ಆ್ಯಪ್ನಗರ

ಮೈಸೂರಲ್ಲಿ ಯೋಗ ದಿನಾಚರಣೆ: ಗಿನ್ನಿಸ್ ದಾಖಲೆಗೆ ಕೈಚೆಲ್ಲಿದ ಜಿಲ್ಲಾಡಳಿತ

ಕೋಟಾ ದಾಖಲೆಯನ್ನು ಇನ್ನು 15 ದಿನಗಳ ಅವಧಿಯಲ್ಲಿ ತಯಾರಿ ನಡೆಸಿ ಮುರಿಯುವುದು ಕಷ್ಟ ಎಂದು ಭಾವಿಸಿ ಮೈಸೂರು ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ.

Vijaya Karnataka Web 4 Jun 2019, 7:11 pm
ಮೈಸೂರು: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21ರಂದು ನಡೆಯುವ ಸಾಮೂಹಿಕ ಯೋಗ ಪ್ರದರ್ಶನದ ಬಗ್ಗೆ ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸದಿರಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದೆ.
Vijaya Karnataka Web ಜಿಟಿ ದೇವೇಗೌಡ
ಜಿಟಿ ದೇವೇಗೌಡ


ಮೈಸೂರಿನಲ್ಲಿ 2017ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ನಡೆದಿದ್ದ ಯೋಗ ಪ್ರದರ್ಶನದಲ್ಲಿ 55,506 ಮಂದಿ ಪಾಲ್ಗೊಂಡು ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಆಗಿತ್ತು. ರಾಜಸ್ಥಾನದ ಕೋಟಾದಲ್ಲಿ 2018ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 1,00,984 ಮಂದಿ ಭಾಗವಹಿಸಿ ಮೈಸೂರಿನ ಗಿನ್ನಿಸ್ ದಾಖಲೆಯನ್ನು ಮುರಿಯಲಾಯಿತು. ಈ ಬಾರಿ ಕೋಟಾ ದಾಖಲೆಯನ್ನು ಮುರಿಯಬೇಕೆಂದು ಮೈಸೂರಿನ ಸಂಘಸಂಸ್ಥೆಗಳು ತಯಾರಿ ನಡೆಸಿದ್ದವು. ಇಂತಹ ವೇಳೆಯಲ್ಲಿ ಮೈಸೂರು ಜಿಲ್ಲಾಡಳಿತ ಈ ಬಾರಿ ಗಿನ್ನಿಸ್ ದಾಖಲೆಗೆ ಹೋಗದಿರಲು ನಿರ್ಧಸಿರುವುದು ನಿರಾಸೆ ತಂದಿದೆ.

ಕೋಟಾ ದಾಖಲೆಯನ್ನು ಇನ್ನು 15 ದಿನಗಳ ಅವಧಿಯಲ್ಲಿ ತಯಾರಿ ನಡೆಸಿ ಮುರಿಯುವುದು ಕಷ್ಟ ಎಂದು ಭಾವಿಸಿ ಮೈಸೂರು ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಉಪಸ್ಥಿತಿಯಲ್ಲಿ ಮೈಸೂರಿನಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಿದ್ದತೆಯ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಚರ್ಚಿಸಲಾಯಿತು.

ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಭೆಯಲ್ಲಿ ಮಾತನಾಡಿ, ಈ ಬಾರಿ ಯೋಗ ಪ್ರದರ್ಶನದ ಬಗ್ಗೆ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವುದಿಲ್ಲ. ಆದರೆ, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸುತ್ತೇವೆ. ಮೈಸೂರಿನಲ್ಲಿರುವ ಕೇಂದ್ರ ಸರಕಾರದ ನೌಕರರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರತ್ಯೇಕವಾಗಿ ಯೋಗ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಅವರೂ ಕೂಡ ಜಿಲ್ಲಾಡಳಿತ ನಡೆಸುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು.

ಮೈಸೂರು ಅರಮನೆ ಆವರಣದಲ್ಲಿ ಜೂನ್ 9ರಂದು, ರೇಸ್‌ಕೋರ್ಸ್ ಆವರಣದಲ್ಲಿ ಜೂನ್ 16ರಂದು ಸಾಮೂಹಿಕ ಯೋಗ ಪ್ರದರ್ಶನದ ರಿಹರ್ಸಲ್ ನಡೆಯಲಿದೆ. ಜೂನ್ 21ರಂದು ನಡೆಯುವ ಯೋಗ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರದಲ್ಲಿರುವ ರಾಜ್ಯದ ಒಬ್ಬ ಸಚಿವರನ್ನು ಆಹ್ವಾನಿಸಬೇಕು. ಸಾಮೂಹಿಕ ಯೋಗ ಪ್ರದರ್ಶನಕ್ಕೆ 1.25ಲಕ್ಷ ಮಂದಿ ಭಾಗವಹಿಸುವಂತೆ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ನಾಲ್ಕು ವರ್ಷದಿಂದ ಆಯುಷ್ ತಲಾ ಒಂದು ಲಕ್ಷ ರೂಪಾಯಿ ನೀಡಿದರೆ, ಎರಡು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆ ತಲಾ 40 ಲಕ್ಷ ರೂ. ನೀಡುತ್ತಿದೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇರುವುದರಿಂದ ಅಂದಾಜು ವೆಚ್ಚ 1.20 ಕೋಟಿ ರೂಗಳಾಗುವ ಸಾಧ್ಯತೆ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ