ಆ್ಯಪ್ನಗರ

ಗಾಂಧಿ ವಿಚಾರಧಾರೆಗೆ ಕವಿತೆಗಳ ರೂಪ

ಅದೊಂದು ಅಪರೂಪದ ಕಾರ‍್ಯಕ್ರಮ. ಅಲ್ಲಿ ಗಾಂಧಿ ವಿಚಾರಧಾರೆಗಳದ್ದೇ ಸದ್ದು. ಸತ್ಯ, ಅಹಿಂಸೆ, ಸದ್ಭಾವನೆಗಳೇ ಕವಿತೆ ರೂಪದಲ್ಲಿ ಹೊರ ಬಂದವು. ನೆರೆದಿದ್ದ ಕವಿಗಳು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ಮರಿಸುವ ಕವಿತೆ ವಾಚಿಸುವ ಮೂಲಕ ಅಕ್ಷರ ನಮನ ಸಲ್ಲಿಸಿದರು.

Vijaya Karnataka 27 Mar 2019, 5:00 am
ಮೈಸೂರು : ಅದೊಂದು ಅಪರೂಪದ ಕಾರ‍್ಯಕ್ರಮ. ಅಲ್ಲಿ ಗಾಂಧಿ ವಿಚಾರಧಾರೆಗಳದ್ದೇ ಸದ್ದು. ಸತ್ಯ, ಅಹಿಂಸೆ, ಸದ್ಭಾವನೆಗಳೇ ಕವಿತೆ ರೂಪದಲ್ಲಿ ಹೊರ ಬಂದವು. ನೆರೆದಿದ್ದ ಕವಿಗಳು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ಮರಿಸುವ ಕವಿತೆ ವಾಚಿಸುವ ಮೂಲಕ ಅಕ್ಷರ ನಮನ ಸಲ್ಲಿಸಿದರು.
Vijaya Karnataka Web poetry form for gandhis ideologue
ಗಾಂಧಿ ವಿಚಾರಧಾರೆಗೆ ಕವಿತೆಗಳ ರೂಪ


ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಕೇಂದ್ರದ ಗಾಂಧಿ ಭವನದಲ್ಲಿ ನಡೆದ ಗಾಂಧಿ ಕವಿಗೋಷ್ಠಿಯಲ್ಲಿ ಗಾಂಧಿ ಕಂಡ ಸ್ವರಾಜ್ಯದ ಕನಸು ಅನಾವರಣಗೊಂಡಿತು. ಗಾಂಧಿ ಇಂದಿಗೂ ಪ್ರಸ್ತುತ. ಸಮಾಜ ಹಿಂಸೆ, ಒತ್ತಡ, ಯುದ್ಧ, ವಿದೇಶಿ ವ್ಯಾಮೋಹದೆಡೆ ಓಡುತ್ತಿರುವಾಗ ಗಾಂಧಿ ತತ್ತ್ವ ಪಾಲನೆ ಇಂದಿನ ಜರೂರು ಎಂಬ ಆಶಯವನ್ನು ಬಹುತೇಕ ಕವಿತೆಗಳು ಹೊರಗೆಡವಿದವು.

ನಿತ್ಯವೂ ಓಡೋಡಿ ಸೇರುವ ರೈಲಿನ ತುದಿ ಬಂಡೆ

ಮೈ ಓಟದಲ್ಲಿ ಆ ಮೂರು ಗೇಟಿನ

ಗಾಂಧಿ ಕಂಪಾರ್ಟ್‌ಮೆಂಟ್‌ ಕಾಣೆಯಾಗಿದೆ.


ಸರಜೂ ಅವರು'ಗಾಂಧಿ ಕಂಪಾರ್ಟ್‌ಮೆಂಟ್‌' ಎಂಬ ಶೀರ್ಷಿಕೆಯಡಿ ವಾಚಿಸಿದ ಈ ಕವಿತೆ ಪ್ರೇಕ್ಷಕರ ಚಪ್ಪಾಳೆ ಹಾಗೂ ಮೆಚ್ಚುಗೆಗೆ ಪಾತ್ರವಾಯಿತು.

ನಿನ್ನ ನೆರಳು ಕರಗುತ್ತಿದೆ

ಬಿಸಲ ಕೋಲಂತೆ ಕಂಗೊಳಿಸಿ

ಕಣ್ಣೋತ್ತಿನಲ್ಲೇ ಕುಲಗೆಡಸಿ

ಹಬ್ಬಿನ ಮೊಬ್ಬಿನಲಿ ಸರಿಯುತ್ತಾ...

ಚಂದ್ರಶೇಖರ್‌ ತಾಳ್ಯ ಅವರು 'ಕರಗುತ್ತಿದೆ ಗಾಂಧಿಯ ನೆರಳು' ಎಂಬ ಶೀರ್ಷಿಕೆಯಡಿ ವಾಚಿಸಿದ ಕವಿತೆಯು ಗಾಂಧಿ ತತ್ತ್ವಾದರ್ಶಗಳು ಪಾಲನೆಯಾಗದೆ ಕೇವಲ ಭಾಷಣದ ವಸ್ತುಗಳಾಗುತ್ತಿದೆ ಎಂಬುದನ್ನು ಮಾರ್ಮಿಕವಾಗಿ ಹೇಳಿತು.

ಒಳಹೊಕ್ಕಿದೊಡನೆ ಗಾಂಧಿಭವನ

ಎದುರಾಗುತ್ತಾರೆ ಗಾಂಧೀಜಿ

ಓರೆಯಾಗಿ ಬಾಗಿರುವ ಬೋಳು ತಲೆ

ಶಾಂತವಾಗಿ ಮುಚ್ಚಿಕೊಂಡಿರುವ ಕನ್ನಡದ ಹಿಂದಿನ ಕಣ್ಣುಗಳು...


ಚ.ಸರ್ವಮಂಗಳಾ ಅವರು 'ಬೆರಗಿನ ಚಲನೆ' ಎಂಬ ಶೀರ್ಷಿಕೆಯಡಿ ವಾಚಿಸಿದ ಕವಿತೆಯು ಗಾಂಧೀಜಿಯ ಸರಳ ಜೀವನ ಹಾಗೂ ಮೇರು ವ್ಯಕ್ತಿತ್ವವನ್ನು ಅನಾವರಣಗೊಳಿಸಿತು.

ಯಾರೋ ಅಂದರು

ಮತ್ತೆ ಗಾಂಧಿ ಬರುತ್ತಾರೆ

ವಿಮಾನ, ಬಸ್ಸು, ರೈಲು

ನಿಲ್ದಾಣಗಳಲ್ಲಿ ಅರಳಿ ನಿಂತಿದೆ

ನಳನಳಿಸಿದವು ತಳಿರು ತೋರಣ

ಲೋಕೇಶ್‌ ಆಗಸನಕಟ್ಟೆ ಅವರು 'ಮತ್ತೆ ಗಾಂಧಿ ಬರುತ್ತಾರೆ' ಎಂಬ ಶೀರ್ಷಿಕೆಯಡಿ ವಾಚಿಸಿದ ಕವಿತೆ ಅರ್ಥಪೂರ್ಣವಾಗಿತ್ತು. ಗಾಂಧಿ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ, ಗಾಂಧೀ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂಬ ಆಶಯವನ್ನು ಕವಿತೆಯು ಸಾರಿತು.

ಸುಬ್ಬು ಹೊಲಯಾರ್‌, ಸವಿತಾ ನಾಗಭೂಷಣ, ಜ.ನಾ.ತೇಜಶ್ರೀ, ಲಕ್ಷ್ಮೇಪತಿ ಕೋಲಾರ, ಕೆ.ಬಿ.ಸಿದ್ದಯ್ಯ, ಜಿ.ವಿ.ಆನಂದಮೂರ್ತಿ, ಸತೀಶ್‌ ಕುಲಕರ್ಣಿ, ಸತ್ಯಮಂಗಲ ಮಹಾದೇವ, ಬಿ.ಎಂ.ಬಷೀರ್‌, ಎನ್‌.ಎಂ.ತಳವಾರ, ಎಂ.ಎಚ್‌.ರುದ್ರಮುನಿ, ವೈ.ಡಿ.ರಾಜಣ್ಣ, ಎ.ಟಿ.ಸದೆಬೋಸ್‌, ಚಿಕ್ಕಮಗಳೂರು ಗಣೇಶ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ