ಆ್ಯಪ್ನಗರ

ರೌಡಿಶೀಟರ್‌ಗಳ ಮನೆ ಕದ ತಟ್ಟಿದ ಪೊಲೀಸರು

ಭಾನುವಾರ ಮುಂಜಾನೆ ಸುಖ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳ ಮನೆ ಬಾಗಿಲು ತಟ್ಟಿದ ಮೈಸೂರು ನಗರ ಪೊಲೀಸರು, ರೌಡಿಗಳ ಬೆವರಳಿಸಿದ್ದಾರೆ.

Vijaya Karnataka 18 Mar 2019, 5:00 am
ಮೈಸೂರು : ಭಾನುವಾರ ಮುಂಜಾನೆ ಸುಖ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳ ಮನೆ ಬಾಗಿಲು ತಟ್ಟಿದ ಮೈಸೂರು ನಗರ ಪೊಲೀಸರು, ರೌಡಿಗಳ ಬೆವರಳಿಸಿದ್ದಾರೆ.
Vijaya Karnataka Web police rushed to the house of rowdys
ರೌಡಿಶೀಟರ್‌ಗಳ ಮನೆ ಕದ ತಟ್ಟಿದ ಪೊಲೀಸರು


'ಆಪರೇಷನ್‌ ಸನ್‌ರೈಸ್‌' ಹೆಸರಿನಡಿ ಬೆಳಗ್ಗೆಯೇ 85ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿ ಮಾರಕಾಸ್ತ್ರಗಳಿವೆಯೇ ಎಂದು ತಿಳಿಯಲು ಶೋಧ ಕಾರ್ಯ ನಡೆಸಿದರು. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದರು.

ಚುನಾವಣೆ ನೆಪದಲ್ಲಿ ರಾಜಕೀಯ ನಾಯಕರ ಬೆಂಬಲವಾಗಿ ಮತದಾರರಿಗೆ ಬೆದರಿಕೆ ಹಾಕುವುದು, ಇಂಥವರಿಗೆ ಮತ ನೀಡಿ ಎಂದು ಆಮಿಷವೊಡ್ಡುವುದು, ಧಮ್ಕಿ ಹಾಕುವುದು ಸೇರಿದಂತೆ ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಶಸ್ತ್ರ ಸಜ್ಜಿತರಾಗಿಯೇ ರೌಡಿಗಳ ಮನೆ ಬಳಿ ಮುಂಜಾನೆ 5ಕ್ಕೆ ತೆರಳಿದ ಪೊಲೀಸರು, ಮನೆಯಲ್ಲಿ ಬೆಚ್ಚಗೆ ಮಲಗಿದ್ದ ರೌಡಿಶೀಟರ್‌ಗಳ ಕೊರಳು ಪಟ್ಟಿ ಹಿಡಿದು ತಮ್ಮ ವಾಹನಕ್ಕೆ ಹತ್ತಿಸಿಕೊಂಡರು. ಅಲ್ಲದೇ ಮನೆಯನ್ನು ಶೋಧಿಸಿ ಮಾರಕಾಸ್ತ್ರಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿದರು. ಬಳಿಕ ಮೈಸೂರು ನಗರದ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ 85 ರೌಡಿಗಳನ್ನು ಸಿ.ಆರ್‌.ಮೈದಾನಕ್ಕೆ ಕರೆತಂದರು.

ಲೋಕಸಭೆ ಚುನಾವಣೆ ವೇಳೆ ಯಾವುದೇ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬಾರದು. ಇಂಥದೇ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಒತ್ತಾಯಿಸಬಾರದು. ತೋಳ್ಬಲ ಪ್ರಯೋಗ ಹಾಗೂ ಧಮಕಿ ಹಾಕಲು ಮುಂದಾದರೆ ಪೊಲೀಸ್‌ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ. ಬಾಲ ಬಿಚ್ಚದೆ ತಮ್ಮ ಪಾಡಿಗೆ ತಾವಿದ್ದರೆ ನಿಮಗೂ ಕ್ಷೇಮ, ಅಲ್ಲದೇ ನಿಮ್ಮ ಕುಟುಂಬದವರಿಗೂ ಕ್ಷೇಮ. ಅದನ್ನು ಬಿಟ್ಟು ರಾಜಕೀಯ ಪಕ್ಷಗಳ ಮುಖಂಡರ ಪರವಾಗಿ ರೌಡಿಸಂಗೆ ಇಳಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಮೈಸೂರು ನಗರ ಕಾನೂನು ಸುವ್ಯವಸ್ಥೆಯ ಡಿಸಿಪಿ ಎಂ. ಮುತ್ತುರಾಜು ಎಚ್ಚರಿಕೆ ನೀಡಿದರು.

ಶೋಧ ಕಾರ್ಯ: ಸೂರ್ಯೋದಯ ಮುನ್ನವೇ ನಗರದ ಎಲ್ಲಾ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ತಮ್ಮ ಸಿಬ್ಬಂದಿಯೊಂದಿಗೆ ರೌಡಿಶೀಟರ್‌ಗಳ ಮನೆ ಬಾಗಿಲು ತಟ್ಟಿದ್ದರು. ಡಿಸಿಪಿ ಮುತ್ತುರಾಜ್‌ ಕೆಲವು ರೌಡಿಶೀಟರ್‌ಗಳ ಮನೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ರೌಡಿಗಳ ಮನೆಯಲ್ಲಿ ಬೀರು, ಅಟ್ಟದ ಮೇಲೆ, ಸ್ಟೋರ್‌ ರೂಂ ಸೇರಿದಂತೆ ಎಲ್ಲೆಡೆ ಸೂಕ್ಷ್ಮವಾಗಿ ಶೋಧಿಸಿ ಮಾರಕಾಸ್ತ್ರಗಳು, ಬಚ್ಚಿಟ್ಟಿದ್ದಾರೆ ಎಂದು ಪರಿಶೀಲಿಸಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರೌಡಿಶೀಟರ್‌ಗಳಾಗಲೀ, ನಿಮ್ಮ ಹಿಂಬಾಲಕರಾಗಲೀ, ತೆರಳಿದರೆ ಮತದಾರರ ಮುಂದೆ ಓಡಾಡಿದರೆ, ಅವರ ಮನಸ್ಸಿನಲ್ಲಿ ಆತಂಕ ಮೂಡುತ್ತದೆ. ಯಾವುದೇ ಕಾರಣಕ್ಕೂ ಆಮಿಷ ಒಡ್ಡುವುದು, ಅನುಚಿತವಾಗಿ ವರ್ತಿಸುವುದು ಮಾಡಬಾರದು. ತಂತ್ರಜ್ಞಾನ ಮುಂದುವರೆದಿದೆ. ನೀವು ಎಲ್ಲಿರುತ್ತೀರಾ, ಏನು ಮಾಡುತ್ತೀರಾ ಎನ್ನುವುದು ಪೊಲೀಸ್‌ ಇಲಾಖೆಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಪಾಡಿಗೆ ತಾವಿದ್ದರೆ ಒಳಿತು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು.

-ಎಂ. ಮುತ್ತುರಾಜು, ಡಿಸಿಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ