ಆ್ಯಪ್ನಗರ

ಪಕ್ಷ ಬಿಡುವ ಮಾತೇ ಇಲ್ಲ: ಶಾಸಕ ಅನಿಲ್‌ ಚಿಕ್ಕಮಾದು

ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್‌ ಪಕ್ಷ ಬಿಡುವ ಮಾತೇ ಇಲ್ಲ ಎಂದು ಶಾಸಕ ಅನಿಲ್‌ ಚಿಕ್ಕಮಾದು ಸ್ಪಷ್ಟಪಡಿಸಿದ್ದಾರೆ.

Vijaya Karnataka 19 Dec 2022, 1:03 pm
ಎಚ್‌.ಡಿ.ಕೋಟೆ (ಮೈಸೂರು ಜಿಲ್ಲೆ): ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್‌ ಪಕ್ಷ ಬಿಡುವ ಮಾತೇ ಇಲ್ಲ ಎಂದು ಶಾಸಕ ಅನಿಲ್‌ ಚಿಕ್ಕಮಾದು ಸ್ಪಷ್ಟಪಡಿಸಿದ್ದಾರೆ.
Vijaya Karnataka Web Anil Chikkamadhu - Standard


ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಬಿನಿ ಪ್ರವಾಹದಿಂದ ಸಂತ್ರಸ್ತರಾದ 68 ಕುಟುಂಬಗಳ ಮನೆ ದುರಸ್ತಿಗೆ ಶನಿವಾರ ಸರಕಾರದ ಪರಿಹಾರ ಚೆಕ್‌ ವಿತರಿಸಿ ಮಾತನಾಡಿದರು.

''ಪಕ್ಷ ದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿರುವಂತೆ ತಾವು ಶಾಸಕರಾಗಿ ಆಯ್ಕೆಯಾಗಿ ಸರಕಾರ ರಚನೆಯಾಗುವ ತನಕ ಬಿಜೆಪಿಯ ಕೆಲವು ಮುಖಂಡರು ಮತ್ತು ಇತರರು ತಮ್ಮನ್ನು ದೂರವಾಣಿಯ ಮೂಲಕ, ಕೆಲವು ಮುಖಂಡರು ನೇರವಾಗಿ ಸಂಪರ್ಕಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಂಸದ ಆರ್‌.ಧ್ರುವನಾರಾಯಣ ಸೇರಿದಂತೆ ಪಕ್ಷ ದ ಹಿರಿಯರು ತಮ್ಮನ್ನು ಹರಸಿದ್ದಾರೆ. ಮನೆ ಬಾಗಿಲಿಗೆ ಟಿಕೆಟ್‌ ತಂದು ಕೊಟ್ಟು ಗೆಲ್ಲಿಸಿದ್ದಾರೆ. ಈ ಋುಣ ತಮ್ಮ ಮೇಲಿದೆ. ಹೀಗಾಗಿ ತಾವು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತೇ ಇಲ್ಲ. ಇರುವ ತನಕ ಕಾಂಗ್ರೆಸ್‌ ಪಕ್ಷ ದಲ್ಲೇ ಇರುತ್ತೇನೆ,'' ಎಂದರು.

ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ''ರಾಜ್ಯದಲ್ಲಿ ಆಪರೇಷನ್‌ ಕಮಲ ಪ್ರಾರಂಭವಾಗಿದ್ದೇ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ. ಗೆದ್ದ ಶಾಸಕರುಗಳಿಗೆ ಹಣದ ಆಮಿಷ ಒಡ್ಡಿ ಅಧಿಕಾರ ಹಿಡಿದಿದ್ದು ದೇಶದ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಅವಧಿಯಲ್ಲಿ. ಗಣಿ ಧಣಿಗಳ ಮೂಲಕ ಈ ಕೆಟ್ಟ ಸಂಪ್ರದಾಯವನ್ನು ಪ್ರಾರಂಭ ಮಾಡಿದ್ದು ಅವರೇ. ಈಗ ಕಾಂಗ್ರೆಸ್‌ ಶಾಸಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅನಿಷ್ಟ ಕೆಲಸವನ್ನು ಮಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ,'' ಎಂದು ಹೇಳಿದರು.

ಪಕ್ಷದ ಆಂತರಿಕ ವಿಚಾರ: ''ಬೆಳಗಾವಿಯಲ್ಲಿ ನಡೆಯುತ್ತಿರುವುದು ಪಕ್ಷ ದ ಆಂತರಿಕ ವಿಚಾರ. ಪಕ್ಷ ದ ಒಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮಾಧ್ಯಮಗಳು ಸಲ್ಲದ ವಿಚಾರವನ್ನು ಪ್ರಚಾರ ಮಾಡುತ್ತಿವೆ. ಬಿಜೆಪಿಯವರು ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ವೃಥಾ ಆರೋಪ ಮಾಡುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರವನ್ನು ಬೀಳಿಸುವುದಿಲ್ಲ. ಕಾಂಗ್ರೆಸ್‌ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎನ್ನುತ್ತಾರೆ,'' ಎಂದು ಹೇಳಿದರು.

''ಬೆಳಗಾವಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಮತ್ತು ಸಂಸದ ಸುರೇಶ್‌ ಜತೆಗೂಡಿ ಜಾರಕಿಹೊಳಿ ಬ್ರದರ್ಸ್‌ ಅವರನ್ನು ಭೇಟಿ ಮಾಡಿ ಬಂದೆ. ಅವರೊಂದಿಗೆ ಎಲ್ಲವನ್ನೂ ಮಾತನಾಡಿದ್ದೇನೆ. ಸಿದ್ದರಾಮಯ್ಯ ಅವರು ಕೂಡ ಮಾತನಾಡಿದ್ದಾರೆ. ಎಲ್ಲವನ್ನು ಪಕ್ಷ ದ ಒಳಗೆ ಕುಳಿತು ಪರಿಹರಿಸಲಾಗುವುದು. ರಾಜ್ಯದ ಸಮ್ಮಿಶ್ರ ಸರಕಾರ 5 ವರ್ಷ ಆಡಳಿತ ನಡೆಸುವುದು ಖಂಡಿತ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ