ಆ್ಯಪ್ನಗರ

ಈ ಮಾತೃ ಪ್ರೇಮಕೆ ಜಗತ್ತೇ ತಲೆಬಾಗಿತು, ಮೈಸೂರಿನ ಕಲಿಯುಗದ ಶ್ರವಣ ಕುಮಾರ ಹೇಳಿದ್ದೇನು?

ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ ತನ್ನ ತಾಯಿನ್ನು 4 ದೇಶಗಳಿಗೆ ಸುತ್ತಿಸಿ ಮೈಸೂರಿಗೆ ಮರಳಿದ ಡಿ. ಕೃಷ್ಣ ಕುಮಾರ್‌ ಶೇ.90ರಷ್ಟು ಜನ ನನ್ನಮ್ಮನಂತೆ ಒಳ್ಳೆಯವರೇ ಆಗಿರುತ್ತಾರೆ ಎಂದಿದ್ದಾರೆ.

Vijaya Karnataka Web 25 Sep 2020, 11:54 am
ಹರೀಶ್‌ ಎಲ್‌. ತಲಕಾಡು
Vijaya Karnataka Web mysuru


ಮೈಸೂರು: ಹತ್ತಿರ ಹತ್ತಿರ ಸಾವಿರ ದಿನದ ಪಯಣ, ಸಾವಿರಾರು ಕಿ. ಮೀ. ಸುತ್ತಾಟ, ನಾಲ್ಕು ದೇಶದ ಪರಿಚಯ, ಲಕ್ಷಾಂತರ ಜನರ ಸಂಪರ್ಕ, ಸಾವಿರಾರು ದೇವಾಲಯಗಳ ದರ್ಶನ- ಅದೊಂದು ಅವರ್ಣನೀಯ ಅನುಭವ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ- ಜಗತ್ತು ಬಹಳ ಸುಂದರವಾಗಿದೆ. ಶೇ.90ರಷ್ಟು ಜನ ನನ್ನಮ್ಮನಂತೆ ಒಳ್ಳೆಯವರೇ ಆಗಿರುತ್ತಾರೆ !-ಇದು ಕಲಿಯುಗದ ಶ್ರವಣ ಕುಮಾರ ಎಂದೇ ಖ್ಯಾತರಾದ ಮೈಸೂರಿನ ಡಿ. ಕೃಷ್ಣ ಕುಮಾರ್‌ ಅವರ ಮಾತು.

70 ವರ್ಷದ ತನ್ನ ತಾಯಿಯನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು, ಎರಡೂವರೆ ವರ್ಷಗಳ ಕಾಲ ಭಾರತ, ನೇಪಾಳ, ಮಾಯನ್ಮಾರ್‌, ಭೂತಾನ್‌ ದೇಶದಲ್ಲಿ ಸಂಚರಿಸಿ, ವಾರದ ಹಿಂದೆಯಷ್ಟೇ ಮೈಸೂರಿಗೆ ವಾಪಸ್‌ ಆಗಿದ್ದಾರೆ. ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಅವರು ನಡೆಸಿದ ದೇಶ ಪರ್ಯಟನೆ ಕುರಿತು ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮನಬಿಚ್ಚಿ ಮಾತನಾಡಿದರು. ಅವರ ತಾಯಿ ಚೂಡಾರತ್ನ ಕೂಡ ಅನುಭವ ಹಂಚಿಕೊಂಡರು.

ಸ್ಕೂಟರ್‌ ಪಯಣ ತ್ರಾಸಾಗಲಿಲ್ಲವೇ ? ನೀವು ಎಲ್ಲಿಉಳಿಯುತ್ತಿದ್ದಿರಿ ? ಊಟದ ವ್ಯವಸ್ಥೆ ಯನ್ನು ಯಾವ ರೀತಿ ಮಾಡಿಕೊಳ್ಳುತ್ತಿದ್ದಿರಿ ? ಮಳೆ-ಗಾಳಿ-ಕಾಡು-ಮೇಡಿನ ಸುತ್ತಾಟದಲ್ಲಿ ಎದುರಿಸಿದ ಸವಾಲುಗಳು ಏನು ? ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳೇ ಅವರಿಗೆ ಸಂವಾದಲ್ಲಿ ಎದುರಾದವು. ''ನಮ್ಮ ಜನ ಬಹಳ ಒಳ್ಳೆಯವರು ಸಾರ್‌. ಯಾರೋ ಮಾ- ಬೇಟಾ(ಅಮ್ಮ, ಮಗ) ದಕ್ಷಿಣ ಭಾರತದಿಂದ ಸ್ಕೂಟರ್‌ನಲ್ಲಿ ಬಂದಿದ್ದಾರಂತೆ ಎಂಬುದನ್ನು ಕೇಳುತ್ತಿದ್ದಂತೆ, ನಮ್ಮನ್ನು ಸತ್ಕರಿಸಿದರು. ಗಡ್ಡ ನೋಡಿ ಗುರೂಜಿ ಎಂದು ಭಾವಿಸಿ ಗೌರವಿಸಿದರು. ಎಲ್ಲದಕ್ಕಿಂತ ಮಿಗಿಲಾಗಿ, ಅಮ್ಮನನ್ನು ಕರೆದುಕೊಂಡು ತೀರ್ಥಯಾತ್ರೆ ಮಾಡುತ್ತಿರುವುದನ್ನು ಕಂಡು, ಬೆರಗಾದರು. ತಲೆ ಬಾಗಿಸಿದರು,'' ಎಂದು ನಗುತ್ತಲೇ ವಿವರಿಸಿದರು 42 ವರ್ಷದ ಕೃಷ್ಣಕುಮಾರ್‌.

ಅಮ್ಮನನ್ನು ಸ್ಕೂಟರ್‌ನಲ್ಲೇ ತೀರ್ಥಯಾತ್ರೆ ಮಾಡಿಸಿ 33 ತಿಂಗಳ ನಂತರ ಮೈಸೂರಿಗೆ ಮರಳಿದ ಕಲಿಯುಗದ ಶ್ರವಣಕುಮಾರ!

ಯಾತ್ರೆಗೆ ಆಗಿರುವ ಖರ್ಚು ಎಷ್ಟು ಎಂಬ ಪ್ರಶ್ನೆಗೆ, ''ಲೆಕ್ಕವಿಟ್ಟವರು ಯಾರು? ಯಾತ್ರೆಗಾಗಿ ಯಾರ ಬಳಿಯೂ ಕೈಯೊಡ್ಡಿಲ್ಲ. ಬಹಳಷ್ಟು ಜನ ಹಣ, ದ್ರವ್ಯ, ವಸ್ತುವನ್ನು ದಾನವಾಗಿ ನೀಡಲು ಬಂದರು. ಆದರೆ, ಅದನ್ನು ಪಡೆಯಲಿಲ್ಲ. ಪುಣ್ಯವನ್ನು ನಷ್ಟ ಮಾಡಿಕೊಳ್ಳಲೇಕೆ?,'' ಎಂದು ನಕ್ಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ