ಆ್ಯಪ್ನಗರ

ರೈಲಿನಲ್ಲಿಅರೆನಗ್ನವಾಗಿ ಓಡಾಡಿದ ಬಿಹಾರ ಶಾಸಕ!

ಗೋಪಾಲ್‌ ಮಂಡಲ್‌ ಅಂತಹ ಅಸಭ್ಯತೆ ಪ್ರದರ್ಶಿಸಿದ ಶಾಸಕ. ''ಏನ್‌ ಸ್ವಾಮಿ ಇದು ಅವತಾರ'' ಎಂದು ಪ್ರಶ್ನಿಸಿದ ಸಹ ಪ್ರಯಾಣಿಕರ ಮೇಲೆಯೇ ಎಗರಿಬಿದ್ದು ಗಲಾಟೆ ಮಾಡಿದ್ದಾರೆ ಬಿಹಾರದ ಜೆಡಿಯು ಶಾಸಕ.

Vijaya Karnataka Web 3 Sep 2021, 10:30 pm
ಹೊಸದಿಲ್ಲಿ: ಬಿಹಾರದ ಆಡಳಿತಾರೂಢ ಜೆಡಿಯು ಶಾಸಕರೊಬ್ಬರು ಪಟನಾದಿಂದ ಹೊಸದಿಲ್ಲಿಗೆ ಹೊರಟಿದ್ದ ರೈಲಿನಲ್ಲಿ ಮೈಮೇಲಿನ ಬಟ್ಟೆಯನ್ನೆಲ್ಲ ಕಳಚಿಟ್ಟು ಒಳ ಉಡುಪಿನಲ್ಲಿಯೇ ಓಡಾಡಿ ಅಸಭ್ಯತೆ ಪ್ರದರ್ಶಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
Vijaya Karnataka Web ಗೋಪಾಲ್‌ ಮಂಡಲ್‌
ಗೋಪಾಲ್‌ ಮಂಡಲ್‌


ಗೋಪಾಲ್‌ ಮಂಡಲ್‌ ಅಂತಹ ಅಸಭ್ಯತೆ ಪ್ರದರ್ಶಿಸಿದ ಶಾಸಕ. ''ಏನ್‌ ಸ್ವಾಮಿ ಇದು ಅವತಾರ'' ಎಂದು ಪ್ರಶ್ನಿಸಿದ ಸಹ ಪ್ರಯಾಣಿಕರ ಮೇಲೆಯೇ ಎಗರಿಬಿದ್ದು ಗಲಾಟೆ ಮಾಡಿದ್ದಾರೆ.

ದಿಲ್ಲಿಗೆ ಹೊರಟಿದ್ದ 'ತೇಜಸ್‌ ರಾಜಧಾನಿ ಎಕ್ಸ್‌ಪ್ರೆಸ್‌' ರೈಲಿನ ಪ್ರಥಮ ದರ್ಜೆ ಎಸಿ ಬೋಗಿಯಲ್ಲಿಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೈಲು ಪಟನಾದಿಂದ ಸ್ವಲ್ಪ ದೂರ ಕ್ರಮಿಸಿತ್ತು. ಪ್ರಶಾಂತವಾಗಿದ್ದ ಎಸಿ ಬೋಗಿಯಲ್ಲಿಶಾಸಕ ಮಂಡಲ್‌ ಅರೆನಗ್ನ ಸ್ಥಿತಿಯಲ್ಲಿದಿಢೀರನೆ ಪ್ರತ್ಯಕ್ಷವಾದರು.

ಕಿಂಚಿತ್ತೂ ಮುಜುಗರ ಪಟ್ಟುಕೊಳ್ಳದೇ ಒಳ ಉಡುಪಿನಲ್ಲಿಯೇ ಬೋಗಿ ತುಂಬ ಓಡಾಡಿದ ಶಾಸಕರು, ''ಏನ್‌ ಸ್ವಾಮಿ ಇದು? ಬಟ್ಟೆ ಧರಿಸಿ, ಮರ್ಯಾದೆಯಿಂದ ಇರಿ,'' ಎಂದು ಸಲಹೆ ನೀಡಲು ಬಂದ ಪ್ರಯಾಣಿಕರ ಮೇಲೆಯೇ ತಿರುಗಿ ಬಿದ್ದರು.

ಪ್ರಯಾಣಿಕರು ದಬಾಯಿಸಲು ಮುಂದಾದಾಗ, ಶಾಸಕ ಮಹಾಶಯರು ''ಶೂಟ್‌ ಮಾಡ್ತೇನೆ ಹುಷಾರ್‌,'' ಎಂದು ಧಮಕಿ ಹಾಕಿದರು. ಕೈಕೈ ಮಿಲಾಯಿಸುವ ಹಂತಕ್ಕೆ ಹೋದಾಗ ರೈಲ್ವೆ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು ಎಂದು ಮೂಲಗಳು ತಿಳಿಸಿವೆ.

ವಿಷಯ ಬಹಿರಂಗವಾಗಿ ಶುಕ್ರವಾರ ಹೊಸದಿಲ್ಲಿಯಲ್ಲಿ ಅವರನ್ನು ಭೇಟಿ ಮಾಡಿದ ಪತ್ರಕರ್ತರು, ''ದೊಡ್ಡ ಮನುಷ್ಯರಾದ ನೀವು ಆ ರೀತಿ ಅರೆಬೆತ್ತಲಾಗಿ ರೈಲಿನಲ್ಲಿಓಡಾಡುವುದು ತಪ್ಪಲ್ವೇ,'' ಎಂದು ಪತ್ರಕರ್ತರು ಪ್ರಶ್ನಿಸಿದರು. ''ನನಗೆ ಹೊಟ್ಟೆ ಸರಿಯಿರಲಿಲ್ಲ. ರೈಲು ಹತ್ತಿದ ಸ್ವಲ್ಪ ಸಮಯದಲ್ಲೇ ಹೊಟ್ಟೆ ತೊಳಿಸಲು ಆರಂಭಿಸಿತು. ಅವಸರದಲ್ಲಿ ಬಟ್ಟೆ ಬಿಚ್ಚಿ ಹಾಕಿ ಬಾತ್‌ ರೂಮ್‌ಗೆ ಓಡಿದೆ'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ