ಆ್ಯಪ್ನಗರ

ವೈದ್ಯ ಕ್ಷೇತ್ರದಲ್ಲೂ ಬಂಡಾಯ ಪ್ರವೃತ್ತಿ: ಡಾ.ಸಿ.ಎನ್‌.ಮಂಜುನಾಥ್‌

ಸಾಹಿತ್ಯ ಕ್ಷೇತ್ರದಂತೆ ವೈದ್ಯ ಕ್ಷೇತ್ರದಲ್ಲೂ ಬಂಡಾಯ ವೈದ್ಯರಿದ್ದು, ಇವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್‌. ಮಂಜುನಾಥ್‌ ಎಚ್ಚರಿಸಿದರು.

Vijaya Karnataka 18 Mar 2019, 5:00 am
ಮೈಸೂರು : ಸಾಹಿತ್ಯ ಕ್ಷೇತ್ರದಂತೆ ವೈದ್ಯ ಕ್ಷೇತ್ರದಲ್ಲೂ ಬಂಡಾಯ ವೈದ್ಯರಿದ್ದು, ಇವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್‌. ಮಂಜುನಾಥ್‌ ಎಚ್ಚರಿಸಿದರು.
Vijaya Karnataka Web rebellion in the field of medicine dr cn manjunath
ವೈದ್ಯ ಕ್ಷೇತ್ರದಲ್ಲೂ ಬಂಡಾಯ ಪ್ರವೃತ್ತಿ: ಡಾ.ಸಿ.ಎನ್‌.ಮಂಜುನಾಥ್‌


ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆ, ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಾರದವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎಸ್‌.ಪಿ.ಯೋಗಣ್ಣ ಅವರ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

''ವೈದ್ಯ ಕ್ಷೇತ್ರದಲ್ಲಿ ಬಂಡಾಯ ಪ್ರವೃತ್ತಿ ತಲೆದೋರಿದ್ದು, ಸತ್ಯಕ್ಕೆ ದೂರವಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜನತೆಯ ದಾರಿ ತಪ್ಪಿಸಲಾಗುತ್ತಿದೆ. ಈ ಮಾದರಿಯ ಕೆಲ ವೈದ್ಯರು ಮನುಷ್ಯನ ದೇಹದ ಕೊಬ್ಬಿನಂಶಕ್ಕೂ ಹೃದಯ ಕಾಯಿಲೆಗೂ ಸಂಬಂಧವಿಲ್ಲ. ಯಾರು ಎಷ್ಟು ಬೇಕಾದರೂ ಕೊಬ್ಬಿನ ಅಂಶವಿರುವ ಆಹಾರ ಸೇವನೆ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿಬಿಟ್ಟಿದ್ದಾರೆ. ಇದನ್ನು ಪರಾಮರ್ಶಿಸಿ ನೋಡುವುದಾದರೆ, ಕೆಲವರಿಗೆ ಹುಟ್ಟುತ್ತಲೆ ಕೊಲೆಸ್ಟ್ರಾಲ್‌ ಅಂಶ ಹೆಚ್ಚಾಗಿರುತ್ತದೆ. ಇಂತವರಿಗೆ 15 ವರ್ಷದೊಳಗೆ ಹೃದಯಾಘಾತವಾಗುತ್ತದೆ ಎಂದ ಮೇಲೆ ಕೊಲೆಸ್ಟ್ರಾಲ್‌ಗೂ ಹೃದಯಾಘಾತಕ್ಕೂ ಸಂಬಂಧವಿದೆ ಎಂದೇ ಅರ್ಥ. ಇದನ್ನು ಅರ್ಥ ಮಾಡಿಕೊಳ್ಳದೇ ಕೆಲ ವೈದ್ಯರು ಈ ರೀತಿ ಅಪಪ್ರಚಾರ ಮಾಡುತ್ತಾರೆ. ಜನರು ಈ ಕುರಿತು ಎಚ್ಚರಿಕೆ ವಹಿಸಬೇಕು,'' ಎಂದು ಕಿವಿಮಾತು ಹೇಳಿದರು.

''ಇದಲ್ಲದೆ ರಕ್ತದ ಒತ್ತಡಕ್ಕೆ ಚಿಕಿತ್ಸೆಯೇ ಬೇಕಿಲ್ಲ ಎನ್ನುವುದು, ಲಾಡು ಕೊಟ್ಟು ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಕೊಡುತ್ತೇವೆ ಎನ್ನುವ ವ್ಯವಸ್ಥೆಯೂ ನಮ್ಮ ನಡುವೆ ಇದೆ. ಹೀಗೆ, ಸಕ್ಕರೆ ಕಾಯಿಲೆ ಇದ್ದ ವ್ಯಕ್ತಿಯೊಬ್ಬ ನಮ್ಮ ಮಾತು ಕೇಳದೇ ಲಾಡು ತಿಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವೈಜ್ಞಾನಿಕ ಮಾಹಿತಿಯನ್ನು ನೀಡುವುದು ಅಗತ್ಯ. ಹೋಮಿಯೋಪತಿ, ಅಲೋಪತಿ, ಟೆಲಿಪತಿ ಯಾವುದೇ ವೈದ್ಯಕೀಯ ವಿಧಾನವಾದರೂ ಮೊದಲು ರೋಗಿಗಳ ಬಗ್ಗೆ ಸಿಂಪತಿ ಇರಬೇಕು,'' ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಚಿಕ್ಕಮೊಗ ಡಾ.ಎಸ್‌.ಪಿ.ಯೋಗಣ್ಣ ಕುರಿತ ಕಿರುಹೊತ್ತಗೆ ಬಿಡುಗಡೆ ಮಾಡಿದರು. ಐಎಂಎ ರಾಜ್ಯ ಶಾಖೆ ನಿಯೋಜಿತ ಅಧ್ಯಕ್ಷ ಡಾ.ಮಧುಸೂದನ್‌ ಕಾರಿಗನೂರು, ಉಪಾಧ್ಯಕ್ಷ ಸುರೇಶ್‌ ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಸುಯೋಗ್‌ ಆಸ್ಪತ್ರೆ ಸಂಸ್ಥಾಪಕ ಎಸ್‌.ಪಿ.ಯೋಗಣ್ಣ ಇದ್ದರು.


ಜಾಲತಾಣಗಳಿಂದ ಸಾಮಾಜಿಕ ಭಯೋತ್ಪಾದನೆಯಾಗುತ್ತಿದೆ. ಇಲ್ಲಿ ಹೀರೊಗಳನ್ನು ಜೀರೊಗಳೆಂದು, ಜೀರೊಗಳನ್ನು ಹೀರೊಗಳೆಂದು ಬಿಂಬಿಸಿ ಸಮಾಜದ ದಿಕ್ಕು ತಪ್ಪಿಸಲಾಗುತ್ತಿದೆ. ಇದು ಸಾಮಾಜಿಕ ಭಯೋತ್ಪಾದನೆಯಾಗಿದೆ. ಸಾಮಾನ್ಯ ಭಯೋತ್ಪಾದನೆಯಿಂದ 50ರಿಂದ 100 ಜನ ಸತ್ತರೆ, ಸಾಮಾಜಿಕ ಭಯೋತ್ಪಾದನೆಯಿಂದ ಇಡೀ ಸಮಾಜವೇ ಸಾಯುತ್ತದೆ. ಹಾಗಾಗಿ ಇದು ಭಯೋತ್ಪಾದನೆಗಿಂತ ಹೆಚ್ಚು ಪರಿಣಾಮಕಾರಿ.

-ಡಾ.ಸಿಎನ್‌. ಮಂಜುನಾಥ್‌, ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ