ಜೆ-ನರ್ಮ್ ಯೋಜನೆಯಡಿ ಕಟ್ಟಲಾದ ವಸತಿ ಮನೆಗಳು ಬಿರುಕು ಬಿಟ್ಟಿದ್ದು, ನಾಗರಿಕರು ಆತಂಕದಲ್ಲಿ ದಿನದೂಡುವಂತಾಗಿದೆ.
ನಗರದಲ್ಲಿ ಬಂಬೂಬಜಾರ್, ಎನ್.ಆರ್.ಮೊಹಲ್ಲಾ ಮತ್ತು ನಗರದ ಹೊರ ವಲಯದಲ್ಲರುವ ಏಕಲವ್ಯ ನಗರದಲ್ಲಿ ನಿರ್ಮಿಸಲಾಗಿರುವ ಮೂರು ಅಂತಸ್ತಿನ ಕಟ್ಟಡಗಳು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿವೆ. ಕಟ್ಟಡ ಒಳಭಾಗದಿಂದ ನೀರು ಜಿನುಗುತ್ತಿದ್ದು, ದಿನೇ ದಿನೇ ಶಿಥಿಲವಾಸ್ಥೆ ತಲುಪಿದೆ. ಬಿರುಕು ಬಿಟ್ಟ ಗೋಡೆಗಳು ಮತ್ತು ಸೀಳಿದ ಮನೆಯಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳು ಸಮಸ್ಯೆ ಪರಿಹಾರಕ್ಕಾಗಿ ಏನು ಮಾಡಬೇಕೆಂದು ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಬಂಬೂಬಜಾರ್ನ ಬಳಿ ಆರು ವರ್ಷಗಳ ಹಿಂದೆ ಒಂದು ಬ್ಲಾಕ್ನಲ್ಲಿ 16 ಮನೆಯಂತೆ 12 ಬ್ಲಾಕ್ ನಿರ್ಮಿಸಲಾಗಿದೆ. ಒಟ್ಟು 92 ಮನೆಗಳಿವೆ.1,500 ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಬಿರುಕು ಬಿಟ್ಟಿರುವುದು, ನೆಲ ಸೀಳಿರುವುದು ಹಾಗೂ ನೀರು ಸೋರುವುದು ಸಾಮಾನ್ಯ ಸಮಸ್ಯೆಯಾಗಿದೆ. ಪೌರಕಾರ್ಮಿಕರು ಇಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಊರು ಸ್ವಚ್ಛಗೊಳಿಸುವ ಪೌರ ಬಂಧುಗಳ ಮನೆಗಳಲ್ಲಿ ಯುಜಿಡಿ ಕಟ್ಟಿಕೊಂಡು ಶೌಚಾಲಯದಿಂದ ನೀರು ಹೊರ ಹೋಗದೆ ಸಮಸ್ಯೆಯಾಗಿದೆ.
ಅಕ್ಕಪಕ್ಕದವರ ಜಗಳ: ''ಇಲ್ಲಿನ ವಸತಿ ನಿಲಯಗಳಲ್ಲಿನ ಸ್ನಾನದ ಕೊಠಡಿಗಳು ತೀರಾ ಹದಗೆಟ್ಟಿವೆ. ನೆಲ ಸೀಳು ಕೊಂಡಿದೆ. ಸ್ನಾನದ ಕೊಠಡಿಗಳಲ್ಲಿ ಶೇಖರವಾಗುವ ನೀರು ಪಕ್ಕದ ಮನೆಯಲ್ಲಿ ಸೋರುತ್ತದೆ. ಪೈಪ್ಲೈನ್ನಲ್ಲಿ ಹಾದು ಹೋಗಿರುವ ಕಟ್ಟಡಗಳಲ್ಲಿ ನಿರಂತರ ಸೋರುತ್ತಿವೆ. ಒಬ್ಬರ ಮನೆಯ ಶೌಚಾಲಯ, ಸ್ನಾನದ ಮನೆಯ ನೀರು ಮತ್ತೊಬ್ಬರ ಮನೆಯಲ್ಲಿ ಸೋರುತ್ತದೆ. ಇದರಿಂದ ಪ್ರತಿನಿತ್ಯ ಸ್ನೇಹಿತರಾಗಿರುವ ಅಕ್ಕಪಕ್ಕದ ಮನೆಯವರು ಜಗಳ ಆಡುತ್ತಾರೆ. ಶೌಚಾಲಯದಿಂದ ಸರಿಯಾದ ಯುಜಿಡಿ ಸಂಪರ್ಕ ಕಲ್ಪಿಸದೆ, ಚೇಂಬರ್ನಲ್ಲಿ ಕಟ್ಟಿಕೊಂಡು ಗಬ್ಬು ನಾರುತ್ತದೆ. ಇದರಿಂದ ರೋಗ ರುಜಿನ ಹರಡುವ ಆತಂಕ ಇಲ್ಲಿನ ನಿವಾಸಿಗಳದ್ದು. ಅಷ್ಟೇ ಅಲ್ಲದೆ ಸ್ನಾನದ ಮನೆ ಮತ್ತು ಶೌಚಾಲಯದಿಂದ ನೀರು ಹೊರ ಹೋಗಲು ಕಲ್ಪಿಸಿರುವ ಪೈಪ್ ಲೈನ್ಗಳು ಸರಿಯಾದ ಪೀಕ್ಸ್ ಆಗದೆ ಸೋರುತ್ತಿದೆ. ಹೀಗೆ ಸೋರಿ ಕಟ್ಟಡ ಪಾಚ್ಚಿ ಕಟ್ಟಿದೆ,'' ಎಂಬುದು ಇಲ್ಲಿನ ನಿವಾಸಿ ರಘು ಅವರ ಆತಂಕ.
''ವಸತಿ ನಿರ್ಮಿಸಿದ ನಂತರ ಇದುವರೆಗೆ ಯಾವುದೇ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಈ ಸಮಸ್ಯೆ ಬಗ್ಗೆ ಸ್ಲಂ ಬೋರ್ಡ್ ಅವರ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲ. ಇನ್ನೂ ಜನಪ್ರತಿನಿಧಿಗಳು ಇತ್ತ ತಲೆ ಹಾಕಿಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದಾಗ ಈ ಸಮಸ್ಯೆ ಮನವರಿಕೆ ಮಾಡಿಕೊಡಲಾಗಿತ್ತು. ಭರವಸೆ ಕೊಟ್ಟರೇ ಹೊರತು ಯಾವುದೇ ಪ್ರಯೋಜನ ಆಗಿಲ್ಲ,'' ಎನ್ನುತ್ತಾರೆ ಇಲ್ಲಿನ ನಿವಾಸಿ ಹನುಮಯ್ಯ.
ಏಕಲವ್ಯ ನಗರದಲ್ಲಿರುವ ಮನೆಗಳದ್ದು ಇದೇ ಪರಿಸ್ಥಿತಿ. ಮನೆ ಹಸ್ತಾಂತರಿಸಿ 9 ತಿಂಗಳು ಕಳೆದಿದೆ. ಆಗಲೇ ಮನೆಗಳು ಬಿರುಕು ಬಿಟ್ಟಿವೆ. ಅನೇಕ ಅಲೆಮಾರಿ ಸಮುದಾಯಗಳ ಜನರು ಇಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಆಗ 2010ರಲ್ಲಿ 354 ಮಂದಿ ಅಲೆಮಾರಿಗಳಿಗೆ ಸೇರಿದಂತೆ ಒಟ್ಟು 1040 ವಿವಿಧ ಬಡಾವಣೆಗಳ ನಿರ್ಗತಿಕರಿಗೆ ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ವಸತಿ ಕಲ್ಪಿಸಲು 18 ತಿಂಗಳ ಕಾಲಾವಕಾಶ ನೀಡಿ ಮನೆ ನಿರ್ಮಿಸಿ ಹಸ್ತಾಂತರಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಸೂಚಿಸಿತ್ತು. 6 ವರ್ಷ ಕಳೆದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗಿರಲಿಲ್ಲ, ಇದಕ್ಕಾಗಿ ಇಲ್ಲಿನ ನಿವಾಸಿಗಳು ಸಾಲು ಸಾಲು ಪ್ರತಿಭಟನೆ ನಡೆಸಿ ಹೋರಾಟದ ಮೂಲಕ ವಸತಿ ಪಡೆದುಕೊಂಡರು. ಇಷ್ಟು ಹೋರಾಟ ಮಾಡಿ ಪಡೆದು ಮನೆಗಳು ದುಸ್ಥಿತಿ ತಲುಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ 1040 ಮನೆಗಳಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ.
ಕಟ್ಟಡಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಕ್ಷೇಮಾಭಿವೃದ್ಧಿ ಸಮಿತಿ ಸ್ಥಾಪಿಸಬೇಕಿತ್ತು. ಆದರೆ, ಅದು ಆಗಿಲ್ಲ. ಈ ಸಾಲಿನ ಆ್ಯಕ್ಷನ್ ಪ್ಲಾನ್ನಲ್ಲಿ ಈ ಸಮಸ್ಯೆ ಸೇರಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು.
-ಕಪನಿಗೌಡ, ಕಾರ್ಯಪಾಲ ಎಂಜಿನಿಯರ್, ಕರ್ನಾಟಕ ಕೋಳಗೇರಿ ಅಭಿವೃದ್ಧಿ ಮಂಡಳಿ
ನಾನು ಇಲ್ಲಿ 40 ವರ್ಷಗಳಿಂದ ವಾಸವಿದ್ದೇನೆ. ಕಳೆದ 8 ವರ್ಷದ ಹಿಂದೆ ಗುಡಿಸಲು ತೆರವುಗೊಳಿಸಿ ಈ ಮನೆಗಳನ್ನು ಕಟ್ಟಿಸಿಕೊಡಲಾಗಿತ್ತು. ಸದ್ಯ ಅವ್ಯವಸ್ಥೆಯಿಂದ ಇಲ್ಲಿ ಅಸ್ವಚ್ಛತೆ ಕಾಡುತ್ತಿದೆ. ಇದರಿಂದ ನಮ್ಮ ನೆಮ್ಮದಿಯ ಹಾಳಾಗಿದೆ.
- ನಾಗಮ್ಮ , ನಿವಾಸಿ