ಆ್ಯಪ್ನಗರ

ಗಾಯಗೊಂಡಿದ್ದ ವಾಚರ್‌ಗೆ ಕೊನೆಗೂ ಚಿಕಿತ್ಸೆ

ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವಾಗ ಗಾಯಗೊಂಡಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ (ಬೆಂಕಿ ನಂದಿಸುವ ವಾಚರ್‌) ಮಂಜುವಿಗೆ ಕಡೆಗೂ ಅರಣ್ಯ ಇಲಾಖೆ ಪ್ಲಾಸ್ಟಿಕ್‌ ಸರ್ಜರಿ ಚಿಕಿತ್ಸೆ ಕೊಡಿಸಿದೆ.

Vijaya Karnataka 30 May 2019, 5:00 am
ಮೈಸೂರು: ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವಾಗ ಗಾಯಗೊಂಡಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ (ಬೆಂಕಿ ನಂದಿಸುವ ವಾಚರ್‌) ಮಂಜುವಿಗೆ ಕಡೆಗೂ ಅರಣ್ಯ ಇಲಾಖೆ ಪ್ಲಾಸ್ಟಿಕ್‌ ಸರ್ಜರಿ ಚಿಕಿತ್ಸೆ ಕೊಡಿಸಿದೆ.
Vijaya Karnataka Web watcher was injured
ಗಾಯಗೊಂಡಿದ್ದ ವಾಚರ್‌ಗೆ ಕೊನೆಗೂ ಚಿಕಿತ್ಸೆ


2018ರ ಡಿಸೆಂಬರ್‌ 20 ರಂದು ವಿಜಯ ಕರ್ನಾಟಕದಲ್ಲಿ 'ಅರಣ್ಯ ರಕ್ಷಕನ ಅರಣ್ಯ ರೋದನ' ಶೀರ್ಷಿಕೆಯಡಿ ವಾಚರ್‌ ಮಂಜು ಬೆಂಕಿ ಅವಘಡದಲ್ಲಿ ಗಾಯಗೊಂಡು ಅರಣ್ಯ ಇಲಾಖೆಯಿಂದ ಸೂಕ್ತ ಚಿಕಿತ್ಸೆ ದೊರೆಯದೇ ಅನುಭವಿಸುತ್ತಿದ್ದ ಸಂಕಷ್ಟವನ್ನು ವಿಸ್ತೃತವಾಗಿ ವರದಿ ಮಾಡಲಾಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ತಡವಾಗಿಯಾದರೂ ಯುವಕನಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದೆ.

2017ರಲ್ಲಿ ಬಂಡೀಪುರ ಹುಲಿಯೋಜನೆಯ ಎ.ಎಂ.ಗುಡಿ ವಲಯದಲ್ಲಿ ಬೆಂಕಿನಂದಿಸುವ ವೇಳೆ ಗಾರ್ಡ್‌ ಒಬ್ಬ ಮೃತಪಟ್ಟು, ಮೂವರಿಗೆ ಗಾಯಗಳಾಗಿತ್ತು. ಎಚ್‌.ಡಿ.ಕೋಟೆ ತಾಲೂಕಿನ ಕೆಬ್ಬೆಪುರ ಹಾಡಿಯ ಮಂಜು ಬೆಂಕಿ ವಾಚರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕತ್ತು, ಕೈ ಮತ್ತು ಕಾಲಿನ ಬಳಿ ತೀವ್ರ ಸುಟ್ಟಗಾಯಗಳಾಗಿದ್ದವು. ತಕ್ಷಣಕ್ಕೆ ಇಲಾಖೆಯಿಂದ ಚಿಕಿತ್ಸೆ ದೊರೆತರೂ ಮುಂದುವರಿದ ಚಿಕಿತ್ಸೆ ದೊರೆತಿರಲಿಲ್ಲ.

ಅರಣ್ಯ ಇಲಾಖೆಯವರು ಮಂಜುವಿಗೆ ಏ.20ರಿಂದ 22ರವರೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದ್ದು, 2.50 ಲಕ್ಷ ರೂ.ಪಾವತಿಸಿದ್ದಾರೆ. ಏ.25ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. 2017ರಲ್ಲಿ ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ಮಂಜುವಿನ ಚಿಕಿತ್ಸಾ ವೆಚ್ಚವಾಗಿ 4.50 ಲಕ್ಷ ರೂ.ಪಾವತಿ ಮಾಡಲಾಗಿತ್ತು.

ತೊಡೆಯ ಚರ್ಮವನ್ನು ತೆಗೆದು ಕತ್ತು ಮತ್ತು ಕೈ ಭಾಗಕ್ಕೆ ಅಳವಡಿಸಿ ಸರ್ಜರಿ ಮಾಡಲಾಗಿದೆ. ಸದ್ಯ 3 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಗುಣಮುಖರಾದ ನಂತರ ಅರಣ್ಯ ಇಲಾಖೆಯಲ್ಲಿ ಕೆಲಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅರಣ್ಯ ಸಚಿವರು, ಹಿರಿಯ ಅರಣ್ಯಾಧಿಕಾರಿಗಳು ಕಾಯಂ ಉದ್ಯೋಗ ನೀಡುವ ಭರವಸೆ ನಿಡಿದ್ದರು. ಆದರೆ ಈವರೆಗೆ ಕೆಲಸ ನೀಡಿಲ್ಲ ಎಂದು ಮಂಜು ಬೇಸರಿಸಿದರು.

ನೆರವಿಗೆ ಧಾವಿಸಿದ ಕ್ರಿಕೆಟಿಗ: ಪ್ರಾಣವನ್ನೂ ಲೆಕ್ಕಿಸದೇ ತನ್ನ ಜೊತೆಗಿದ್ದ ಅರಣ್ಯ ಅಧಿಕಾರಿ ಉಳಿಸಲು ಹೋಗಿ ಬೆಂಕಿ ಅವಘಡಕ್ಕೆ ಒಳಗಾದ ಯುವಕನ ಕರ್ತವ್ಯಪ್ರಜ್ಞೆಯನ್ನು ಮನಗಂಡು ಭಾರತದ ಕ್ರಿಕೆಟಿಗ ಮಾಯಾಂಕ್‌ ಅಗರ್‌ವಾಲ್‌ ಅವರು ವೈಲ್ಡ್‌ ಲೈಫ್‌ ಸರ್ವಿಸ್‌ ಅವಾರ್ಡ್‌ ನೀಡಿ ಗೌರವಿಸಿದ್ದಾರೆ. ಅಲ್ಲದೆ ಇದೇ ವೇಳೆ ಕ್ರಿಕೆಟರ್ಸ್‌ ಫಾರ್‌ ವೈಲ್ಡ್‌ ಲೈಫ್‌ ಕನ್‌ಸರ್ವೇಷನ್‌ ಎಂಬ ಸಂಸ್ಥೆ ವತಿಯಿಂದ 1 ಲಕ್ಷ ರೂ. ಸಹಾಯ ಧನ ನೀಡಲಾಯಿತು.

ನನಗೆ ಹಣ ಬೇಡ. ಸುಟ್ಟ ಗಾಯಗಳಿಂದ ನರಳಿರುವ ನನಗೆ ಮೊದಲೇ ತಿಳಿಸಿದಂತೆ ಅರಣ್ಯ ಇಲಾಖೆ ಕಾಯಂ ಉದ್ಯೋಗ ನೀಡಿದರೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.

-ಮಂಜು, ಅರಣ್ಯ ಇಲಾಖೆಯ ದಿನಗೂಲಿ ನೌಕರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ