ಆ್ಯಪ್ನಗರ

ದಿಲ್ಲಿ ಗಲಭೆ: ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೆಸರು

ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆಯ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರ ಹೆಸರು ಪ್ರಸ್ತಾಪಿಸಲಾಗಿದ್ದು, ಪ್ರಚೋದನಾಕಾರಿ ಭಾಷಣ ಹಿನ್ನೆಲೆ ಆರೋಪ ಪಟ್ಟಿಯಲ್ಲಿ ಖುರ್ಷಿದ್‌ ಹೆಸರು ದಾಖಲಾಗಿದೆ ಎನ್ನಲಾಗಿದೆ.

Agencies 24 Sep 2020, 3:55 pm
ಹೊಸದಿಲ್ಲಿ: ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರ ಹೆಸರನ್ನು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಸಲ್ಮಾನ್‌ ಖುರ್ಷಿದ್‌ ಅವರ ಹೆಸರು ಪೊಲೀಸರ ಆರೋಪ ಪಟ್ಟಿಯಲ್ಲಿ ದಾಖಲಾಗಿದೆ ಎನ್ನಲಾಗಿದೆ.
Vijaya Karnataka Web congress salman khurshid named in delhi riots chargesheet
ದಿಲ್ಲಿ ಗಲಭೆ: ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೆಸರು


ಸೆಪ್ಟೆಂಬರ್ 17ರಂದು ಸಲ್ಲಿಸಲಾದ 17,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿಯೊಬ್ಬರ ಹೇಳಿಕೆ ಆಧರಿಸಿ ಸಲ್ಮಾನ್‌ ಖುರ್ಷಿದ್‌ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ. ಉಮರ್ ಖಲಿದ್, ಸಲ್ಮಾನ್ ಖುರ್ಷಿದ್, ನದೀಮ್ ಖಾನ್ ಮತ್ತಿತರರು ಸಿಎಎ, ಎನ್‌ಆರ್‌ಸಿ ವಿರೋಧಿ ರ‍್ಯಾಲಿಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಸಾಕ್ಷಿ ತಿಳಿಸಿದೆ.

ಚಾರ್ಜ್‌ಶೀಟ್‌ನಲ್ಲಿ ಪ್ರಚೋದನಕಾರಿ ಭಾಷಣಗಳ ನಿಖರ ಸ್ವರೂಪವನ್ನು ಪೊಲೀಸರು ಉಲ್ಲೇಖಿಸಿಲ್ಲ. ಸಾಕ್ಷಿಯನ್ನು ಕೂಡ ಪೊಲೀಸರು ಗೌಪ್ಯವಾಗಿಟ್ಟಿದ್ದು, ರಕ್ಷಣಾತ್ಮಕ ಸಾಕ್ಷಿ ಎಂದು ಕರೆದಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಿರುವ ಸಾಕ್ಷಿ ಗಲಭೆಗೆ ಸಂಚು ರೂಪಿಸಿದ ತಂಡದಲ್ಲಿ ಪ್ರಮುಖ ಭಾಗವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 164ರ ಪ್ರಕಾರ ಸಾಕ್ಷಿ ತನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದು, ಸಾಕ್ಷಿಗೆ ಹೆಚ್ಚಿನ ಕಾನೂನು ತೂಕ ಸಿಕ್ಕಂತಾಗಿದೆ. ಸಲ್ಮಾನ್‌ ಖುರ್ಷಿದ್‌ ಕೂಡ ಪ್ರತಿಭಟನಾ ಸ್ಥಳಗಳಲ್ಲಿ ಪ್ರಚೋದನಾ ಭಾಷಣ ಮಾಡಿದ ಮತ್ತೊಬ್ಬ ಆರೋಪಿಯ ಹೆಸರನ್ನು ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

ದಿಲ್ಲಿ ಗಲಭೆ: ಪೊಲೀಸರಿಂದ 17,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ, 15 ಮಂದಿ ವಿರುದ್ಧ ಗಂಭೀರ ಆರೋಪ

ಪೊಲೀಸರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಲ್ಮಾನ್‌ ಖುರ್ಷಿದ್‌, ನಾನು ನೀಡಿದ ಪ್ರಚೋದನಕಾರಿ ಹೇಳಿಕೆ ಏನು ಎಂದು ತಿಳಿಯಲು ಬಹಳ ಕುತೂಹಲವಿದೆ. ನೀವು ಕಸ ಸಂಗ್ರಹಿಸುತ್ತಿದ್ದರೆ, ನಿಮಗೆ ಬಹಳಷ್ಟು ಹೊಲಸು ಸಿಗುತ್ತದೆ. ನಾನು ಸಾಂವಿಧಾನಿಕ ಹಾಗೂ ನ್ಯಾಯಸಮ್ಮತವಾದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ ಎಂದು ಹೇಳಿದ್ದಾರೆ.

ದಿಲ್ಲಿ ಗಲಭೆಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಕುಮ್ಮಕ್ಕು

ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಸಲ್ಮಾನ್‌ ಖುರ್ಷಿದ್‌ ಅತ್ಯುನ್ನತ ಶ್ರೇಣಿಯ ರಾಜಕಾರಣಿಯಾಗಿದ್ದಾರೆ. ಇದರ ಜೊತೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸೇರಿ ಅನೇಕ ಪ್ರಮುಖರ ಹೆಸರು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪವಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈಶಾನ್ಯ ದಿಲ್ಲಿಯಲ್ಲಿ ಗಲಭೆ ಉಂಟಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ