ಆ್ಯಪ್ನಗರ

ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ

ಒಳಚರಂಡಿ ಕಾಮಗಾರಿ ವೇಳೆ ಕುಸಿದ ಮಣ್ಣಿನಡಿ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

Vijaya Karnataka 9 Jan 2019, 5:00 am
ದಾಸನಕೊಪ್ಪಲಿನಲ್ಲಿ ಒಳಚರಂಡಿ ಕಾಮಗಾರಿ ವೇಳೆ ಘಟನೆ
Vijaya Karnataka Web protecting workers from clay
ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ


ಮೈಸೂರು:
ಒಳಚರಂಡಿ ಕಾಮಗಾರಿ ವೇಳೆ ಕುಸಿದ ಮಣ್ಣಿನಡಿ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಮೈಸೂರು ತಾಲೂಕಿನ ದಾಸನಕೊಪ್ಪಲಿನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಕೆ.ಆರ್‌. ಪೇಟೆಯ ಚಂದನ್‌(27), ಉದ್ಬೂರಿನ ಪುಟ್ಟರಾಜು(25), ವಾಜಮಂಗಲದ ಮರಿಸ್ವಾಮಿ(50) ಅವರನ್ನು ರಕ್ಷಣೆ ಮಾಡಲಾಗಿದ್ದು, ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಟಿಕ್ಯಾತನಹಳ್ಳಿ ಗ್ರಾಪಂ ವತಿಯಿಂದ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿಯಲ್ಲಿ ಈ ಮೂವರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಜೆಸಿಬಿ ಯಂತ್ರದ ಮೂಲಕ 18 ರಿಂದ 20 ಅಡಿ ಆಳದವರೆಗೆ ಗುಂಡಿಯನ್ನು ತೆಗೆದ ಬಳಿಕ ಸಂಜೆ 5ರ ಸಮಯದಲ್ಲಿ ಈ ಮೂವರು ಪೈಪ್‌ಲೈನ್‌ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಮಣ್ಣು ಇವರ ಮೇಲೆ ಕುಸಿದಿದ್ದು, ಮಣ್ಣಿನಡಿ ಸಿಲುಕಿದ್ದರು. ತಕ್ಷಣ ಸ್ಥಳದಲ್ಲಿದ್ದ ಕಾರ್ಮಿಕರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಅಗಮಿಸಿದ ಅವರು ಗುಂಡಿಯೊಳಗೆ ಇಳಿದು ಮಣ್ಣಿನೊಳಗೆ ಮುಚ್ಚಿ ಹೋಗಿದ್ದ ಕಾರ್ಮಿಕರಿಗೆ ಜೀವ ರಕ್ಷಕ ಸಾಧನಗಳನ್ನು ನೀಡಿದರು. ಬಳಿಕ ಮಣ್ಣು ತೆರವುಗೊಳಿಸಿ ಐದಾರು ಅಡಿ ಆಳದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿ, ಆಂಬ್ಯುಲೆನ್ಸ್‌ನಲ್ಲಿ ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೂ ಗಾಯವಾಗಿದೆ.

ಕಾಮಗಾರಿ ವೇಳೆ ಸೂಕ್ತ ಮುಂಜಾಗ್ರತಾ ವಹಿಸದೇ ಕಾರ್ಮಿಕರು ತೊಂದರೆಗೀಡಾಗುವಂತೆ ಮಾಡಿದ ಗುತ್ತಿಗೆದಾರ ಮಹೇಂದ್ರ ವಿರುದ್ಧ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್‌ ನೇತೃತ್ವದಲ್ಲಿ ನಡೆದ ರಕ್ಷಣಾ ಕಾರ್ಯದಲ್ಲಿ ಠಾಣಾಧಿಕಾರಿ ನಾಗರಾಜ ಅರಸ್‌, ಸಿಬ್ಬಂದಿ ಥಾಮಸ್‌, ಬಾಲಮುರಳಿಕೃಷ್ಣ, ಉಮೇಶ, ಗುರು ಪ್ರಸಾದ್‌ ಇದ್ದರು.

--------------

ಒಳಚರಂಡಿ ಕಾಮಗಾರಿ ವೇಳೆ ಗುತ್ತಿಗೆದಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದುದರಿಂದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.
-ಕೆ.ಪಿ. ಗುರುರಾಜ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ