ಆ್ಯಪ್ನಗರ

ತಮಿಳುನಾಡಿಗೆ ನೀರು: ರೈತರ ಪ್ರತಿಭಟನೆ

ಕಾವೇರಿ ಹಾಗೂ ಕಬಿನಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕಬಿನಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Vijaya Karnataka 23 Jul 2019, 5:00 am
ಮೈಸೂರು : ಕಾವೇರಿ ಹಾಗೂ ಕಬಿನಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕಬಿನಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Vijaya Karnataka Web 2207-2-1-MYSPOHTOS-5


ಸೋಮವಾರ ನಗರದ ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಈ ವೇಳೆ ಕಾಡಾ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

''ನಮ್ಮ ರೈತರಿಗೆ ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಿರುವುದು ಖಂಡನೀಯ. ನಮ್ಮ ರೈತರಿಗೆ ಅನುಕೂಲವಾಗುವಂತೆ ಕೆರೆ ಕಟ್ಟೆಗಳಿಗೂ ನೀರು ಬಿಡಬೇಕು. ಕೂಡಲೇ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು,'' ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ''ರಾಜ್ಯದಲ್ಲಿ ಅಧಿಕಾರದ ಕುರ್ಚಿಗಾಗಿ ನಾಟಕೀಯ ದರ್ಬಾರ್‌ ನಡೆಯುತ್ತಿದೆ. ಇದು ಕೂಡಾವಳಿ ಸರಕಾರ. ಶಾಸಕರು ಕಳೆದ ಒಂದು ತಿಂಗಳಿಂದ ರಾಜ್ಯದ ಜನರಿಗೆ ಮನರಂಜನೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಜನಪ್ರತಿನಿಧಿಗಳು ಎನ್ನಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಅಧಿಕಾರಿಗಳು ಕೆಆರ್‌ಎಸ್‌, ಕಬಿನಿಯಿಂದ ನೀರು ಹರಿಸುತ್ತಿದ್ದಾರೆ. ಏಕೆ ಬಿಡುತ್ತಿದ್ದೀರಿ ಎಂದು ಕೇಳಲು ನೀರಾವರಿ ಸಚಿವರಿಲ್ಲ. ಅವರು ಹೇಳಿಕೊಳ್ಳಲು ಮಾತ್ರ ನೀರಾವರಿ ಮಂತ್ರಿ,'' ಎಂದು ಕಿಡಿ ಕಾರಿದರು.

''ನೀರಾವರಿ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಮಂಡಳಿ ಹೇಳಿದಂತೆ ನೀರು ಬಿಟ್ಟಿದ್ದೀವಿ ಎನ್ನುತ್ತಾರೆ. ಮಂಡಳಿಯವರು ಜಲಾಶಯಕ್ಕೆ ಬರುವ ಮಳೆ ನೀರಿನಲ್ಲಿ ಅರ್ಧದಷ್ಟು ನೀರನ್ನು ಬಿಡಿ ಎನ್ನುತ್ತಾರೆ. ಆದರೆ, ಇವರು ಜಲಾಶಯಕ್ಕೆ ಬರುವ 5000 ಕ್ಯೂಸೆಕ್ಸ್‌ನಲ್ಲಿ 4000 ಕ್ಯೂಸೆಕ್ಸ್‌ ನೀರನ್ನು ತಮಿಳುನಾಡಿಗೆ ಹರಿಸುವ ನೀಚ ಕೆಲಸ ಮಾಡುತ್ತಿದ್ದಾರೆ. ಅರ್ಧಭಾಗ ಎಂದರೂ 2500 ಕ್ಯೂಸೆಕ್ಸ್‌ ಆಗುತ್ತದೆ. ಆದರೆ, 4000 ಕ್ಯೂಸೆಕ್ಸ್‌ ನೀರನ್ನು ಹರಿಸುತ್ತಿರುವುದು ಅನುಮಾನ ಮೂಡಿಸುತ್ತಿದೆ,'' ಎಂದು ಸಂಶಯ ವ್ಯಕ್ತಪಡಿಸಿದರು.

''ರೈತರು ಇದರ ವಿರುದ್ಧ ಸಿಡಿದೇಳಬೇಕು. ಸುಮ್ಮನೆ ಕುಳಿತರೆ ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಒಂದು ಬೆಳೆಯನ್ನೂ ಬೆಳೆಯಲು ಆಗುವುದಿಲ್ಲ. ನೀರು ಬಾರದಿದ್ದರೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತದೆ. ಬೆಳೆಯನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಇಂದು ಸಾಂಕೇತಿಕವಾಗಿ ಹೋರಾಟ ಮಾಡಿ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ. ರೈತರು ನಾಳೆಯಿಂದ ಬೀದಿಗಿಳಿದು ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಬೇಕು,'' ಎಂದು ಆಗ್ರಹಿಸಿದರು.

''ಕಬಿನಿಯಿಂದ ನೀರು ತುಂಬಿ ಹರಿಯುತ್ತಿದೆ. ಇದನ್ನು ಕಾಲುವೆಗಳು, ಕೆರೆಗಳಿಗೆ ಬಿಡಬೇಕು. ತಮಿಳುನಾಡಿಗೋಸ್ಕರ ಜಲಾಶಯ ಕಟ್ಟಿಲ್ಲ. ನಮ್ಮ ತೆರಿಗೆ ಹಣದಿಂದ ಕಟ್ಟಿದ್ದರೂ ತಮಿಳುನಾಡಿಗೆ ನೀರು ಬಿಡುವ ಕೆಲಸ ಮಾಡುತ್ತಿದ್ದಾರೆ. ತಕ್ಷಣವೇ ನೀರನ್ನು ಕಡಿಮೆ ಮಾಡದಿದ್ದರೆ ತಾಲೂಕು ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸಬೇಕಾಗುತ್ತದೆ,'' ಎಂದು ಎಚ್ಚರಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಪ್ರಧಾನ ಕಾರ್ಯದರ್ಶಿ ಕಿರುಗಸೂರು ಶಂಕರ್‌ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ