ಆ್ಯಪ್ನಗರ

‘ಮೈಸೂರಿಗೆ ಕಮಿಷನರ್ ಕಚೇರಿ‌ ಮಂಜೂರು ಮಾಡಿದ್ದು ಸಿದ್ದರಾಮಯ್ಯ ಸಾಹೇಬ್ರು’; ಸಿದ್ದು ನೆನೆದ ಪ್ರತಾಪ್‌ ಸಿಂಹ

ಹೌದು ನಿನ್ನೆ ಮೈಸೂರಿನಲ್ಲಿ ಉದ್ಘಾಟನೆ ಮಾಡಿದ ಕಮಿಷನರ್ ಕಚೇರಿಯನ್ನು ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು. ಸಂಸದನಾಗಿ ನಾನು ಪಾಲ್ಗೊಂಡ ಮೊದಲ ಸರ್ಕಾರಿ ಕಾರ್ಯಕ್ರಮವೂ ಅದಾಗಿತ್ತು. ಖಂಡಿತ ನೆನಪು ಮಾಡಿಕೊಳ್ಳುತ್ತಿದ್ದೆ, ಭಾಷಣ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಅನ್ಯಥಾ ಭಾವಿಸಬೇಡಿ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

Vijaya Karnataka Web 25 Nov 2020, 2:23 pm
ಮೈಸೂರು: ಮಂಗಳವಾರ ಮೈಸೂರಿನಲ್ಲಿ ಉದ್ಘಾನೆಗೊಂಡ ಪೊಲೀಸ್‌ ಕಮಿಷನರ್ ಕಚೇರಿಯನ್ನು ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು. ಇದಕ್ಕಾಗಿ ಸಿದ್ದರಾಮಯ್ಯ ಸರ್‌ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.
Vijaya Karnataka Web pratap simha


ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅಧಿಕಾರದ ಸ್ಥಾನದಲ್ಲಿ ಪಲ್ಲಟ ಸಹಜ, ಆದರೆ ಆಡಳಿತ ನಿರಂತರ. ಹೌದು ನಿನ್ನೆ ಮೈಸೂರಿನಲ್ಲಿ ಉದ್ಘಾಟನೆ ಮಾಡಿದ ಕಮಿಷನರ್ ಕಚೇರಿಯನ್ನು ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು. ಸಂಸದನಾಗಿ ನಾನು ಪಾಲ್ಗೊಂಡ ಮೊದಲ ಸರ್ಕಾರಿ ಕಾರ್ಯಕ್ರಮವೂ ಅದಾಗಿತ್ತು. ಖಂಡಿತ ನೆನಪು ಮಾಡಿಕೊಳ್ಳುತ್ತಿದ್ದೆ, ಭಾಷಣ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಉಸ್ತುವಾರಿ ಸಚಿವರಿಗೆ ಸಿದ್ದರಾಮಯ್ಯ ಸಾಹೇಬರ ಹೆಸರು ಹೇಳಿ ಅಂದಿದ್ದೆ, ವಿಳಂಬದಿಂದಾಗಿ ಅವರೂ ಭಾಷಣ ಮಾಡಲಿಲ್ಲ. ಅನ್ಯಥಾ ಭಾವಿಸಬೇಡಿ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪತ್ತೆಯಾಗಿರೋ 3 ಕೋಟಿ ರೂ. ಮೌಲ್ಯದ 6 ಕೆ.ಜಿ ಚಿನ್ನಕ್ಕೆ ವಾರಸುದಾರರೇ ಇಲ್ಲ..!

ಪಾರಂಪರಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ಮೈಸೂರು ನಗರ ಪೊಲೀಸ್‌ ಆಯುಕ್ತರ ನೂತನ ಕಚೇರಿ ಕಟ್ಟಡ ಹಾಗೂ 108 ವಸತಿ ಗೃಹಗಳನ್ನು ನಿನ್ನೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದರು. ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಗರದ ನಜರ್‌ಬಾದ್‌ನಲ್ಲಿ ನಿರ್ಮಿಸಲಾಗಿರೋ ಈ ಕಟ್ಟಡವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ 2013ರ ಡಿಸೆಂಬರ್‌ನಲ್ಲಿ ಮಂಜೂರಾತಿಯನ್ನು ನೀಡಿ 16.76 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದ್ದರು. ಬಳಿಕ 2018ರ ಜನವರಿಯಲ್ಲಿ ಹೆಚ್ಚುವರಿಯಾಗಿ 2.60 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದರು.

ವೃತ್ತಿಪರ ಆಡಳಿತ ನೀಡಲು ಪೊಲೀಸರಿಗೆ ಸಿಎಂ ಸಲಹೆ | ಮೈಸೂರು ಆಯುಕ್ತರ ನೂತನ

ಕಟ್ಟಡದ ವಿಶೇಷ:
ನೂತನ ಕಟ್ಟಡದ ನೆಲಮಹಡಿಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೊಠಡಿ, ನಗರ ಅಪರಾಧ ದಾಖಲಾತಿ ವಿಭಾಗ, ವಿದೇಶಿಯರ ಶಾಖೆ, ಪಾಸ್‌ಪೋರ್ಟ್‌, ಪೊಲೀಸ್‌ ವೆರಿಫಿಕೇಶನ್‌ ಒಳಗೊಂಡ ನಗರ ವಿಶೇಷ ವಿಭಾಗ, ಕಂಪ್ಯೂಟರ್‌ ಫೋಟೋಗ್ರಫಿ ಶಾಖೆ, ರೆಕಾರ್ಡ್‌ ರೂಂ, ಕೆಫೆಟೆರಿಯಾಗಳು ಇರಲಿವೆ. ಮೊದಲ ಮಹಡಿಯಲ್ಲಿ ಪೊಲೀಸ್‌ ಆಯುಕ್ತರ ಕೊಠಡಿ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ, ಕಾನೂನು ಮತ್ತು ಆದೇಶ ವಿಭಾಗ, ರಿಸೆಪ್ಶನ್‌ ಡೆಸ್ಕ್‌, ಸುಸಜ್ಜಿತ ಸಭಾಂಗಣ, ವೈರ್‌ಲೆಸ್‌ ವಿಭಾಗ, ಡಯಲ್‌ 100, ಸುರಕ್ಷಾ ಆ್ಯಪ್‌, ಟ್ರಾಫಿಕ್‌ ಆಟೋಮೇಷನ್‌ ಕೇಂದ್ರ, ಸಿಸಿಟಿವಿ ವಿಭಾಗ, ಡಿಸಿಪಿ ಕೊಠಡಿ, ಗ್ರಂಥಾಲಯ ಹಾಗೂ ಬೆರಳು ಮುದ್ರೆ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮೈಸೂರು ಪೊಲೀಸ್‌ ಆಯುಕ್ತರ ಕಚೇರಿ ಉದ್ಘಾಟನೆಗೆ ಕೊನೆಗೂ ಕೂಡಿ ಬಂದ ಮುಹೂರ್ತ..!

19ನೇ ಶತಮಾನದ ಪಾರಂಪರಿಕ ಶೈಲಿ ಕಲೋನಿಯಲ್‌ ಮತ್ತು ಇಂಡೋ ಸಾರ್ಸನಿಕ್‌ ಶೈಲಿಯಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಿಸಲಾಗಿದೆ. ಒಟ್ಟು 45 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವು ವಿಶಾಲವಾದ ಆವರಣವನ್ನು ಹೊಂದಿದೆ. 150 ಆಸನಗಳ ಸಾಮರ್ಥ್ಯವಿರುವ ಸಭಾಂಗಣ, ಎರಡು ಮಹಡಿ, ಲಿಫ್ಟ್‌ಗಳನ್ನು ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ