ಆ್ಯಪ್ನಗರ

ಸಂತ್ರಸ್ತರಿಗೆ ಸಿಗುತ್ತಿಲ್ಲ ಬಾಡಿಗೆ ಮನೆ

ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಲ್ಲಿ ಹರಿವು ಕಡಿಮೆ ಆಗಿದ್ದರೂ ಕಬಿನಿ ಜಲಾಶಯದ ಕೊನೆ ಭಾಗದಲ್ಲಿರುವ ಬಿದರಹಳ್ಳಿ ಗ್ರಾಮದಲ್ಲಿರುವ ಮಳೆ ಸಂತ್ರಸ್ತರ ಕಷ್ಟ ಮಾತ್ರ ಇನ್ನೂ ತಪ್ಪಿಲ್ಲ.

Vijaya Karnataka 19 Aug 2019, 5:00 am
ಎಚ್‌.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಲ್ಲಿ ಹರಿವು ಕಡಿಮೆ ಆಗಿದ್ದರೂ ಕಬಿನಿ ಜಲಾಶಯದ ಕೊನೆ ಭಾಗದಲ್ಲಿರುವ ಬಿದರಹಳ್ಳಿ ಗ್ರಾಮದಲ್ಲಿರುವ ಮಳೆ ಸಂತ್ರಸ್ತರ ಕಷ್ಟ ಮಾತ್ರ ಇನ್ನೂ ತಪ್ಪಿಲ್ಲ.
Vijaya Karnataka Web MYR-MYS18HDK5C


ಗ್ರಾಮದಲ್ಲಿ ಸುಮಾರು 50 ಮನೆಗಳು ಕುಸಿದಿವೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಉಳಿದಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಹೋದ ಗೃಹಿಣಿಯೊಬ್ಬರು ವಿದ್ಯುತ್‌ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸದ್ಯಕ್ಕೆ ಗಂಜಿ ಕೇಂದ್ರದಲ್ಲಿ 50 ಕುಟುಂಬಗಳು ವಾಸ ಮಾಡುತ್ತಿವೆ. ಬಾಡಿಗೆ ಮನೆ ಪಡೆಯಲು ಸರಕಾರ 4800 ರೂ. ಕೊಟ್ಟರೂ ಗ್ರಾಮಗಳಲ್ಲಿ ಯಾವುದೇ ಮನೆಗಳು ಬಾಡಿಗೆಗೆ ಸಿಗುವುದಿಲ್ಲ. ಸಿಕ್ಕರೂ ಮನೆಗೆ ಮುಂಗಡ ಹಣ ಕನಿಷ್ಠ 50 ಸಾವಿರ ರೂ.ಗಳಾದರೂ ಬೇಕು. ಕಬಿನಿ ಜಲಾಶಯದ ನಿರ್ಮಾಣಕ್ಕೆ ಬಂದಕೂಲಿ ಕಾರ್ಮಿಕರೇ ಇಲ್ಲಿ ಸಂತ್ರಸ್ತರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರೇ ಹೆಚ್ಚು.

ಹಾಗಾಗಿ ಸದ್ಯಕ್ಕೆ ಇವರಿಗೆ ಜಾಗ ಗುರುತಿಸಿ, ಆದಿವಾಸಿ ಗಿರಿಜನರಿಗೆ ಪುನರ್ವಸತಿ ಕಲ್ಪಿಸಿರುವ ಮಾದರಿಯಲ್ಲೇ ಇವರಿಗೂ ಪುನರ್ವಸತಿ ಕಲ್ಪಿಸಬೇಕಾದ್ದು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯ. ಕಾವೇರಿ ನೀರಾವರಿ ನಿಗಮಕ್ಕೆ ಸೇರಿರುವ ನೂರಾರು ಎಕರೆ ಪ್ರದೇಶ ಇಲ್ಲಿದ್ದರೂ, ನಿಗಮದ ನಿಯಮದ ಪ್ರಕಾರ ಇವರಿಗೆ ನಿವೇಶನ ಕೊಡಲು ಸಾಧ್ಯವಿಲ್ಲ.

ಮಾಜಿ ಸಂಸದ ಆರ್‌. ಧ್ರುನಾರಾಯಣ್‌ ಮತ್ತು ಮಾಜಿ ಶಾಸಕ ಚಿಕ್ಕಣ್ಣ ಕೂಡ ಈ ಬಗ್ಗೆ ಸಮಗ್ರ ವರದಿ ತರಿಸಿಕೊಂಡು, ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರೂ ಏನೂ ಪ್ರಯೋಜನ ಆಗಲಿಲ್ಲ. ಜತೆಗೆ ಬೀಚನಹಳ್ಳಿ ಗ್ರಾಮದಲ್ಲಿರುವ ನೀರಾವರಿ ನಿಗಮಕ್ಕೆ ಸೇರಿದ ವಸತಿ ಗೃಹಗಳು ಇನ್ನೇನು ಬೀಳುವ ಹಂತದಲ್ಲಿದೆ. ಗ್ರಾಮದ ಕೆಳಭಾಗದಲ್ಲಿ ಜನತೆ ಸ್ವಂತವಾಗಿ ಕಟ್ಟಿಕೊಂಡಿರುವ ಮನೆಗಳ ಮಾಲೀಕರ ಬಳಿ ನಿವೇಶನ ಹಕ್ಕು ಪತ್ರ ಅಥವಾ ಮನೆ ಹಕ್ಕು ಪತ್ರ ಕೂಡ ಇಲ್ಲ. ಹಾಗಾಗಿ ಈ ಜನಕ್ಕೆ ಈವರೆಗೂ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ.

ಸದ್ಯಕ್ಕೆ ಕಬಿನಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಒಳ ಹರಿವು 6700 ಕ್ಯೂಸೆಕ್‌ ಇದ್ದು, ಗರಿಷ್ಠ ಮಟ್ಟ 2284 ಅಡಿ ಇರುವ ಜಲಾಶಯದಲ್ಲಿ ಈಗ 2283.78 ಅಡಿ ನೀರಿದೆ.

ಬೀಚನಹಳ್ಳಿ ಗ್ರಾಮದಲ್ಲಿರುವ ಕಾವೇರಿ ನೀರಾವರಿ ನಿಗಮದ ಸ್ಥಳಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ನಿವೇಶನ ಹಕ್ಕು ಪತ್ರ ಕೊಡಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸಂಪರ್ಕಿಸುತ್ತೇನೆ.

-ಅನಿಲ್‌ ಚಿಕ್ಕಮಾದು, ಶಾಸಕ, ಎಚ್‌.ಡಿ.ಕೋಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ