ಆ್ಯಪ್ನಗರ

ಸಿದ್ದು 'ಕೈ' ಚಳಕ : ವಶವಾಯ್ತು ಮೈಸೂರು ಪಾಲಿಕೆ ಮೇಯರ್‌ಗಿರಿ?

ಒಟ್ಟು 65 ಸದಸ್ಯ ಬಲದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಹಾಗಾಗಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವುದು ಅನಿವಾರ್ಯವಾಗಿತ್ತು.

Vijaya Karnataka 17 Nov 2018, 11:57 am
ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯ ಪ್ರಕ್ರಿಯೆ ಇದೀಗ ಪ್ರಗತಿಯಲ್ಲಿದ್ದು ಕಾಂಗ್ರೆಸ್ ಪಕ್ಷದ ಪುಷ್ಪಲತಾ ಜಗನ್ನಾಥ್ ಮೇಯರ್ ಹಾಗೂ ಜೆಡಿಎಸ್ ನ ಶಫಿ ಅಹಮದ್ ಉಪಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
Vijaya Karnataka Web Siddaramaiah


ಒಟ್ಟು 65 ಸದಸ್ಯ ಬಲದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಹಾಗಾಗಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವುದು ಅನಿವಾರ್ಯವಾಗಿತ್ತು.

22 ಸ್ಥಾನ ಹೊಂದಿರುವ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 19, ಜೆಡಿಎಸ್ 18, ಬಿ.ಎಸ್.ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರಿದ್ದಾರೆ. ಇದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಸದ, ಶಾಸಕರು, ವಿಧಾನಪರಿಷತ್ತಿನ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಇರುವುದರಿಂದ ಮೈಸೂರು ಪಾಲಿಕೆಯಲ್ಲೂ ಇದೇ ದೋಸ್ತಿ ಪಕ್ಷಗಳು ಅಧಿಕಾರ ಹಿಡಿಯುವುದೂ ಕೂಡ ಬಹುತೇಕ ಖಚಿತವಾಗಿತ್ತು. ಆದರೆ ಮೇಯರ್ ಸ್ಥಾನಕ್ಕಾಗಿ ದೋಸ್ತಿ ಪಕ್ಷಗಳ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಮೇಯರ್ ಗಿರಿ ಯಾವ ಪಕ್ಷದ ಪಾಲಾಗಲಿದೆ ಎಂಬುದು ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿತ್ತು.

ಮೇಯರ್ ಗಿರಿ ಜೆಡಿಎಸ್‌ಗೆ ಸಿಗದಿದ್ದರೆ ಬಿಜೆಪಿ ಜೊತೆಗೂ ಮೈತ್ರಿಗೆ ಸಿದ್ದ ಎಂದು ಜೆಡಿಎಸ್ ಕೆಲವು ನಾಯಕರು ಸುಳಿವು ನೀಡಿದ್ದರು. ಇದರ ಗಂಭೀರತೆ ಅರಿತ ಮಾಜಿ ಸಿ.ಎಂ ಸಿದ್ದರಾಮಯ್ಯ, ನೇರವಾಗಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಕೋರಿದ್ದರು. ಸಿದ್ದು ಮಾತಿಗೆ ತಲೆದೂಗಿದ ದೇವೇಗೌಡರು, ಮೈಸೂರು ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು. ಇದರ ಹೊರತಾಗಿಯೂ ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತು.

ಶಾಂತಕುಮಾರಿ ಮತ್ತು ಪುಷ್ಪಲತಾ ಜಗನ್ನಾಥ್ ನಡುವೆ ಮೇಯರ್ ಸ್ಥಾನಕ್ಕಾಗಿ ಹಣಾಹಣಿ ನಡೆದಿತ್ತು. ಕಡೆಗಳಿಗೆಯಲ್ಲಿ ಪುಷ್ಪಲತಾ ಜಗನ್ನಾಥ್ ಅವರನ್ನು ಮೇಯರ್ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದ ಕಾಂಗ್ರೆಸ್ ಪಕ್ಷ ಬಂಡಾಯ ಉಂಟಾಗದಂತೆ ನೋಡಿಕೊಂಡಿತು. ಪಕ್ಷದ ಅಣತಿಯಂತೆ ಪುಷ್ಪಲತಾ ಜಗನ್ನಾಥ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನ ಶಫಿ ಅಹಮದ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಸುನಂದಾಪಾಲನೇತ್ರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಉಪಮೇಯರ್ ಸ್ಥಾನಕ್ಕೆ ಎಂ ಸತೀಶ್ ನಾಮಪತ್ರ ಸಲ್ಲಿಸಿದರು. ಈ ಮೂಲಕ ಮೇಯರ್ ಉಪಮೇಯರ್ ಆಯ್ಕೆಗೆ ಚುನಾವಣಾ ಅಖಾಡ ಸಿದ್ದವಾಗಿದ್ದು ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಮೇಯರ್ ಹಾಗು ಜೆಡಿಎಸ್ ನ ಶಫಿ ಅಹಮದ್ ಉಪಮೇಯರ್ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ