ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಥಳಿತ: ಪ್ರಾಧ್ಯಾಪಕರ ವಿರುದ್ಧ ದೂರು

ಬೈಕ್‌ ಟೈಯರ್‌ಗಳ ಗಾಳಿ ತೆಗೆದಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು ಹಲ್ಲೆ ನಡೆಸಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Vijaya Karnataka 21 Mar 2019, 5:00 am
ಹಾಸನ: ಬೈಕ್‌ ಟೈಯರ್‌ಗಳ ಗಾಳಿ ತೆಗೆದಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು ಹಲ್ಲೆ ನಡೆಸಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Vijaya Karnataka Web threat to students complaint against professors
ವಿದ್ಯಾರ್ಥಿಗಳಿಗೆ ಥಳಿತ: ಪ್ರಾಧ್ಯಾಪಕರ ವಿರುದ್ಧ ದೂರು


ಹೋಳಿ ಹಬ್ಬ ಆಚರಿಸಲೆಂದು ಕೆಲ ವಿದ್ಯಾರ್ಥಿಗಳು ನಗರದ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣಕ್ಕೆ ಬಂದಿದ್ದರು. ಕಾಲೇಜಿನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಕೆಲ ಪ್ರಾಧ್ಯಾಪಕರು ಬೈಕ್‌ ಟೈಯರ್‌ಗಳ ಗಾಳಿ ಬಿಟ್ಟಿದ್ದಾರೆ. ಹೋಳಿ ಮುಗಿಸಿಕೊಂಡು ವಾಹನವನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳು ದ್ವಿಚಕ್ರವಾಹನದ ಗಾಳಿ ಬಿಟ್ಟಿರುವುದನ್ನು ಕಂಡು ಸಿಟ್ಟಾಗಿ ''ಯಾರೋ ಕಿಡಿಗೇಡಿಗಳು ಇಂತಹ ಕೃತ್ಯವನ್ನು ಮಾಡಿದ್ದಾರೆ,''ಎಂದು ಬೈಯ್ದಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿಯೇ ಇದ್ದ ಪ್ರಾಧ್ಯಾಪಕರೊಬ್ಬರು ಈ ಮಾತನ್ನು ಕೇಳಿ ಕುಪಿತಗೊಂಡು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಅಲ್ಲೇ ಸ್ಥಳದಲ್ಲಿದ್ದ ಮತ್ತಿಬ್ಬರು ವಿದ್ಯಾರ್ಥಿಗಳು, ''ಸರ್‌ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಿದ್ದರೆ ನಾವು ನಿಲ್ಲಿಸುತ್ತಿರಲಿಲ್ಲ. ಆದರೆ ಈಗ ಗಾಳಿ ಇಲ್ಲದ ವಾಹನ ತಳ್ಳುವುದು ತುಂಬಾ ಕಷ್ಟ,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ, ದೈಹಿಕ ಶಿಕ್ಷ ಕ ಹಾಗೂ ಮತ್ತಿಬ್ಬರು ಪ್ರಾಧ್ಯಾಪಕರು, ನಮ್ಮನ್ನೇ ಪ್ರಶ್ನೆ ಮಾಡುತ್ತೀಯ ಎಂದು ಚಂದ್ರಶೇಖರ್‌ ಎಂಬ ವಿದ್ಯಾರ್ಥಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಜತೆಗೆ ಕಾಲಿನಿಂದ ಒದೆಯುವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಡಾವಣೆ ಠಾಣೆಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಘಟನೆಯ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಕ್ಷ ಣ ಮಾತ್ರದಲ್ಲಿ ನೂರಾರು ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ಹಾಗೂ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾರೆ.

-----------

ಪ್ರಕರಣ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿಗಳು ತಪ್ಪು ಮಾಡಿದ ಸಂದರ್ಭ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಆವೇಶದಿಂದ ವರ್ತಿಸಿದ್ದಾಗಿ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.
-ಪ್ರಕಾಶ್‌ಗೌಡ, ಜಿಲ್ಲಾ ಎಸ್‌ಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ