ಆ್ಯಪ್ನಗರ

ದಿಲ್ಲಿಯಲ್ಲಿ ಮತ್ತೊಂದು ಅಕ್ರಮ ಆರೋಪ: ಬಸ್‌ ಖರೀದಿಯಲ್ಲಿ ಎಎಪಿ ಅವ್ಯವಹಾರ? ಸಿಬಿಐ ತನಿಖೆಗೆ ಅನುಮತಿ

DTC Buses Purchase Irregularities: ದಿಲ್ಲಿಯಲ್ಲಿ ಮತ್ತೊಂದು ಭ್ರಷ್ಟಾಚಾರದ ಆರೋಪ ಎಎಪಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಕಿತ್ತಾಟವನ್ನು ಮತ್ತಷ್ಟು ಹೆಚ್ಚಿಸಿದೆ. ಬಸ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತಂತೆ ಸಿಬಿಐ ತನಿಖೆಗೆ ಎಲ್‌ಜಿ ಅನುಮತಿ ನೀಡಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 11 Sep 2022, 3:20 pm

ಹೈಲೈಟ್ಸ್‌:

  • ದಿಲ್ಲಿಯಲ್ಲಿ 1000 ಬಸ್‌ಗಳ ಖರೀದಿಯಲ್ಲಿ ಅಕ್ರಮ ಆರೋಪ
  • ಡಿಟಿಸಿ ಬಸ್ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರದ ದೂರು
  • ಸಿಬಿಐ ತನಿಖೆ ಮನವಿಯನ್ನು ಅಂಗೀಕರಿಸಿದ ಎಲ್‌ಜಿ ಸಕ್ಸೇನಾ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web AAP national convenor Arvind Kejriwal
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿನ ಎಎಪಿ ನೇತೃತ್ವದ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಸಂಘರ್ಷ ಮತ್ತೊಂದು ಹೆಜ್ಜೆ ಮುಂದೆ ಸಾಗಿದೆ. ದಿಲ್ಲಿ ಸರ್ಕಾರವು 1,000 ತಳಮಟ್ಟದ ಬಸ್‌ಗಳನ್ನು ಖರೀದಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬೇಡಿಕೆಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅಂಗೀಕಾರ ನೀಡಿದ್ದಾರೆ.
ಜೂನ್‌ನಲ್ಲಿ ತಮಗೆ ಬಂದಿದ್ದ ದೂರಿನ ಅನ್ವಯ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಸಿಬಿಐ ತನಿಖೆಗೆ ಆದೇಶಿಸುವಂತೆ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ಮನವಿ ಮಾಡಿದ್ದರು. ಈ ಘಟನೆ ದಿಲ್ಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷಕ್ಕೆ ಮತ್ತಷ್ಟು ಕಿಡಿ ಹತ್ತಿಸಿದೆ.
ಸಿಸೋಡಿಯಾ ಮೇಲೆ ದಾಳಿ ಬಳಿಕ ಗುಜರಾತ್‌ನಲ್ಲಿ ಎಎಪಿ ಮತ ಪಾಲು 4% ಹೆಚ್ಚಳ: ಕೇಜ್ರಿವಾಲ್

ಈ ತನಿಖೆಯು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಎಎಪಿ, ಎಲ್‌ಜಿ ಸಕ್ಸೇನಾ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳಿಂದ ಮೊದಲು ತಮ್ಮ ಹೆಸರನ್ನು ಸ್ವಚ್ಛಗೊಳಿಸಿಕೊಳ್ಳಲಿ ಎಂದು ಟೀಕಿಸಿದೆ.

ದಿಲ್ಲಿ ಸಾರಿಗೆ ನಿಗಮವು 1,000 ಕೆಳ ಮೆಟ್ಟಿಲಿನ ಬಸ್‌ಗಳನ್ನು ಖರೀದಿ ಮಾಡಿದ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಬಸ್‌ಗಳ ಖರೀದಿ ಮತ್ತು ಟೆಂಡರ್ ಕರೆದಿರುವುದು ಹಾಗೂ ಅದಕ್ಕೆ ಸಂಬಂಧಿಸಿದ ಸಮಿತಿಗೆ ದಿಲ್ಲಿ ಸಾರಿಗೆ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಲ್ಲಿ ಅಕ್ರಮಗಳು ನಡೆದಿವೆ ಎಂದು ಜೂನ್‌ನಲ್ಲಿ ದೂರು ನೀಡಲಾಗಿತ್ತು.
Manish Sisodia: ಬಿಜೆಪಿ ಅನಕ್ಷರಸ್ಥರ ಪಕ್ಷ, ದೇಶವನ್ನೂ ಹಾಗೆ ಇರಿಸಲು ಬಯಸಿದೆ: ಮನೀಶ್ ಸಿಸೋಡಿಯಾ

ಖರೀದಿಯಲ್ಲಿ ಅಕ್ರಮಗಳನ್ನು ಎಸಗುವ ಸಲುವಾಗಿಯೇ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಅನ್ನು ಟೆಂಡರ್‌ನ ವ್ಯವಸ್ಥಾಪನಾ ಸಲಹೆಗೆ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸಹ ಆರೋಪಿಸಲಾಗಿದೆ. ಈ ದೂರನ್ನು ರಾಷ್ಟ್ರೀಯ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶ ಸರ್ಕಾರದ (ಜಿಎನ್‌ಸಿಟಿಡಿ) ಸಂಬಂಧಿತ ಇಲಾಖೆಗಳಿಂದ ಮುಖ್ಯ ಕಾರ್ಯದರ್ಶಿಗೆ ವರ್ಗಾಯಿಸಲಾಗಿತ್ತು.

ಮುಖ್ಯ ಕಾರ್ಯದರ್ಶಿಯಿಂದ ಆಗಸ್ಟ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ವರದಿ ಸ್ವೀಕರಿಸಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಹಾರ ನಡೆದಿರುವುದನ್ನು ವರದಿ ತೋರಿಸಿತ್ತು. ಇದು ಕೇಂದ್ರ ವಿಚಕ್ಷಣಾ ಆಯೋಗದ ಮಾರ್ಗಸೂಚಿಗಳು ಮತ್ತು ಸಾಮಾನ್ಯ ಹಣಕಾಸು ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ವರದಿ ತಿಳಿಸಿತ್ತು. ದೂರಿನ ಬಳಿಕ ಬಸ್‌ಗಳ ಖರೀದಿಯ ಟೆಂಡರ್ ಅನ್ನು ರದ್ದುಗೊಳಿಸಲಾಗಿತ್ತು.
ದಿಲ್ಲಿ ವಿಧಾನಸಭೆಯಲ್ಲಿ ಬಿಜೆಪಿ, ಎಎಪಿ ಅಹೋರಾತ್ರಿ ಪ್ರತಿಭಟನೆ: ಎಲ್‌ಜಿ ವಿರುದ್ಧ ಭ್ರಷ್ಟಾಚಾರ ಆರೋಪ

ಎಎಪಿ ತಿರುಗೇಟು"ಬಸ್‌ಗಳ ಖರೀದಿಯೇ ನಡೆದಿಲ್ಲ. ಟೆಂಡರ್‌ಗಳನ್ನು ರದ್ದುಮಾಡಲಾಗಿದೆ. ದಿಲ್ಲಿಗೆ ಹೆಚ್ಚು ಸುಶಿಕ್ಷಿತ ಎಲ್‌ಜಿಯ ಅಗತ್ಯವಿದೆ. ತಾನು ಏನು ಹಾಡುತ್ತಿದ್ದೇನೆ ಎನ್ನುವುದರ ಪರಿಕಲ್ಪನೆಯೇ ಈ ವ್ಯಕ್ತಿಗೆ ಇಲ್ಲ. ಎಲ್‌ಜಿ ಸ್ವತಃ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅದರ ಗಮನ ಬೇರೆಡೆ ಸೆಳೆಯಲು ಇಂತಹ ತನಿಖೆಗಳನ್ನು ನಡೆಸುತ್ತಿದ್ದಾರೆ. ಎಲ್ಲ ತನಿಖೆಗಳಿಂದಲೂ ಇದುವರೆಗೆ ಏನೂ ಸಿಕ್ಕಿಲ್ಲ. ಮೂವರು ಸಚಿವರ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಮಾಡಿದ ಬಳಿಕ, ನಾಲ್ಕನೇ ಸಚಿವರ ವಿರುದ್ಧ ಅವರು ದೂರು ನೀಡಿದ್ದಾರೆ" ಎಂದು ಎಲ್‌ಜಿ ಸಕ್ಸೇನಾ ವಿರುದ್ಧ ಎಎಪಿ ಹರಿಹಾಯ್ದಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ