ಆ್ಯಪ್ನಗರ

ಹುಲಿ ದಾಳಿಗೆ ಹಾಡಿವಾಸಿ ಬಲಿ

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕಾಡಂಚಿನ ಹುಲುಮಟ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿಯೊಂದು ವ್ಯಕ್ತಿಯನ್ನು ಕೊಂದು ಹಾಕಿದೆ.

Vijaya Karnataka 29 Jan 2019, 5:00 am
ಬಹಿರ್ದೆಸೆಗೆ ಹೋಗಿದ್ದವನ ಮೇಲೆ ವ್ಯಾಘ್ರ ದಾಳಿ | ಕಾಡಂಚಿನ ಹುಲುಮಟ್ಲು ಗ್ರಾಮದಲ್ಲಿ ಘಟನೆ
Vijaya Karnataka Web the hadiperson killed a tiger attack
ಹುಲಿ ದಾಳಿಗೆ ಹಾಡಿವಾಸಿ ಬಲಿ


ಎಚ್‌.ಡಿ.ಕೋಟೆ (ಮೈಸೂರು ಜಿಲ್ಲೆ)

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕಾಡಂಚಿನ ಹುಲುಮಟ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿಯೊಂದು ವ್ಯಕ್ತಿಯನ್ನು ಕೊಂದು ಹಾಕಿದೆ.

ಗ್ರಾಮದ ಚಿನ್ನಪ್ಪ (36) ಮೃತ ಹಾಡಿ ನಿವಾಸಿ. ಸೋಮವಾರ ಬೆಳಗ್ಗೆ ಸುಮಾರು 5.45ರ ಸಮಯಲ್ಲಿ ಬಹಿರ್ದೆಸೆಗೆಂದು ಚಿನ್ನಪ್ಪ ಮನೆಯಿಂದ ಹೊರಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಹಿಂದಿನಿಂದ ದಾಳಿ ನಡೆಸಿದ ಹುಲಿ, ಕಚ್ಚಿಕೊಂಡು ಕಾಡಿನ ಕಡೆ ಓಡಿದೆ. ಇವನ ಕಿರುಚಾಟಕ್ಕೆ ಅಕ್ಕಪಕ್ಕದ ಮನೆಯವರು ಓಡಿ ಬಂದರೂ, ಹುಲಿಯಿಂದ ಚಿನ್ನಪ್ಪನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಚಿನ್ನಪ್ಪನ ಮನೆಯಿಂದ ಸುಮಾರು 300 ಮೀಟರ್‌ ದೂರಕ್ಕೆ ಕಚ್ಚಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಹೋಗಿದೆ. ವಿಚಾರ ತಿಳಿದ ಮಚ್ಚೂರು ಗ್ರಾಮದಲ್ಲಿದ್ದ ಅರಣ್ಯ ಇಲಾಖೆಯ ವನಪಾಲಕರು, ಅರಣ್ಯ ರಕ್ಷ ಕರು ಮತ್ತು ವಾಚರ್‌ಗಳು, ಗ್ರಾಮಸ್ಥರ ಸಹಕಾರದಿಂದ ಹುಟುಕಾಟ ನಡೆಸಿದಾಗ ಶವ ಕಾಡಿನಲ್ಲಿ ದೊರೆತಿದೆ. ಮೈಕೈ ಮತ್ತು ಕತ್ತಿನ ಬಳಿ ಕಚ್ಚಿರುವ ಗಾಯದ ಗುರುತುಗಳು ಇವೆ.

ಮೃತನಿಗೆ ಪತ್ನಿ ದೇವಮ್ಮ, ಪುತ್ರಿ ಮಣಿಯಮ್ಮ ಮತ್ತು ಪುತ್ರ ಪ್ರಸನ್ನಕುಮಾರ್‌ ಇದ್ದಾರೆ.

ಆಕ್ರೋಶ: ''ಕಳೆದ 20 ದಿನಗಳಿಂದ ಈ ಭಾಗದಲ್ಲಿ ಹುಲಿ ಉಪಟಳ ಹೆಚ್ಚಾಗಿದೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೃತನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದು, ಜೀವನಕ್ಕೆ ಇವರೇ ಆಧಾರವಾಗಿದ್ದರು. ಹಾಗಾಗಿ ಸರಕಾರ ಕುಟುಂಬಕ್ಕೆ 25 ಲಕ್ಷ ಪರಿಹಾರ, ಚಿನ್ನಪ್ಪನ ಪತ್ನಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ನೀಡಬೇಕು. ಅಲ್ಲದೆ, ಹುಲಿಯನ್ನು ಸೆರೆ ಹಿಡಿಯಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಶಾಸಕ ಅನಿಲ್‌ ಚಿಕ್ಕಮಾದು ಬರಬೇಕು. ಅವರು ಭರವಸೆ ಕೊಡಬೇಕು,'' ಎಂದು ಗ್ರಾಮಸ್ಥರು, ಶವವನ್ನು ಸ್ಥಳದಿಂದ ತೆಗೆಯಲು ಅವಕಾಶ ಕೊಡಲಿಲ್ಲ.

ಕೊನೆಗೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಿಎಫ್‌ ನಾರಾಯಣಸ್ವಾಮಿ, ''ಸರಕಾರದಿಂದ ಲಕ್ಷ ಪರಿಹಾರ ಕೊಡಲು ಕ್ರಮ ತೆಗೆದುಕೊಳ್ಳಲಾಗುವುದು. ಮೃತನ ಪತ್ನಿಗೆ ಇಲಾಖೆಯಲ್ಲಿ ಕೆಲಸ ಕೊಡಲಾಗುವುದು. ಹುಲಿ ಬಂಧನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳದಲ್ಲಿ ಬೋನು ಇಡಲಾಗುವುದು ಮತ್ತು ಹುಲಿ ಪತ್ತೆಗೆ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗುವುದು,'' ಎಂದು ಭರವಸೆ ನೀಡಿದರು. ಆ ನಂತರ ಹಾಡಿವಾಸಿಗಳು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಡಾ.ರಘುನಾಥ್‌ ಮತ್ತು ಸಿಬ್ಬಂದಿ, ಶವದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಿದರು. ನಂತರ ಮೃತರ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೇಶವೇಗೌಡ, ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿನಯ್‌, ತಹಸೀಲ್ದಾರ್‌ ಮಂಜುನಾಥ್‌, ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ, ಡಿವೈಎಸ್‌ಪಿ ಭಾಸ್ಕರ್‌ ರೈ, ಪಿಎಸ್‌ಐ ವಿ.ಸಿ.ಅಶೋಕ್‌ ಭೇಟಿ ನೀಡಿದ್ದರು.

-----------

ಆನೆಗಳ ಸಹಾಯದಿಂದ ಹುಲಿ ಪತ್ತೆಗೆ ಕೂಂಬಿಂಗ್‌ ನಡೆಸಲಾಗುತ್ತಿದೆ. ಚಿನ್ನಪ್ಪನ ಮೇಲೆ ಹುಲಿ ದಾಳಿ ನಡೆಸಿರುವುದು ಖಚಿತವಾಗಿದ್ದು, ಮೊದಲಿಗೆ ಹಿಂದಿನಿಂದ ಬಂದ ಹುಲಿ, ತಲೆಗೆ ಹೊಡೆದಿದೆ. ನಂತರ ಆತನ ಕತ್ತನ್ನು ಕಚ್ಚಿ ಹಿಡಿದು ಎಳೆದುಕೊಂಡು ಕಾಡಿಗೆ ಓಡಿದೆ.
-ಸುಬ್ರಮಣ್ಯ, ಅರಣ್ಯಾಧಿಕಾರಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ