ಆ್ಯಪ್ನಗರ

ದಿಲ್ಲಿಯತ್ತ ರೈತರ ಬೃಹತ್‌ ಜಾಥಾ, ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ; ಮೆಟ್ರೋ, ರೈಲು ಸಂಚಾರ ವ್ಯತ್ಯಯ

ಹರಿಯಾಣ ಗಡಿ ಪ್ರದೇಶಗಳಲ್ಲಿ ದಿಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಹರಿಯಾಣ ಗಡಿಯ ಫರೀದಾಬಾದ್‌ ಮತ್ತು ಸಿಂಘು ಗ್ರಾಮಗಳಲ್ಲಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರ ಜೊತೆಗೆ ಸಿಆರ್‌ಪಿಎಫ್‌ ಯೋಧರನ್ನೂ ನೇಮಿಸಲಾಗಿದೆ.

Agencies 26 Nov 2020, 10:17 am
ಹೊಸದಿಲ್ಲಿ: ಕೇಂದ್ರದ ಮೂರು ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ಪಂಜಾಬ್‌ ಮತ್ತು ಹರಿಯಾಣದ ರೈತ ಸಂಘಟನೆಗಳು ನವೆಂಬರ್‌ 26-27ರಂದು 'ದಿಲ್ಲಿ ಚಲೋ' ಜಾಥಾ ಹಮ್ಮಿಕೊಂಡಿದ್ದು, ಪ್ರತಿಭಟನಾಕಾರರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಾಗಿದೆ.
Vijaya Karnataka Web hisar police human chain dilli chalo
ದಿಲ್ಲಿ ಚಲೋ ಹೆಸರಿನಲ್ಲಿ ಹೊರಟ ರೈತರನ್ನು ತಡೆಯಲು ಹಿಸ್ಸಾರ್‌ನಲ್ಲಿ ಪೊಲೀಸರು ಮಾನವ ಸರಪಳಿ ರಚಿಸಿರುವುದು


ಈಗಾಗಲೇ ಕೋವಿಡ್‌ ಸಾಂಕ್ರಾಮಿಕ ಮುಂದಿಟ್ಟುಕೊಂಡು ದಿಲ್ಲಿ ಪೊಲೀಸ್‌ ಇಲಾಖೆ ಜಾಥಾಕ್ಕೆ ಅನುಮತಿ ನಿರಾಕರಿಸಿದೆ. ರೈತ ಸಂಘಟನೆಗಳ ಮನವಿಗಳನ್ನು ತಿರಸ್ಕರಿಸಲಾಗಿದೆ. ಆದಾಗ್ಯೂ ಅವರು ನಗರವನ್ನು ಸಂಪರ್ಕಿಸುವ ಐದು ಹೆದ್ದಾರಿಗಳಲ್ಲಿ ಜಮಾಯಿಸಿದರೆ ಬಲ ಪ್ರಯೋಗ ಅನಿವಾರ್ಯವಾಗುತ್ತದೆ ಎಂದು ಇಲಾಖೆ ಟ್ವಿಟರ್‌ ಮೂಲಕ ಎಚ್ಚರಿಸಿದೆ.

ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ದಿಲ್ಲಿ ಹರಿಯಾಣ ಗಡಿಯ ಫರೀದಾಬಾದ್‌ ಮತ್ತು ಸಿಂಘು ಗ್ರಾಮಗಳಲ್ಲಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರ ಜೊತೆಗೆ ಸಿಆರ್‌ಪಿಎಫ್‌ ಯೋಧರನ್ನೂ ಇಲ್ಲಿ ನೇಮಿಸಲಾಗಿದೆ. ನಾಲ್ಕರಿಂದ ಐದು ಜಾಗಗಳಲ್ಲಿ ಬ್ಯಾರಿಕೇಡ್‌ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ.

“ರೈತರು ಇಲ್ಲಿಗೆ ಬಂದರೆ ನಾವು ಅವರ ಜೊತೆ ಸಂಧಾನ ನಡೆಸಲು ಯತ್ನಿಸಲಿದ್ದೇವೆ,” ಎಂದು ಸಬ್‌ ಇನ್ಸ್‌ಪೆಕ್ಟರ್‌ ಪೃಥ್ವಿರಾಜ್‌ ಮೀನಾ ಹೇಳಿದ್ದಾರೆ.

ಇದೇ ವೇಳೆ ಈ ಪ್ರದೇಶದ ಮೆಟ್ರೋ ಸೇವೆಯನ್ನು ಮಧ್ಯಾಹ್ನ 2 ಗಂಟೆವರೆಗೆ ರದ್ದುಗೊಳಿಸಲಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಿಲ್ಲಿ ಮೆಟ್ರೋ ರೈಲು ನಿಗಮ ಟ್ಟೀಟ್‌ ಮಾಡಿದೆ. ಇನ್ನು ರೈಲುಗಳು ಕೂಡ ದಿಲ್ಲಿಗೂ ಎರಡರಿಂದ ಮೂರು ನಿಲ್ದಾಣಗಳ ಹಿಂದೆಯೇ ನಿಲುಗಡೆಯಾಗಲಿವೆ.

ದಿಲ್ಲಿಯತ್ತ ಹೊರಟಿದ್ದ ಪಂಜಾಬ್‌ನ ಪ್ರತಿಭಟನಾಕಾರರನ್ನು ಹರಿಯಾಣ ಗಡಿಯಲ್ಲಿ ತಡೆಯಲಾಗಿದೆ. ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಆದೇಶದ ಹಿನ್ನೆಲೆಯಲ್ಲಿ ಪಂಜಾಬ್‌ ಜೊತೆಗಿನ ಗಡಿಯನ್ನು ಎರಡು ದಿನಗಳ ಕಾಲ ಸಂಪೂರ್ಣ ಬಂದ್‌ ಮಾಡಲಾಗಿದ್ದು, ಗಡಿಯಲ್ಲಿ ಭಾರಿ ಪೊಲೀಸರನ್ನು ಜಮಾವಣೆ ಮಾಡಲಾಗಿದೆ. ಜೊತೆಗೆ ನೆರೆ ರಾಜ್ಯದೊಂದಿಗಿನ ಬಸ್‌ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.

ಆದರೆ ಪಟ್ಟು ಬಿಡದ ಪಂಜಾಬ್‌ ರೈತರು ಗಡಿಯಲ್ಲೇ ಧರಣಿ ಕೂತಿದ್ದಾರೆ. ಅಡುಗೆಗೆ ಬೇಕಾದ ಸಾಮಾನುಗಳು ಹಾಗೂ ಚಳಿಯ ಕಾರಣಕ್ಕೆ ಕಟ್ಟಿಗೆ, ಹೊದಿಕೆಗಳ ಸಿದ್ಧತೆಯೊಂದಿಗೆ ಬಂದಿರುವ ರೈತರು ಗಡಿ ತೆರೆಯುವವರೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇನ್ನೊಂದು ಕಡೆ ಮಧ್ಯ ಪ್ರದೇಶದಿಂದ ಮೇಧಾ ಪಾಟ್ಕರ್‌ ನೇತೃತ್ವದಲ್ಲಿ ದಿಲ್ಲಿಯತ್ತ ಹೊರಟಿದ್ದ ರೈತರ ತಂಡವನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ತಡೆಯಲಾಗಿದೆ. ಮೇಧಾ ಪಾಟ್ಕರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ