ಆ್ಯಪ್ನಗರ

ವರ್ಷ ಕಳೆದರೂ ಮುಗಿಯದ ಕಾಮಗಾರಿ: ಸಂಚಾರಕ್ಕೆ ಕಿರಿಕಿರಿ

ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಿಂದ ಚುಂಚನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರೀಕರಣ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಒಂದು ವರ್ಷ ಕಳೆದರೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪರಿಣಾಮವಾಗಿ ಈ ರಸ್ತೆಯಲ್ಲಿ ಓಡಾಡುವವರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

Vijaya Karnataka 25 May 2018, 5:00 am
ಕೋಣನೂರು: ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಿಂದ ಚುಂಚನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರೀಕರಣ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಒಂದು ವರ್ಷ ಕಳೆದರೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪರಿಣಾಮವಾಗಿ ಈ ರಸ್ತೆಯಲ್ಲಿ ಓಡಾಡುವವರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
Vijaya Karnataka Web road problem in varuna
ವರ್ಷ ಕಳೆದರೂ ಮುಗಿಯದ ಕಾಮಗಾರಿ: ಸಂಚಾರಕ್ಕೆ ಕಿರಿಕಿರಿ


ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಆರಂಭದಿಂದಲೂ ಮಂದಗತಿಯಿಂದಲೇ ಗುತ್ತಿಗೆದಾರರು ರಸ್ತೆ ನಿರ್ಮಾಣ ಮಾಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನ ಸಭಾ ಕ್ಷೇತ್ರದ ಗ್ರಾಮ ಇದಾಗಿದೆ. ಕೊಣನೂರು ಗ್ರಾಮದಿಂದ ಚುಂಚನಹಳ್ಳಿ ತಲುಪಲು 5 ಕಿ.ಮೀ. ಬೆಟ್ಟ ಗುಡ್ಡಗಳ ನಡುವಿನ ರಸ್ತೆಯಲ್ಲಿ ಹಾದುಹೋಗಬೇಕಿತ್ತು. ಈ ರಸ್ತೆ ಸರಿಯಿಲ್ಲದ ಕಾರಣ ಕವಲಂದೆ ಮಾರ್ಗವಾಗಿ 10 ಕಿ.ಮೀ. ಸುತ್ತಿಕೊಂಡು ಬರುತ್ತಿದ್ದರು.

ಈ ವಿಷಯದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಪರಿಣಾಮ ಸರಕಾರ ಎಚ್ಚೆತ್ತುಕೊಂಡು, ರಸ್ತೆ ಅಭಿವೃದ್ಧಿಗೆ ಸುಮಾರು 4.95 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತು. ರಸ್ತೆ ಕಾಮಗಾರಿಗೆ ಶಾಸಕ ಯತೀಂದ್ರ ಅವರು ಚಾಲನೆ ನೀಡಿದ್ದರು.

ಒತ್ತುವರಿ : ರಸ್ತೆ ನಿರ್ಮಾಣ ಸಂದರ್ಭದಲ್ಲಿ ಗುತ್ತಿಗೆದಾರರು ಕೆಲವು ರೈತರ ಜಮೀನುಗಳನ್ನು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಭಾವಿಗಳು, ಸಿರಿವಂತ ರೈತರ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳದೆ ಅಲ್ಲಿ ರಸ್ತೆಯನ್ನು ಚಿಕ್ಕದಾಗಿಯೇ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಎಂಜಿನಿಯರ್‌ಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚುಂಚನಹಳ್ಳಿ ಗ್ರಾಮದ ರೈತ ಮಾದಪ್ಪ ಆರೋಪಿಸಿದ್ದಾರೆ.

ಕಿರಿದಾದ ಸೇತುವೆಗಳ ನಿರ್ಮಾಣ: ರಸ್ತೆಯು ಬೆಟ್ಟ ಗುಡ್ಡಗಳ ನಡುವೆ ಹಾದುಹೋಗುತ್ತದೆ. ಇದರ ಮಧ್ಯೆ ಕಿರಿದಾದ ಸೇತುವೆಯೊಂದನ್ನು ನಿರ್ಮಿಸಿದ್ದು, ಇಲ್ಲಿ ಒಂದು ಬಸ್‌ ಸಂಚರಿಸಿದರೆ ಅಕ್ಕಪಕ್ಕ ಇನ್ನೊಂದು ವಾಹನ ಹೋಗಲಾರದಷ್ಟು ಇಕ್ಕಟ್ಟಾದ ಜಾಗವಿದೆ. ಬೆಟ್ಟದಿಂದ ಹರಿದುಬಂದ ನೀರು ಸೇತುವೆ ಕೆಳಗೇ ಹಾದುಹೋಗಬೇಕಿದೆ. ಆದರೆ, ನೀರು ಹಾದುಹೋಗುವ ಜಾಗವೂ ಕಿರಿದಾಗಿದೆ. ಅಕಸ್ಮಾತ್‌ ನೀರಿನ ಪ್ರಮಾಣ ಹೆಚ್ಚಾದರೆ ಸೇತುವೆಗೆ ಅಪಾಯವಿದೆ.

ರೈತರಿಗೆ ಕಿರಿಕಿರಿ: ಸುಮಾರು 3 ಕಿಲೋ ಮೀಟರ್‌ ವರೆಗೆ ಜಲ್ಲಿ ಕಲ್ಲುಗಳನ್ನು ಹರಡಿ ರೋಲರ್‌ ಮಾಡದೆ ಇರುವ ಕಾರಣ ಜಮೀನುಗಳಿಗೆ ತೆರಳಲು ರೈತರು ಮತ್ತು ವಾಹನ ಸವಾರರು ಎದ್ದು, ಬಿದ್ದು, ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

------------

ಚುನಾವಣೆ ನಡೆಯುತ್ತಿದ್ದ ಕಾರಣ ಕ್ರಷರ್‌ಗಳಲ್ಲಿ ಜಲ್ಲಿಯ ಕೊರತೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ.

ಸಿದ್ದರಾಜು, ಸಹಾಯಕ ಎಂಜಿನಿಯರ್‌.

------

ಒಂದೂವರೆ ವರ್ಷಗಳಿಂದಲೂ ರಸ್ತೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನು ಎಷ್ಟು ವರ್ಷ ಕಾಯಬೇಕು? ಮಾರ್ಗಮಧ್ಯೆ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ತಿರುವಿನಲ್ಲಿ ಅಪಘಾತ ಹೆಚ್ಚು ಸಂಭವಿಸುವ ಸಾಧ್ಯತೆಯಿದೆ.

ಸಿದ್ದರಾಜು ಎಸ್‌ ಮುಖಂಡ ಚುಂಚನಹಳ್ಳಿ ಗ್ರಾಮ

--------------

ಕೋಣನೂರು ಗ್ರಾಮದಿಂದ ಸುಮಾರು 2 ಕಿಲೋ ಮೀ ದೂರದಲ್ಲಿರುವ ಜಮೀನಿನಲ್ಲಿ ನಾವು ವಾಸಿವಿದ್ದೇವೆ. ರಸ್ತೆ ಕಾಮಗಾರಿಗೆ ಜಲ್ಲಿಕಲ್ಲುಗಳನ್ನು ಕಳೆದ ಮೂರು ತಿಂಗಳಿನಿಂದ ರಸ್ತೆಗೆ ಹರಡಿ ಆಗೆಯೇ ಬಿಟ್ಟಿರುವ ಕಾರಣ ಸಂಚರಿಸಲು ತೊಂದರೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ