-ವಿಕ ವರದಿ ಫಲಶ್ರುತಿ
ಮೈಸೂರು: ಮೈಸೂರಿನ ಬೊಮ್ಮೇನಹಳ್ಳಿ ಕೆರೆ ಗಡಿಗೆ ಹೊಂದಿಕೊಂಡಂತೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ಮೆ.ಶ್ರೀ ದೃತಿಶೀಲಾನಂದ ಯೋಗ ಮೆಡಿಟೇಷನ್ ಆ್ಯಂಡ್ ಹರ್ಬಲ್ ಸೆಂಟರ್ ಆರಂಭಿಸಲು ನೀಡಿದ್ದ ನಿವೇಶನ ಹಂಚಿಕೆಯನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ರದ್ದುಪಡಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ 267-ಎಚ್-12 ಕೆರೆ ಗಡಿಯಿಂದ 30 ಮೀಟರ್ ಒಳಗಿರುವುದೆಂದು ಜಂಟಿ ಸ್ಥಳ ತನಿಖಾ ವರದಿಯಿಂದ ಧೃಡಪಟ್ಟಿದೆ. ಈ ಹಂಚಿಕೆ ಕೆಟಿಸಿ ಆ್ಯಂಡ್ ಡಿ.ಎ ಆ್ಯಕ್ಟ್ 2014 ಕಾಯ್ದೆ ನಿಯಮ 12 (3) ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ, ಈ ಕಾಯ್ದೆ ನಿಯಮ 13 (3) ಉಲ್ಲೇಖಿಸಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಕ್ಸಿಕ್ಯೂಟಿವ್ ಎಂಜಿನಿಯರ್ ಈ ಕೂಡಲೇ ಹಂಚಿಕೆಯನ್ನು ಹಿಂಪಡೆದು ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಬೊಮ್ಮೇನಹಳ್ಳಿ ಕೆರೆ ಗಡಿಗೆ ಹೊಂದಿಕೊಂಡಂತೆ ಈ ನಿವೇಶನ ಮಂಜೂರು ಮಾಡಿರುವುದು ಕೆರೆ ಸಂರಕ್ಷಣೆಗೆ ಧಕ್ಕೆ ತಂದಿದೆ ಎಂದು 'ವಿಜಯ ಕರ್ನಾಟಕ' ಸರಣಿ ವರದಿಯನ್ನು ಪ್ರಕಟಿಸಿತ್ತು.
ಮೆ.ಶ್ರೀ ದೃತಿಶೀಲಾನಂದ ಯೋಗ ಮೆಡಿಟೇಷನ್ ಆ್ಯಂಡ್ ಹರ್ಬಲ್ ಸೆಂಟರ್ಗೆ ಮೇ 18, 2007ರಂದು ಸ್ವಾಧೀನಪತ್ರ ನೀಡಲಾಗಿತ್ತು. ಈ ಜಾಗ ಬೊಮ್ಮೇನಹಳ್ಳಿ ಕೆರೆಗೆ ಹೊಂದಿಕೊಂಡಂತಿರುವ ಬಗ್ಗೆ ಕಳೆದ ವರ್ಷ ಮಾರ್ಚ್ 8ರಂದು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ಚರ್ಚೆಯಾಗಿತ್ತು. ಈ ನಿವೇಶನವು ಕೆರೆಯ ಬಫರ್ ಜೋನ್ ವ್ಯಾಪ್ತಿಯಲ್ಲಿ ಬರುವುದೆಂದು ತಿಳಿದು ಬಂದಿತು. ಈ ಹಿನ್ನೆಲೆಯಲ್ಲಿ ಕೆಐಎಡಿಬಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರ ಮಾಪನ ಯೋಜನಾ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸ್ಥಳ ತನಿಖೆ ಮಾಡಿ ವಾಸ್ತವಾಂಶವನ್ನು ವರದಿ ಮತ್ತು ನಕ್ಷೆಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಮಾರ್ಚ್ 14ರಂದು ಸಲ್ಲಿಸಲಾಗಿತ್ತು.
ಕೆಐಎಡಿಬಿ ಮೈಸೂರು ವಲಯದ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಾರ್ಚ್ 21ರಂದು ಈ ಹಂಚಿಕೆದಾರರಿಗೆ ನೋಟಿಸ್ ನೀಡಿ ಈ ನಿವೇಶನದಲ್ಲಿ ಯಾವುದೇ ವಿಧವಾದ ನಿರ್ಮಾಣ ಚಟುವಟಿಕೆಯನ್ನು ಮಾಡದಂತೆ ಸೂಚಿಸಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಈ ಸ್ಥಳದಲ್ಲಿ ಯಾವುದೇ ಅನಧಿಕೃತ ಕಟ್ಟಡ ನಿರ್ಮಾಣವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇನ್ನು ಮುಂದೆ ಕೆಐಎಡಿಬಿ ನಿವೇಶನವನ್ನು ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆ ಮಾಡುವಾಗ ಈ ಕಾಯ್ದೆಯಡಿಯಲ್ಲಿನ ಯಾವುದೇ ನಿಯಮಗಳು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ನಿಯಮ 2014ರ ನಿಯಮ 12ರ ಪ್ರಕಾರ, ಕೆರೆ ಕಟ್ಟೆಗಳ ಗಡಿಯಿಂದ ನಿರ್ಧಿಷ್ಟವಾದ ಅಂತರವನ್ನು ಕೆರೆ ಸಂರಕ್ಷಣೆ ದೃಷ್ಟಿಯಿಂದ ಕಾಯ್ದುಕೊಳ್ಳಬೇಕು ಹಾಗೂ ಯಾವುದೇ ಚಟುವಟಿಕೆಗಳಿಗೆ ಹಂಚಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ 12 (3)ರಲ್ಲಿ ಯಾವುದೇ ವಾಣಿಜ್ಯ, ಮನರಂಜನೆ ಅಥವಾ ಕೈಗಾರಿಕಾ ಚಟುವಟಿಕೆಗಳಿಗೆ ಕೆರೆಗಳ ಗಡಿಯಿಂದ 30 ಮೀಟರ್ ಅಂತರದೊಳಗೆ ಹಂಚಿಕೆ ಮಾಡುವುದನ್ನು ನಿಷೇಧಿಸಲಾಗಿದೆ.