವ್‌ ಆವರ್ತಿ ಮೂಲಕ ದಿಂಡಾಗು ರಸ್ತೆ ಪರಿಶೀಲಸಿದ್ದು ಇಂದು ಬೆಳಗ್ಗೆಯ ವೇಳಗೆ ಆವರ್ತಿ ಕೊಪ್ಪ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ. ಇದರಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ದಿಂಡಗಾಡು ಆವರ್ತಿ ರಸ್ತೆ ಗುರುವಾರದಿಂದಲೆ ಸಂಪೂರ್ಣ ಮುಳುಗಡೆಯಾಗಿದೆ. ಇದಲ್ಲದೆ ಪ್ರಮುಖ ಮೈಸೂರು ಮಡಿಕೇರಿ ರಸ್ತೆ ಮುಸ್ಲಿಂ ಬ್ಲಾಕ್‌ ಮತ್ತು ಕಾಫೀಡೇ ಬಳಿ ಜಲಾವೃತಗೊಳ್ಳುತ್ತಿದ್ದು ಇದು ಸಂಚಾರ ಸ್ಥಗಿತಗೊಂಡರು ಆಶ್ಚರ್ಯವಿಲ್ಲ.

ನೂರಾರು ಎಕರೆ ನಾಶ: ಕಾವೇರಿ ನದಿ ಪಾತ್ರದ ಗ್ರಾಮಗಳಾದ ದಿಂಡಗಾಡು, ಆವರ್ತಿ, ಕೊಪ್ಪ, ಮುತ್ತಿನ ಮುಳಸೋಗೆ ಮುಂತಾದ ಅನೇಕ ಮಂದಿ ಜಮೀನುಗಳು ಮುಳಗಡೆಯಾಗಿವೆ. ತೆಂಗಿನ ತೋಟ, ಅಡಿಕೆ ತೋಟಗಳು ಜಲಮಯವಾಗಿದ್ದು. ತೆಂಗಿನ ತೋಟವೆ ಸಂಪೂರ್ಣ ಮುಳುಗಿದೆ. ಕಾವೇರಿ ನದಿಯ ಪ್ರವಾಹದಿಂದ ಹಾರನಹಳ್ಳಿ ಹೋಬಳಿಯ ಆವರ್ತಿ ಗ್ರಾಮದ ಸ.ನಂ. 51 , 52 ರ ಮುಸುಕಿನ ಜೋಳ, ಮೆಣಸಿನಕಾಯಿ, ಬಿನೀಸ್‌, ಭತ್ತದ ಪೈರು, ಕಾವೇರಿ ನದಿಯ ನೀರಿಂದ ಜಾಲಾವೃತ್ತಗೊಂಡಿರುತ್ತದೆ.

ನಿರಾಶ್ರಿತರ ಕೇಂದ್ರ ಆರಂಭ: ಕೊಪ್ಪ ಗ್ರಾಮದಲ್ಲಿ ನಿರಾಶ್ರಿತರಿಗಾಗಿ ಕೇಂದ್ರ ತೆರೆಯಲಾಗಿದ್ದು ಗಂಜಿ ಕೇಂದ್ರದಲ್ಲಿ ನಿರಾಶ್ರಿತರಿಗೆ ಊಟ ಮಾತ್ರ ನೀಡಲಾಗುತ್ತಿದೆ. ಇಲ್ಲಿ ಉಳಿಯಲು ಅವಕಾಶ ಕಲ್ಪಿಸಬೇಕು ಎಂದು ನಿರಾಶ್ರಿತರ ಬೇಡಿಕೆಯಾಗಿದೆ.

ಸರಕಾರದ ನಿರ್ಲಕ್ಷ್ಯಕ್ಕೆ ಬೇಸರ
: ಕಳೆದ ಬಾರಿ ಕೂಡ ಇದೇ ರೀತಿ ಮಳೆ ಹೆಚ್ಚಾಗಿ ಅನೇಕ ಮನೆಗಳು ಹಾನಿಯಾಗಿದ್ದವು. ಈ ಸ್ಥಳಕ್ಕೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೆ ಭೇಟಿ ನೀಡಿದ್ದು ಶಾಸಕ ಕೆ.ಮಹದೇವ್‌ ಕೂಡ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸೇತುವೆಯನ್ನು ಎತ್ತರಿಸಿ ನೂತನ ಸೇತುವೆ ಮಾಡುವ ಭರವಸೆ ನೀಡಿದರು. ಇದನ್ನು ಒಂದು ವರ್ಷ ಕಳೆದರೂ ಮಾಡದಿರುವುದರಿಂದ ಹಿಂದಿನ ಅನಾಹುತಗಳು ಮೊದಲಿಗಿಂತ ಹೆಚ್ಚಾಗಿ ಮರುಕಳಿಸಿವೆ. ಅನೇಕರು ನಿರಾಶ್ರಿತರಾಗಿ ಮನೆ ಬಿಡುವಂತಾಗಿದೆ ಎಂದು ಗ್ರಾಮದ ಮುಖಂಡ ಸಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗೆ ಕಾವೇರಿ ಪಾತ್ರದ ಜನರು ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ನೋವು ಅನುಭವಿಸುವುದರ ಜೊತೆಗೆ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ. ಈ ಬಾಗದ ಜನರಿಗೆ ತಾತ್ಕಾಲಿಕ ನಿರಾಶ್ರಿತರ ಕೇಂದ್ರ, ಸಣ್ಣಪುಟ್ಟ ಪರಿಹಾರ ನೀಡುವುದರ ಬದಲು ಶಾಶ್ವತ ಯೋಜನೆಗಳ ಮೂಲಕ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಸರಕಾರಗಳು ಚಿಂತನೆ ನಡೆಸಬೇಕಿದೆ.

ಕಳೆದ ಬಾರಿಯು ಕೊಪ್ಪಾ ಗ್ರಾಮದ ಮುಸ್ಲಿಂ ಬ್ಲಾಕ್‌ ಸಂಪೂರ್ಣ ಜಲಾವೃತಗೊಂಡಿತ್ತು. ಈ ಬಾರಿಯು ಇದೇ ಆಗಿದೆ. ನಿರಾಶ್ರಿತರ ಕೇಂದ್ರದಲ್ಲಿ ಊಟ ಕೊಡುತ್ತಿದ್ದಾರೆ. ಆದರೆ ಮಲಗಲು ಜಾಗವಿಲ್ಲ. ಅನೇಕ ಜನರು ನಿರಾಶ್ರಿತರಾಗಿದ್ದಾರೆ. ನಮಗೆ ಶಾಶ್ವತವಾಗಿ ಬೇರೆ ಮನೆ ನಿರ್ಮಿಸಿಕೊಟ್ಟರೆ ಸೂಕ್ತ.

-ಸಮೀಉಲ್ಲಾ ಕೊಪ್ಪಾ ಗ್ರಾಮದ ನಿರಾಶ್ರಿತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ