ಆ್ಯಪ್ನಗರ

ಮೈಸೂರಿನಲ್ಲಿ ಬೀಡಾಡಿ ಕುದುರೆಗಳ ಕಾಟ: ಬೈಕ್‌ ಸವಾರನಿಗೆ ಕಚ್ಚಿದ ಕುದುರೆ

ಮಾಲೀಕರು ಸಾಕದೆ ಬೀದಿಗೆ ಬಿಟ್ಟ ಪರಿತ್ಯಕ್ತ ಕುದುರೆಗಳು ಮೈಸೂರಿನ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ಕಾಟವಾಗಿ ಪರಿಣಮಿಸಿವೆ. ಬೀಡಾಡಿ ಕುದುರೆಗಳ ಸಂಖ್ಯೆ ಬೀಡಾಡಿ ಹಸುಗಳಿಗಿಂತ ಕಡಿಮೆಯಿದ್ದು, ಅವುಗಳಿಂದ ಅಷ್ಟೇನೂ ತೊಂದರೆಯಿಲ್ಲ ಎಂಬುದು ನಗರಪಾಲಿಕೆ ವಾದ. ಆದರೆ ಅಂಕುಶವಿಲ್ಲದ ಒಂದು ಕುದುರೆ ಸಿಕ್ಕ ಸಿಕ್ಕವರನ್ನು ಕಚ್ಚುತ್ತಿದ್ದು, ಅದರಿಂದ ಗಾಯಗೊಂಡ ಹರೀಶ್‌ (30) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.

Vijaya Karnataka Web 8 Sep 2018, 4:45 pm
[This story originally published in Times of India on Sept.08, 2018]
Vijaya Karnataka Web Horse bite


ಮೈಸೂರು:
ಮಾಲೀಕರು ಸಾಕದೆ ಬೀದಿಗೆ ಬಿಟ್ಟ ಪರಿತ್ಯಕ್ತ ಕುದುರೆಗಳು ಮೈಸೂರಿನ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ಕಾಟವಾಗಿ ಪರಿಣಮಿಸಿವೆ. ಬೀಡಾಡಿ ಕುದುರೆಗಳ ಸಂಖ್ಯೆ ಬೀಡಾಡಿ ಹಸುಗಳಿಗಿಂತ ಕಡಿಮೆಯಿದ್ದು, ಅವುಗಳಿಂದ ಅಷ್ಟೇನೂ ತೊಂದರೆಯಿಲ್ಲ ಎಂಬುದು ನಗರಪಾಲಿಕೆ ವಾದ. ಆದರೆ ಅಂಕುಶವಿಲ್ಲದ ಒಂದು ಕುದುರೆ ಸಿಕ್ಕ ಸಿಕ್ಕವರನ್ನು ಕಚ್ಚುತ್ತಿದ್ದು, ಅದರಿಂದ ಗಾಯಗೊಂಡ ಹರೀಶ್‌ (30) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.

ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹರೀಶ್‌ ಅವರಿಗೆ ಮೈಸೂರು ಕೋರ್ಟ್‌ ಸಮೀಪ ಗುರುವಾರದಂದು ಬೀಡಾಡಿ ಕುದುರೆಯೊಂದು ಕಚ್ಚಿ ಗಾಯಗೊಳಿಸಿತ್ತು. ಮಧ್ಯಾಹ್ನ 3:30ರ ಸುಮಾರಿಗೆ ಟ್ರಾಫಿಕ್ಸ್ ಸಿಗ್ನಲ್‌ನಲ್ಲಿ ತಮ್ಮ ಬೈಕ್‌ ನಿಲುಗಡೆ ಮಾಡಿದ್ದಾಗ ಎರಡು ಕುದುರೆಗಳು ಕಾದಾಡುತ್ತ ಅಡ್ಡ ಬಂದವು. ತಲೆಯಿಂದ ಪರಸ್ಪರ ಗುದ್ದಾಡಿಕೊಳ್ಳುತ್ತ ಸಾರ್ವಜನಿಕರಿಗೆ ಹೆದರಿಕೆ ಹುಟ್ಟಿಸುವಂತೆ ಕುದುರೆಗಳು ಅಡ್ಡಾಡುತ್ತಿದ್ದವು. ಕುದುರೆ ರಸ್ತೆ ದಾಟಿ ಹೋಗಲಿ ಎಂದು ಅವರು ಬೈಕ್‌ ಅನ್ನು ಬದಿಗೆ ಸರಿಸಿ ದಾರಿ ಬಿಟ್ಟುಕೊಟ್ಟಾಗ, ಒಂದು ಕುದುರೆ ಅವರತ್ತ ತಿರುಗಿ ಭುಸುಗುಟ್ಟಿದ್ದಲ್ಲದೆ ಬಲ ಭುಜಕ್ಕೆ ಕಚ್ಚಿತು. ಇದರಿಂದ ಭಯಗೊಂಡ ಹರೀಶ್‌ ಕೆಲವು ಕ್ಷಣಗಳ ಕಾಲ ಸ್ತಬ್ಧರಾದರು. ನಂತರ ಬಲವಾಗಿ ಕೈ ಕೊಡವಿ ಕುದುರೆಯ ಬಾಯಿಯಿಂದ ಬಿಡಿಸಿಕೊಂಡರು.

'ನನ್ನ ಭುಜವನ್ನು ಕುದುರೆ ಕಚ್ಚಿದಾಗ ಆಘಾತವಾಯಿತು. ಆದರೆ ಹೇಗೋ ಬಿಡಿಸಿಕೊಂಡು ಪಕ್ಕಕ್ಕೆ ಜಿಗಿದು ತಪ್ಪಿಸಿಕೊಂಡೆ. ಅದೃಷ್ಟವಶಾತ್ ನಾನು ಬೈಕ್‌ನಿಂದ ಬೀಳಲಿಲ್ಲ. ಬಿದ್ದಿದ್ದರೆ ಮತ್ತೊಂದು ಅನಾಹುತವಾಗುತ್ತಿತ್ತು' ಎಂದು ಹರೀಶ್‌ ತಮ್ಮ ಅನುಭವ ಹಂಚಿಕೊಂಡರು. ಅವರ ಸ್ನೇಹಿತ ಕೂಡ ತಮ್ಮ ಬೈಕ್‌ ಚಲಾಯಿಸಿಕೊಂಡು ಜತೆಗಿದ್ದರು. ಹರೀಶ್‌ ಹಿಂದೆ ಉಳಿದಿರುವುದನ್ನು ಗಮನಿಸದೆ ಅವರು ಮುಂದೆ ಸಾಗಿದ್ದರು. ನಂತರ ಈ ಘಟನೆ ನಡೆದಿರುವುದು ತಿಳಿದು ಹರೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಕೃಷ್ಣಮೂರ್ತಿಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ವೈದ್ಯರು ರೇಬೀಸ್ ನಿರೋಧಕ ಇಂಜೆಕ್ಷನ್‌ ತೆಗೆದುಕೊಳ್ಳುವಂತೆ ಸೂಚಿಸಿದರು. ತುರ್ತು ಚಿಕಿತ್ಸೆಯಾಗಿ ಟಿಟಾನಸ್‌ (ಧನುರ್ವಾಯು) ಇಂಜೆಕ್ಷನ್‌ ಮತ್ತು ನೋವು ನಿವಾರಕಗಳನ್ನು ನೀಡಿ ಕೃಷ್ಣರಾಜೇಂದ್ರ ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.

ಕುದುರೆ ಕಚ್ಚಿ ಗಾಯಗೊಂಡು ಚಿಕಿತ್ಸೆಗಾಗಿ ತಮ್ಮ ಬಳಿಗೆ ಬಂದ ಮೊದಲ ಪ್ರಕರಣವಿದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಸುವರ್ಣ ತಿಳಿಸಿದರು. 'ಮುನ್ನೆಚ್ಚರಿಕೆಯಾಗಿ ಎಆರ್‌ವಿ (ಆ್ಯಂಟಿ ರೇಬೀಸ್ ವೈರಸ್‌) ತೆಗೆದುಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿದೆ. ನಾಯಿ, ಕುದುರೆ, ಬೆಕ್ಕು, ಮಂಗ, ಇಲಿ ಮತ್ತು ಅಳಿಲುಗಳ ಕಡಿತಕ್ಕೆ ಇರುವ ಏಕೈಕ ಚಿಕಿತ್ಸೆ' ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ