ಹಾಗೆ ನೋಡಿದರೆ ರಾಜ್ಯದಲ್ಲೇ ಅತಿ ಹೆಚ್ಚು ಲಸಿಕೆ ವಿತರಣೆ ಆಗಿರುವ ಪ್ರಥಮ ಜಿಲ್ಲೆ ಮೈಸೂರು. ಆದರೂ ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಮೈಸೂರು ಮುಂದಿದೆ. ಏನು ಇದಕ್ಕೆ ಕಾರಣ? ಮೈಸೂರಿನಲ್ಲಿ ಮತ್ತೊಂದು ವಾರ ಲಾಕ್ಡೌನ್ ಮುಂದುವರಿಸಿದ್ದು ಯಾಕೆ? ಪಾಸಿಟಿವಿಟಿ ರೇಟ್ ಹೆಚ್ಚಾಗಲು ಜಿಲ್ಲಾಡಳಿತ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ ಸಹಜವಾಗಿಯೇ ಜನರ ಮನಸ್ಸಿನಲ್ಲಿದೆ. ಅದಕ್ಕೆ ಐದು ಕಾರಣ ಹೀಗಿವೆ..
1 - ಏಕಾಏಕಿ ಟೆಸ್ಟಿಂಗ್ ನಿಲ್ಲಿಸಿದ್ದು..
ಮೈಸೂರಿನಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಮಿತ್ರವಾಗಿ ಜಿಲ್ಲಾಡಳಿತ ಪರಿವರ್ತಿಸಿತು. ಇದು ಒಳ್ಳೆಯ ನಿರ್ಧಾರವಾದರೂ ಒಮ್ಮೆಲೇ ಟೆಸ್ಟಿಂಗ್ ಪ್ರಮಾಣವನ್ನು ಕಡಿಮೆ ಮಾಡಿದ್ದು ಸಮಸ್ಯೆ ತಂದೊಡ್ಡಿತು. 8 ಸಾವಿರ ಟೆಸ್ಟಿಂಗ್ 4 ಸಾವಿರಕ್ಕೆ ಇಳಿಯಿತು. ಮೈಸೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಲು ಮೊದಲ ಕಾರಣವಿದು.
2 - ರಾಜಕಾರಣಿ-ಅಧಿಕಾರಿಗಳಲ್ಲಿ ಸಮನ್ವಯತೆ ಕೊರತೆ
ಕೊರೊನಾ ತಾಂಡವವಾಡುವ ಸಮಯದಲ್ಲೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ ಸಮನ್ವಯತೆ ಕಂಡು ಬರಲಿಲ್ಲ. ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಲು ಶುರು ಮಾಡಿದರು. ಇದರಿಂದ ಕೊರೊನಾ ನಿರ್ವಹಣೆ ಹಳ್ಳ ಹಿಡಿಯಿತು. ಈ ಹಿಂದೆ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ನಡುವೆ ನಡೆದ ಜಟಾಪಟಿ, ರಾಜೀನಾಮೆ ಪ್ರಹಸನ.. ಇದಕ್ಕೂ ಮುನ್ನ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ.. ಇನ್ನೊಂದೆಡೆ, ಸಾರಾ ಮಹೇಶ್ ಕೂಡಾ ಡಿಸಿ ವಿರುದ್ಧ ಹರಿಹಾಯ್ದಿದ್ದು.. ಇವೆಲ್ಲಾ ಘಟನೆಗಳು ಜನ ಮಾನಸದಲ್ಲಿ ಹಸಿರಾಗಿಯೇ ಇದೆ.
3 - ಅಸಮರ್ಪಕ ಹೋಂ ಐಸೋಲೋಷನ್ ನಿರ್ವಹಣೆ
ಕೊರೊನಾ ಮೊದಲ ಅಲೆಯಲ್ಲಿ ಹೋಂ ಐಸೋಲೇಷನ್ ನಿರ್ವಹಣೆ ಉತ್ತಮವಾಗಿತ್ತು. ಆದರೆ, ಎರಡನೇ ಅಲೆಯಲ್ಲಿ ಇದು ಸಾಧ್ಯವಾಗಲಿಲ್ಲ. ಒಂದು ಮನೆಯಲ್ಲೇ ಮೂರಕ್ಕೂ ಹೆಚ್ಚು ಜನರು ಹೋಂ ಐಸೋಲೇಷನ್ಗೆ ಒಳಗಾದರು. ಜಿಲ್ಲಾಡಳಿತ ಇವರ ಮೇಲೆ ನಿಗಾ ಇಡಲು ಸೋತಿತು. ಹೀಗಾಗಿ ಸೋಂಕಿನ ಪ್ರಸರಣ ಹೆಚ್ಚಾಯಿತು.
4 - ಗ್ರಾಮೀಣ ಭಾಗದಲ್ಲೂ ವಿಫಲ
ಇವತ್ತಿಗೂ ಮೈಸೂರಿನಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣ ಕಂಡು ಬರುತ್ತಿವೆ. ಬೆಂಗಳೂರು ಸೇರಿದಂತೆ ಬೇರೆ ಭಾಗದಿಂದ ಬಂದವರನ್ನು ಐಸೋಲೇಷನ್ ಮಾಡಲಿಲ್ಲ. ಇದರಿಂದ ಎ ಸಿಮ್ಟಮ್ಯಾಟಿಕ್ ಇರುವವರ ಸಂಖ್ಯೆ ಹೆಚ್ಚಾಯಿತು. ಇವರಿಂದ ಸೋಂಕಿನ ಪ್ರಮಾಣವೂ ದ್ವಿಗುಣಗೊಂಡಿತು. ಸರಿಯಾದ ಸಮಯಕ್ಕೆ ಇವರ ಟೆಸ್ಟಿಂಗ್ ಆಗಲಿಲ್ಲ.
5 - ಪ್ರಾಥಮಿಕ ಸಂಪರ್ಕದವರನ್ನು ಪತ್ತೆ ಹಚ್ಚದಿರುವುದು
ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರವನ್ನು ಸರಿಯಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಹಾಗೂ ಹೋಂ ಐಸೋಲೇಷನ್ ಮಾಡದ ಪರಿಣಾಮ ಸೋಂಕು ಎಲ್ಲೆಡೆ ಪಸರಿಸಿತು. ಇವರನ್ನು ಬೇಗನೆ ಗುರುತಿಸಿ ಹೋಂ ಐಸೋಲೇಷನ್ಗೆ ಒಳಪಡಿಸಿದ್ದರೆ ಸೋಂಕು ಹರಡುವುದನ್ನು ತಪ್ಪಿಸಬಹುದಿತ್ತು.